ಬಿಜೆಪಿಯಿಂದ ಯಡಿಯೂರಪ್ಪಗೆ ಹತ್ತು ಪ್ರಶ್ನೆಗಳು
ಬೆಂಗಳೂರು, ಏ.25: ಚುನಾವಣೆ ದಿನಾಂಕ ಸಮೀಪಿಸುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರ ನಡುವಣ ಅಂತಿಮ ಹೋರಾಟ ಘೋಷಣೆಯಾಗಿದೆ. ಆರಂಭದಲ್ಲಿ ಬಿಜೆಪಿ ತನ್ನ ಬತ್ತಳಿಕೆಯಿಂದ 10 ಅಸ್ತ್ರಗಳನ್ನು ಯಡಿಯೂರಪ್ಪ ಅವರತ್ತ ನೇರ ಗುರಿಯಿಟ್ಟು ಬಿಟ್ಟಿದೆ. 10 ಪ್ರಶ್ನೆಗಳನ್ನು ಅವರ ಮುಂದೆ ಬಿಡಿಸಿಟ್ಟಿದೆ.
ಈ ಹತ್ತೂ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದು ಬಹಿರಂಗವಾಗಿ ಆಗ್ರಹಿಸಿದೆ. ಸೋ, ಯಡಿಯೂರಪ್ಪನವರು ಈ ಅಸ್ತ್ರಗಳನ್ನು ಎದುರಿಸಲೇಬೇಕು. ತಪ್ಪಿಸಿಕೊಳ್ಳುವಂತಿಲ್ಲ. ನೋಡೋಣ, ಹೇಗೆಲ್ಲಾ ಸಮಜಾಯಿಷಿ ನೀಡುತ್ತಾರೆ, ಹೇಗೆ ಝಾಡಿಸುತ್ತಾರೆ, ಅಥವಾ ನೋ ಆನ್ಸರ್ ಎಂದು ಶರಣಾಗುತ್ತಾರಾ? ಕಾದು ನೋಡೋಣ. ಯಡಿಯೂರಪ್ಪಗೆ ಹೆಚ್ಚು ಕಾಲಾವಕಾಶವಿಲ್ಲ. ಇಂದೋ ನಾಳೆಯೋ ತಕ್ಷಣ ಉತ್ತರಿಸಲೇಬೇಕು.
ಬಿಜೆಪಿ ಇನ್ನೂ ಹೆಚ್ಚು ಸಂಖ್ಯೆಯ ಪ್ರಶ್ನೆಗಳನ್ನು ಸಿದ್ಧಪಡಿಸಿಟ್ಟುಕೊಂಡು ಕಣಕ್ಕಿಳಿದಂತಿದೆ. ಮೊದಲ ಏಟಿಗೆ ಯಡಿಯೂರಪ್ಪ ಏನುತ್ತರ ಕೊಡುತ್ತಾರೋ ನೋಡಿಕೊಂಡು ಮುಂದುವರಿಯುವ ಸಾಧ್ಯತೆಯಿದೆ. ಹಾಗಾಗಿ ಬಿಜೆಪಿ ಆಡಳಿತದ 5 ವರ್ಷ ಕಾಲಾವಧಿಯಲ್ಲಿ ಅನುಕ್ಷಣವನ್ನೂ ಅನುಭವಿಸಿದ ಮಹಾಜನತೆ ಕ್ಲೈಮ್ಯಾಕ್ಸ್ ಹಂತದಲ್ಲಿ ಏನು ನಡೆಯಲಿದೆ ಎಂಬುದನ್ನು ಕುತೂಹಲದಿಂದ ನೋಡಬಹುದಾಗಿದೆ.
ಅಂದಹಾಗೆ ವಿಧಾನಪರಿಷತ್ ಸದಸ್ಯ, ಬಿಜೆಪಿ ಹಿರಿಯ ನಾಯಕ ಗೋ. ಮಧುಸೂದನ್ ಅವರು ಪತ್ರಿಕಾಗೋಷ್ಠಿಯಲ್ಲಿ ಯಡಿಯೂರಪ್ಪಗೆ ಈ ಪ್ರಶ್ನಾವಳಿಗಳನ್ನು ಕೇಳಿದ್ದಾರೆ.
ಅವು ಇಂತಿವೆ:

ಪ್ರಶ್ನೆ 1
ಯಡಿಯೂರಪ್ಪನವರೇ ಲೋಕಾಯುಕ್ತವು ಗಣಿ ಹಗರಣದಲ್ಲಿ ತಮ್ಮ ಹೆಸರು ಉಲ್ಲೇಖ ಮಾಡಿದ ನಂತರ ಯಾವ ಹೈಕೋರ್ಟ್ ನಿಮಗೆ ಕ್ಲೀನ್ ಚಿಟ್ ನೀಡಿದೆ? ಅದರ ಪ್ರತಿಯನ್ನು ದಯಮಾಡಿ ಪತ್ರಿಕೆಗಳಿಗೆ ಬಿಡುಗಡೆ ಏಕೆ ಮಾಡಿಲ್ಲ?

