ಮದ್ಯ, ಮಾಂಸ ತ್ಯಜಿಸಿದರೆ ಮಹಿಳೆ ಸೇಫ್

'ಕಾನೂನಿನಿಂದ ಮಾತ್ರ ರೇಪ್ ಕೇಸ್ ತಡೆಗಟ್ಟಲು ಸಾಧ್ಯವಿಲ್ಲ. ನನ್ನ ಪ್ರಕಾರ ರೇಪ್ ಪ್ರಕರಣಗಳು ಕಡಿಮೆಯಾಗಬೇಕಾದರೆ ಜನರು ಮಾಂಸಾಹಾರ ಸೇವಿಸದಿದ್ದರೆ ಹಾಗೂ ಮದ್ಯಪಾನ ಮಾಡುವುದನ್ನು ನಿಲ್ಲಿಸಿದರೆ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕುಸಿಯಲಿದೆ ಎಂದು ಸ್ವಾಮಿ ಅಗ್ನಿವೇಶ್ ಹೇಳಿದರು.
ಅನೇಕ ಕಡೆ ಕ್ರೈಂ ಪ್ರಮಾಣ ಹೆಚ್ಚಾಗಲು ಮದ್ಯಪಾನ ಸೇವನೆ ಕಾರಣ ಎಂಬುದು ಅಂಕಿ ಅಂಶಗಳಿಂದ ಸಾಬೀತಾಗಿದೆ. ಶಾಖಾಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ಆರೋಗ್ಯ, ಆಯಸ್ಸು ವೃದ್ಧಿಸುತ್ತದೆ. ಜಪಾನ್ ನಲ್ಲಿ ದೀರ್ಘಾಯುಷ್ಯವುಳ್ಳ ವ್ಯಕ್ತಿಯ ಮೇಲೆ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ. ಆತ ಸಸ್ಯಾಹಾರಿ ಎಂಬುದು ವಿಶೇಷ.
ಹತ್ತು ಹಲವು ಕಾಯಿಲೆಗಳಿಗೆ ಮಾಂಸಾಹಾರ ದಾರಿ ಮಾಡಿಕೊಡುತ್ತದೆ. ಇದು ಸಂಶೋಧನೆಯಿಂದ ಸಾಬೀತಾಗಿರುವ ಅಂಶ ಎಂದರು.
ಮದ್ಯಪಾನ ನಿಲ್ಲಿಸಲು ಸರ್ಕಾರವೂ ತಯಾರಿಲ್ಲ. ಏಕೆಂದರೆ ಅದರಿಂದ ಅಪಾರ ಪ್ರಮಾಣದ ಹಣ ಬೊಕ್ಕಸಕ್ಕೆ ಸಿಗುತ್ತದೆ. ಅಲ್ಲದೆ ಅಮಾಯಕ ಪ್ರಾಣಿಗಳನ್ನು ಹಿಂಸಿಸಿ ಹತ್ಯೆ ಮಾಡಿ ಮಾಂಸ ದಂಧೆ ನಡೆಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಯಾವುದೇ ಕೈಂ ಇರಲಿ ವೈಯಕ್ತಿಕವಾಗಿ ಯಾರನ್ನು ದೂಷಿಸುವುದು ಸರಿಯಲ್ಲ. ಅವರು ಬೆಳೆದು ಬಂದ ಪರಿಸ್ಥಿತಿ, ಸಮಾಜಿಕ ನೆಲೆಗಟ್ಟು ಇದಕ್ಕೆ ಕಾರಣವಾಗಿರುತ್ತದೆ. ಶಾಲಾ ದಿನಗಳಲ್ಲಿ ಮಕ್ಕಳಿಗೆ ಮದ್ಯಪಾನದ ದುಷ್ಪರಿಣಾಮದ ಬಗ್ಗೆ ವಿವರಿಸದಿದ್ದರೆ ಮುಂದೆ ಆಗುವ ಅನಾಹುತಕ್ಕೆ ಯಾರನ್ನು ಹೊಣೆ ಎನ್ನಬೇಕು ಎಂದು ಅಗ್ನಿವೇಶ್ ಕೇಳಿದ್ದಾರೆ.
ದೆಹಲಿಯಲ್ಲಿನ ಅತ್ಯಾಚಾರ ಪ್ರಕರಣಗಳ ಆರೋಪಿಗಳು ಮದ್ಯಪಾನ ಮಾಡಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಯಾವುದೇ ಅಪರಾಧಿಗೆ ಗಲ್ಲು ಶಿಕ್ಷೆ ನೀಡುವ ಮೂಲಕ ಕ್ರೈಂ ಹತ್ತಿಕ್ಕಲು ಸಾಧ್ಯವಿಲ್ಲ. ನಾನು ಇದನ್ನು ವಿರೋಧಿಸುತ್ತೇನೆ. ಸಂಸತ್ತಿನ ಮೇಲೆ ದಾಳಿ ನಡೆಸಿದವರಿರಬಹುದು ಅಥವಾ ಉಗ್ರ ಕಸಬ್ ಇರಬಹುದು ಗಲ್ಲುಶಿಕ್ಷೆ ನೀಡುವುದರಿಂದ ಏನು ಪ್ರಯೋಜನವಿಲ್ಲ ಎಂದು ಅಗ್ನಿವೇಶ್ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications