ಜೆಡಿಎಸ್ ಚೆನ್ನಿಗಪ್ಪ ಕಾರಿನಲ್ಲಿದ್ದ ಅಪಾರ ಹಣ ವಶ
ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ತೆರಳುತಿದ್ದ ಕಾರಿನಲ್ಲಿ ಸುಮಾರು 20 ಲಕ್ಷ ರುಪಾಯಿಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಪಡೆದ ಪೊಲೀಸರು ಶುಕ್ರವಾರ ಮಧ್ಯಾಹ್ನ ಆಲ್ಲಾಳಸಂದ್ರದ ಬಳಿ ಕಾರನ್ನು ತಡೆದು ತಪಾಸಣೆ ನಡೆಸಿದ್ದಾರೆ. ಕಾರಿನಲ್ಲಿದ್ದ 20 ಲಕ್ಷ ರುಪಾಯಿಗಳನ್ನು ಜಪ್ತಿ ಮಾಡಿರುವ ಪೊಲೀಸರು, ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ವ್ಯಕ್ತಿಗಳ ಪೈಕಿ ಕಾರು ಚಾಲಕ ರಾಹುಲ್ ಎಂಬಾತ, ಕಾರು ಚೆನ್ನಿಗಪ್ಪ ಅವರಿಗೆ ಸೇರಿದ್ದು ಎಂದು ಹೇಳಿಕೆ ನೀಡಿದ್ದಾನೆ. ಆದರೆ ವಾಹನದಲ್ಲಿದ್ದ ಹಣ ಯಾರದ್ದು ಎಂಬ ವಿಚಾರ ಬಹಿರಂಗಗೊಂಡಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಾರು ಕ್ಯಾಶ್ ವಶ : ತುಮಕೂರಿನಿಂದ ಹಿಂದೂಪುರಕ್ಕೆ ತೆರಳುತ್ತಿದ್ದ ಕಾರಿನಲ್ಲಿ ಅಪಾರ ಪ್ರಮಾಣ ನಗದು ವಶಪಡಿಸಿಕೊಳ್ಳಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಕೋಟಲಾದಿನ್ನೆ ಬಳಿ ಸೆರೆ ಸಿಕ್ಕ ಕಾರಿನಲ್ಲಿ 78 ಲಕ್ಷ ರು ನಗದು ಸಿಕ್ಕಿದೆ. ಕಾರು ಚಾಲಕನನ್ನು ಸೂಕ್ತ ದಾಖಲೆ ಒದಗಿಸುವಂತೆ ಕೇಳಲಾಗಿದೆ. ಈ ಹಣ ಸಿಟಿ ಯೂನಿಯನ್ ಬ್ಯಾಂಕ್ ನಿಂದ ಪಡೆದಿದ್ದು ಎಂದು ತಿಳಿದು ಬಂದಿದೆ. ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ.
ನಗರದ ಸಮಸ್ಯೆ: ಗಡಿ ಭಾಗದ ಜಿಲ್ಲೆ ಚಾಮರಾಜನಗರದಲ್ಲಿ ಬಹುತೇಕ ಲಾಡ್ಜ್ಗಳು ಸಂಪೂರ್ಣ ಭರ್ತಿಯಾಗಿವೆ. ಇದರಲ್ಲಿ ಏನು ವಿಶೇಷ ಎಂದರೆ, ಲಾಡ್ಜ್ಗಳಲ್ಲಿ ತುಂಬಿರುವವರು ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ಮತದಾರರು. ಅಭ್ಯರ್ಥಿಗಳು ಮತದಾರರಿಗೆ ಅಮಿಷವೊಡ್ಡಿ, ಅಕ್ರಮವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ವರದಿಯಾಗಿದೆ.
ಚುನಾವಣಾ ಆಯೋಗವು ಚುನಾವಣಾ ಸಮಯದಲ್ಲಿ ಅಭ್ಯರ್ಥಿಗಳಿಂದ ಆಕ್ರಮ ನಡೆಯುವುದನ್ನು ತಡೆಗಟ್ಟುವ ಸಲುವಾಗಿ, ಚುನಾವಣಾ ಕಣ್ಗಾವಲು ಸಮಿತಿ ರಚನೆ ಮಾಡಿದೆ. ಆದರೆ, ಅವರ ಕಣ್ಣನ್ನು ತಪ್ಪಿಸಿ ಪ್ರತಿನಿತ್ಯ ಆಕ್ರಮ ಚಟುವಟಿಕೆಗಳು ಜಿಲ್ಲೆಯಲ್ಲಿ ನಡೆಯುತ್ತಿದೆ.