ಪ್ರಶ್ನೆ 2
ತಮ್ಮ ವಿರುದ್ಧ ಬಂಡಾಯ ಎದ್ದಿದ್ದ ರೇಣುಕಾಚಾರ್ಯ ಎರಡು ಬಾರಿ ಶಾಸಕರೊಂದಿಗೆ ಹೈದರಾಬಾದ್, ಚೆನ್ನೈ, ಗೋವಾಗೆ ತೆರಳಿದ್ದರು. ಇಂತಹ ವ್ಯಕ್ತಿಯು ನಿಮ್ಮ ಹಿತೈಷಿ ಹೇಗೆ ಆಗುತ್ತಾರೆ? ನಿಮ್ಮ ಸರ್ಕಾರವನ್ನು ಉರುಳಿಸಲು ಯತ್ನಿಸಿದವರು ಬೆನ್ನಿಗೆ ಚೂರಿ ಹಾಕಿದವರಲ್ಲ? ನಿಮ್ಮ ಸರ್ಕಾರವನ್ನು ಉಳಿಸಲು ಕಷ್ಟಪಟ್ಟವರು ಬೆನ್ನಿಗೆ ಚೂರಿ ಹಾಕುತ್ತಾರೆ ಎನ್ನುವುದು ಎಷ್ಟು ನ್ಯಾಯ?

ಪ್ರಶ್ನೆ 3
ನಿಮ್ಮ ವಿರುದ್ಧ ಖಾಸಗಿ ದೂರು ದಾಖಲಾದ ಸಂದರ್ಭದಲ್ಲಿ ಅದು ಎಚ್ ಡಿ ಕುಮಾರಸ್ವಾಮಿ ಅವರ ಷಡ್ಯಂತ್ರ, ಜೆಡಿಎಸ್ ಪಕ್ಷವನ್ನು ರಾಜ್ಯದಲ್ಲಿ ಅಳಿಸಿ ಬಿಡುತ್ತೇನೆ ಎಂದು ತಾವು ಘರ್ಜಿಸಿದ್ದು ನಿಮಗೆ ಮರೆತು ಹೋಗಿರುವುದು ಆಶ್ಚರ್ಯಕರವಲ್ಲವಾ?

ಪ್ರಶ್ನೆ 4
ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಆರೋಪ ಪಟ್ಟಿಯನ್ನು ತಾವು ಬಿಡುಗಡೆ ಮಾಡಿಸಿದ್ದೀರಿ. ಆದರೆ ಅದರ ಬಗ್ಗೆ ಈಗೇಕೆ ಚಕಾರವೆತ್ತುತ್ತಿಲ್ಲ? ಪದೇ ಪದೇ ಬಿಜೆಪಿ ನಾಯಕರು ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಬಿಜೆಪಿ ತೊರೆದ ನಂತರ ಸಹಾನುಭೂತಿ ಗಳಿಸಲು ವಿಫಲ ಯತ್ನ ಮಾಡುತ್ತಿದ್ದೀರಿ. ಆದರೆ ನಿಮ್ಮ ವಿರುದ್ಧ ಖಾಸಗಿ ದೂರು ಮಾಡಿದವರು ಜೆಡಿಎಸ್ ಬೆಂಬಲಿತರು ಎಂಬುದನ್ನು ಏಕೆ ಮರೆಮಾಚಲಾಗುತ್ತಿದೆ?

ಪ್ರಶ್ನೆ 5
ನಿಮ್ಮ ಸರ್ಕಾರವನ್ನು ವಜಾ ಮಾಡಲು ರಾಜ್ಯಪಾಲರು ಶಿಫಾರಸ್ಸು ಮಾಡಿದಾಗ ರಾಷ್ಟ್ರಪತಿಗಳನ್ನು ಭೇಟಿ ಮಾಡಲು ಅಡ್ವಾಣಿಯವರು ತಮ್ಮ ವರ್ಚಸ್ಸಿಗೆ ಧಕ್ಕೆಯಾಗುವ ಸಂಭವವಿದ್ದರೂ ನಿಯೋಗದ ನೇತೃತ್ವವನ್ನು ವಹಿಸಿ ನಿಮ್ಮ ಪರ ವಕಾಲತ್ತು ವಹಿಸಿದ್ದು ನೆನಪಿರುವುದೇ? ಅಂತಹವರ ವಿರುದ್ಧ ಕೀಳು ಮಟ್ಟದ ಅಪಪ್ರಚಾರಕ್ಕೆ ಮುಂದಾಗಿರುವುದು ಹೊಲಸು ರಾಜಕಾರಣವಲ್ಲವಾ?

