ಒಂದೇ ದಿನ ಮೂರು ಕಡೆ ಭಾಷಣ ಬಿಗಿದ ರಾಹುಲ್

ಎರಡನೇ ಹಂತದ ಪ್ರಚಾರ ಕಾರ್ಯಕ್ಕಾಗಿ ಕರ್ನಾಟಕಕ್ಕೆ ಆಗಮಿಸಿದ ರಾಹುಲ್ ಗಾಂಧಿ ಹಾವೇರಿ, ತುಮಕೂರು ಮತ್ತು ಮೈಸೂರಿನಲ್ಲಿ ಪ್ರಚಾರ ಕಾರ್ಯ ನಡೆಸಿದರು. ತಮ್ಮ ಪ್ರಚಾರ ತುಂಬಾ ಬಿಜೆಪಿ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಣ ಲೂಟಿ ಮಾಡುವುದಿಲ್ಲ" ಎಂದು ಜನರಿಗೆ ಭರವಸೆ ನೀಡಿದರು.
2008 ಚುನಾವಣೆಯಲ್ಲಿಯೇ ಬಿಜೆಪಿ ಸರ್ಕಾರ ಅಧಿಕಾರ ಪಡೆಯುತ್ತಿರಲಿಲ್ಲ. ಗಣಿ ಉದ್ಯಮಿಗಳಾದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲುವಿಂದ ಅಕ್ರಮ ಗಣಿಗಾರಿಕೆ ಹಣ ಪಡೆದು ಸರ್ಕಾರ ರಚಿಸಿದರು. "ರಾಜ್ಯದಲ್ಲಿ ಅಸ್ತಿತ್ವದಲ್ಲಿ ಬಂದಿದ್ದು ಬಿಜೆಪಿ ಸರ್ಕಾರವಲ್ಲ ಬಳ್ಳಾರಿ ಸರ್ಕಾರ" ಎಂದು ಲೇವಡಿ ಮಾಡಿದರು.
ಹಾವೇರಿ ಭಾಷಣದ ಮುಖ್ಯಾಂಶಗಳು : ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸ್ವಚ್ಛ ಆಡಳಿತ ನೀಡುತ್ತೇವೆ. ಪ್ರಣಾಳಿಕೆಯಲ್ಲಿನ ಭರವಸೆಯಂತೆ ಬಡ ಕುಟುಂಬಗಳಿಗೆ ಮೂವತ್ತು ರೂ.ಗೆ ಮೂವತ್ತು ಕೆ.ಜಿ. ಅಕ್ಕಿ ನೀಡುತ್ತೇವೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ನಿಂದ ಮಾತ್ರ ಜನ ಸಾಮಾನ್ಯರ ಹಿತ ಕಾಯಲು ಸಾಧ್ಯ. ಬಿಜೆಪಿ ಐದು ವರ್ಷಗಳಿಂದಲೂ ಜನ ವಿರೋಧಿ ಆಡಳಿತ ನೀಡಿದೆ. ರೈತರು, ಕಾರ್ಮಿಕರು, ಶೋಷಿತರು ಸರ್ಕಾರದ ಆಡಳಿತದಿಂದ ಬೇಸತ್ತು ಹೋಗಿದ್ದಾರೆ. ರಾಜ್ಯದ ಬೊಕ್ಕಸ ಖಾಲಿಯಾಗಿ ಬಿಜೆಪಿಯ ಸಚಿವರು, ಶಾಸಕರ ಖಜಾನೆ ತುಂಬಿದೆ ಎಂದು ಆರೋಪಿಸಿದರು.
ತುಮಕೂರು : ಮಧ್ಯಾಹ್ನ 2 ಗಂಟೆಗೆ ತುಮಕೂರಿನ ಮಹಾತ್ಮ ಗಾಂಧಿ ಮೈದಾನದಕ್ಕೆ ಆಗಮಿಸಿದ ರಾಹುಲ್ ಗಾಂಧಿ, ಕಾಂಗ್ರೆಸ್ ಜನ ಪರ, ಅಭಿವೃದ್ಧಿ ಪರ ಆಡಳಿತಕ್ಕೆ ಆದ್ಯತೆ ನೀಡುತ್ತದೆ. ಭ್ರಷ್ಟಚಾರವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಹೇಳಿದರು.
ಇಂದಿನ ರಾಜಕಾರಣದ ಪದ್ಧತಿ ಬದಲಾಗಬೇಕು. ಯುವಕರಿಗೆ ಹೆಚ್ಚಿನ ಆದ್ಯತೆ ದೊರೆಯಬೇಕು. ರಾಜ್ಯದ ನೈಸರ್ಗಿಕ ಸಂಪತ್ತು ಖಾಸಗಿ ವ್ಯಕ್ತಿಗಳ ಪಾಲಾಗದಂತೆ ಕಾಪಾಡುವ ಸರ್ಕಾರ ರಚನೆಯಾಗಬೇಕು ಎಂದು ಅಭಿಪ್ರಾಯಪಟ್ಟರು.
ತುಮಕೂರು, ಕೋಲಾರ ಸೇರಿದಂತೆ ಬಯಲು ಸೀಮೆಯ ಪ್ರದೇಶಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಕಾಂಗ್ರೆಸ್ ಬದ್ಧವಾಗಿದೆ. ಜೊತೆಗೆ ರಾಜ್ಯಾದ್ಯಂತ ವಿಳಂಬವಾಗಿರುವ ನೀರಾವರಿ ಯೋಜನೆಗಳನ್ನು ಕಾಂಗ್ರೆಸ್ ಪೂರ್ಣಗೊಳಿಸಲಿದೆ. ಅದಕ್ಕಾಗಿ ವಾರ್ಷಿಕ 10 ಸಾವಿರ ಕೋಟಿ ರೂ.ಗಳನ್ನು ಬಜೆಟ್ನಲ್ಲಿ ಕಾಯ್ದಿರಿಸಲಾಗುವುದು ಎಂದು ಭರವಸೆ ನೀಡಿದರು.
ಜನ ವಿರೋಧಿಯಾಗಿರುವ ಬಿಜೆಪಿ ಪಕ್ಷಕ್ಕೆ ಜನತೆ ತಕ್ಕ ಪಾಠ ಕಲಿಸುತ್ತಾರೆ. ಎಲ್ಲಾ ವರ್ಗಗಳಿಗೂ ಸಮಾನ ಆದ್ಯತೆ ನೀಡುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲಿದ್ದಾರೆ ಎಂದು ಹೇಳಿದರು. ಪಕ್ಷ ಅಧಿಕಾರಕ್ಕೆ ಬಂದರೆ ಮತ್ತಷ್ಟು ಜನಪರವಾದ ಕೆಲಸಗಳನ್ನು ಮಾಡುತ್ತೇವೆ ಮತ ನೀಡಿ ಎಂದು ಮನವಿ ಮಾಡಿದರು.
ಮೈಸೂರು : ಕೇವಲ ಭರವಸೆ ನೀಡಿ ಅಧಿಕಾರ ಪಡೆದ ಮೇಲೆ ಜನರ ಹಿತ ಮರೆತರೆ ಅಂತಹ ನಾಯಕರನ್ನು ಪಕ್ಷದಿಂದ ಉಚ್ಛಾಟಿಸಲಾಗುವುದು ಎಂದು ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications