ಈಗ್ಲೇ 5 ಸೀಟು ಕಳೆದುಕೊಂಡ ಕಾಂಗ್ರೆಸ್
ಕಳೆದ ವಾರ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಈ ಬಾರಿ 130 ಸೀಟು ಗೆಲ್ಲಲಿದೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಸಿಂಧನೂರಿನಲ್ಲಿ ಸಿದ್ದರಾಮಯ್ಯ ಏನು ಹೇಳಿದ್ದರು ರೀ ಕ್ಯಾಪ್ ಇಲ್ಲಿದೆ:
ಸಿಂಧನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಆಡಳಿತಕ್ಕೆ ಬೇಸತ್ತ ಜನರು ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ 130ಕ್ಕೂ ಅಧಿಕ ಸ್ಥಾನಗಳಿಸಲು ಅವಕಾಶ ಕಲ್ಪಿಸುತ್ತಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಲೆಯಿದೆ. ಹೀಗಾಗಿ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ. ಅಲ್ಲಲ್ಲಿ ಬಂಡಾಯ ಇದ್ದರೂ ಸಹ ಅಷ್ಟಾಗಿ ಅದು ಪರಿಣಾಮ ಬೀರಲಾರದು. ಎಲ್ಲರೂ ಒಗ್ಗೂಡಿ ಚುನಾವಣೆ ಎದುರಿಸುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದರು.
ಇಂದು ಪರಮೇಶ್ವರ್ ಅವರು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಮೂಡಿದ್ದು, ಗೆಲುವು ನಿಶ್ಚಿತವಾಗಿದೆ. ನಿನ್ನೆಯಷ್ಟೆ ಪಕ್ಷ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದು, ಕಡುಬಡವರಿಗೆ 1 ರು.ನಂತೆ 30 ಕೆಜಿ ಅಕ್ಕಿ ವಿತರಣೆ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್, ಡಿಜಿಟಲ್ ನೋಟ್ಬುಕ್ ವಿತರಣೆ ಸೇರಿದಂತೆ ಹಲವಾರು ರೈತ ಪರ ಪ್ರಣಾಳಿಕೆ ಬಿಡುಗಡೆಗೊಳಿಸಿದರು. ಪಕ್ಷ ಅಧಿಕಾರಕ್ಕೆ ಬಂದರೆ ಇವುಗಳ ಈಡೇರಿಕೆ ಶತಸಿದ್ಧ ಎಂದರು.
ಒಟ್ಟಾರೆ, ಒಂದೇ ಕುರ್ಚಿಯ ಮೇಲೆ ಇಬ್ಬರು ಟವೆಲ್ ಹಾಸಿದರೆ ಇದೇ ಗತಿ. ಸರಿಯಾದ ಸಂವಹನ ಇಲ್ಲದಿದ್ದರೆ ಜನತೆ ಮುಂದೆ ಅಂಕಿ ಅಂಶ ಹೇಳುವಾಗ ಅಪಹಾಸ್ಯಕ್ಕೀಡಾಗುತ್ತಾರೆ ಎಂಬುದಕ್ಕೆ ಪರಮೇಶ್ವರ್ ಅವರ ಮಾತುಗಳೇ ಸಾಕ್ಷಿ.
ಮುಖ್ಯಮಂತ್ರಿ ಆಕಾಂಕ್ಷಿಗಳಲ್ಲಿ ನಾನೂ ಕೂಡ ಒಬ್ಬನಾಗಿದ್ದು, ಅದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ ಎಂದ ಅವರು, ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದ ತುಮಕೂರು ನಗರದ ಅಭ್ಯರ್ಥಿ ಡಾ.ರಫಿಕ್ ಅಹಮ್ಮದ್, ಗ್ರಾಮಾಂತರ ಕ್ಷೇತ್ರದ ಯಲಚವಾಡಿ ನಾಗರಾಜ್, ಮಧುಗಿರಿ ಕ್ಷೇತ್ರದ ಕೆ.ಎನ್.ರಾಜಣ್ಣ ಸೇರಿದಂತೆ ವಿವಿಧ ಅಭ್ಯರ್ಥಿಗಳ ಪರ ರಾಹುಲ್ಗಾಂಧಿಯವರು ಮತಯಾಚಿಸಲಿದ್ದಾರೆ ಎಂದು ಪರಮೇಶ್ವರ್ ಹೇಳಿದರು.
ತುಮಕೂರಿನ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ, ಕೇಂದ್ರ ಸಚಿವ ವೀರಪ್ಪಮೊಯ್ಲಿ, ಮಧುಸೂದನ್ ಮಿಸ್ತ್ರಿ ಸೇರಿದಂತೆ ಮತ್ತಿತರ ನಾಯಕರು ಆಗಮಿಸಲಿದ್ದಾರೆ. ಪ್ರಚಾರ ಕಾರ್ಯದಲ್ಲಿ ಬೇರೆ ಪಕ್ಷಗಳಿಗಿಂತ ಮುಂದಿರುವ ಕಾಂಗ್ರೆಸ್ ಭಾಷಣದಲ್ಲಿ ಮಾತ್ರ ಹಿಂದೆ ಬಿದ್ದಿದೆ. ರಾಹುಲ್ ಗಾಂಧಿ ಯಾರೋ ಬರೆದುಕೊಟ್ಟ ಭಾಷಣ ಮಾಡುತ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದ್ದು ಸುಳ್ಳಲ್ಲ. ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಹೋಗಿ ಬಂದ ಕಡೆಯಲ್ಲ ನಾನೇ ಸಿಎಂ ಅಭ್ಯರ್ಥಿ ಎನ್ನುತ್ತಿರುವುದು ಹೈಕಮಾಂಡ್ ಗಷ್ಟೇ ಅಲ್ಲ, ಜನರಿಗೂ ಇರುಸು ಮುರುಸು ತರಿಸಿದೆ.