ಪ್ರಶ್ನೆ 6
ಬಿಜೆಪಿ - ಜೆಡಿಎಸ್ ಸರ್ಕಾರದ ಆಗಿನ ಇನ್ ಚಾರ್ಜ್ ರಾಜನಾಥ್ ಸಿಂಗ್ ಮತ್ತು ಎಚ್ ಡಿ ದೇವೇಗೌಡರ ನಡುವೆ ಮಾತುಕತೆ ವಿಫಲವಾಗಿ ಜೆಡಿಎಸ್ ವಿರುದ್ಧವಾಗಿ ಬಿಜೆಪಿಯಿಂದ ವಿಶ್ವಾಸದ್ರೋಹ ಅಂತ ಭಾರಿ ಪ್ರತಿಭಟನೆ ಮಾಡಿ ರಾಜ್ಯಾದ್ಯಂತ ಪ್ರತಿಭಟನೆ ಯಾತ್ರೆ ಹೊರಟ ಯಡಿಯೂರಪ್ಪ ಅವರು ತುಮಕೂರಿನಿಂದ ರಾತ್ರೋರಾತ್ರಿ ವಾಪಸ್ಸು ಬಂದು ಮತ್ತೆ ಜೆಡಿಎಸ್ ಜೊತೆ ಸೇರಿ ಸರ್ಕಾರ ರಚಿಸಿದ್ದೇಕೆ?

ಪ್ರಶ್ನೆ 7
2005ರಲ್ಲಿ ಬಿಜೆಪಿ ತೊರೆದು ಜೆಡಿಎಸ್ಗೆ ಮತ್ತು ಕಾಂಗ್ರೆಸ್ ಸೇರಲು ತೀರ್ಮಾನ ಮಾಡಿದ ಸಂದರ್ಭದಲ್ಲಿ ಮಾಧ್ಯಮಗಳಿಗೆ ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ಹೇಳಿದರೂ, ಬಿಜೆಪಿಯೊಂದಿಗೆ ನನ್ನ ಸಂಬಂಧ ಮುಗಿಯಿತು ಎಂದು ಪಕ್ಷದ ಹಿರಿಯ ನಾಯಕರುಗಳಿಗೆ ತಿಳಿಸಿ ಖಾತೆಗಾಗಿ ವ್ಯಾಪಾರ ಮಾಡಿದ್ದು ಸುಳ್ಳಾ?

ಪ್ರಶ್ನೆ 8
ನಿಮ್ಮೊಂದಿಗೆ ಸದಾ ಜೊತೆಗಿದ್ದ ಡಾ ವಿ ಎಸ್ ಆಚಾರ್ಯ ಅವರು ನಿಧನರಾದ ಸಂದರ್ಭದಲ್ಲಿ ವಿಧಾನ ಸಭೆಯಲ್ಲಿ ಶೋಕ ನಿರ್ಣಯ ಕೈಗೊಂಡಾಗ ತಾವು ಶಾಸಕರೊಂದಿಗೆ ತಾವು ಗೋಲ್ಡನ್ ಪಾಮ್ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿ ವಿಧಾನಸಭೆಗೆ ಹಾಜರಾಗದೆ ನಿಮ್ಮ ಜೊತೆ ಸದಾ ಬೆನ್ನೆಲುಬಾಗಿದ್ದ ವ್ಯಕ್ತಿಗೆ ತಾವು ಅಗೌರವ ತೋರಲಿಲ್ಲವಾ?

ಪ್ರಶ್ನೆ 9
ತೊಟ್ಟಿಲು ತೂಗಿ ಮಗುವನ್ನೂ ಚಿವುಟುವಂತೆ ಧನಂಜಯ ಕುಮಾರ್ ಅವರನ್ನು ಬಳಸಿಕೊಂಡು ಕೀಳು ರಾಜಕಾರಣ ಮಾಡುತ್ತಿರುವುದು ಸುಳ್ಳಾ?

ಪ್ರಶ್ನೆ 10
ನಿಮ್ಮ ಶಿಷ್ಯ ಬಿಜೆ ಪುಟ್ಟಸ್ವಾಮಿ ಅವರು ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರ ಮೇಲೆ ಮಾಡಿದ ಆರೋಪಗಳ ಕುರಿತು ಈಗೇಕೆ ನಿಮ್ಮ ಧ್ವನಿ ಉಡುಗಿ ಹೋಗಿದೆ?












Click it and Unblock the Notifications