ಬಿಎಸ್ವೈ ಪಕ್ಷ ಬಿಟ್ಟಿದ್ದು ಬೇಸರ ತಂದಿದೆ : ರಾಜನಾಥ್ ಸಿಂಗ್
ಸೋಮವಾರ ಬಿಜಾಪುರದಲ್ಲಿ ಬಹಿರಂಗ ಚುನಾವಣಾ ಪ್ರಚಾರ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ಹವಾಲಾ ಹಗರಣಕ್ಕೆ ಸಂಬಂಧಿಸಿದಂತೆ ಅಡ್ವಾಣಿ ಅವರ ಮೇಲೆ ನಿರಾಧಾರ ಆರೋಪಗಳು ಕೇಳಿ ಬಂದವು.
ಆ ಸಂದರ್ಭದಲ್ಲಿ ಅವರು ಲೋಕಸಭೆ ಸ್ಥಾನಕ್ಕೆ ರಾಜಿನಾಮೆ ನೀಡಿದರು ಅದು ಪಕ್ಷ ಶಿಸ್ತು. ಯಡಿಯೂರಪ್ಪ ಆರೋಪ ಮುಕ್ತರಾಗಿ ಹೊರ ಬಂದರೆ ಮತ್ತೆ ಮುಖ್ಯಮಂತ್ರಿ ಸ್ಥಾನ ನೀಡುವ ಭರವಸೆ ನೀಡಿದ್ದೆವು. ಆದರೆ, ಅವರು ಪಕ್ಷ ತೊರೆದು ಹೋದರು ಎಂದು ಬೇಸರ ವ್ಯಕ್ತಪಡಿಸಿದರು.
ಲೋಕಾಯುಕ್ತ ವರದಿಯಲ್ಲಿ ಯಡಿಯೂರಪ್ಪ ಅವರ ಹೆಸರು ಪ್ರಸ್ತಾಪವಾದಾಗಲೇ ಅವರನ್ನು ಪದಚ್ಯುತಿಗೊಳಿಸಲು ತೀರ್ಮಾನಿಸಿದ್ದೆವು. ಆದರೆ, ಪಕ್ಷ ತೊರೆಯುವಂತೆ ಹೇಳಿರಲಿಲ್ಲ. ಅವರ ಪಕ್ಷ ತೊರೆದು ಹೋಗಿರುವ ಬಗ್ಗೆ ರಾಷ್ಟ್ರೀಯ ನಾಯಕರಿಗೂ ಬೇಸರವಿದೆ ಎಂದು ಹೇಳಿದರು.
ಆಡಳಿತ ನೋಡಿ ಮತ ನೀಡಿ : ಸಿಎಂ ಜಗದೀಶ್ ಶೆಟ್ಟರ್ ಮತ್ತು ಮಾಜಿ ಸಿಎಂ ಸದಾನಂದ ಗೌಡ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿದ್ದಾರೆ. ಚುನಾವಣೆಯಲ್ಲಿ ಪಕ್ಷದ ಸಾಧನೆ ನೋಡಿ ಮತ ನೀಡಿ, ವ್ಯಕ್ತಿ ನೋಡಿ ಮತ ನೀಡಬೇಡಿ ಎಂದು ಅವರು ಮನವಿ ಮಾಡಿದರು.
ಬಿಜೆಪಿ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಿದೆ. ಸಂಕಷ್ಟದ ನಡುವೆ ವಿದ್ಯುತ್ ಸಮಸ್ಯೆ ನಿವಾರಿಸಲು ಆದ್ಯತೆ ನೀಡಿದೆ. ಸಮೀಕ್ಷೆಗಳು ಈ ಬಾರಿ ಬಿಜೆಪಿ ಅಧಿಕಾರ ಪಡೆಯಲಿದೆ ಎಂದು ಹೇಳುತ್ತಿವೆ. ಜನರು ಪಕ್ಷಕ್ಕೆ ಮತ ನೀಡಿ ಎಂದು ಅವರು ಕೇಳಿಕೊಂಡರು.
ಕೇಂದ್ರ ವಿಫಲ : ಕೇಂದ್ರ ಸರ್ಕಾರ ಅಡುಗೆ ಅನಿಲ ಸೇರಿದಂತೆ ಜೀವನಾವಶ್ಯಕ ವಸ್ತುಗಳ ದರಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ. ಲೋಕಸಭೆ ಚುನಾವಣೆಯಲ್ಲಿಯೂ ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಅಸ್ತಿಸ್ವಕ್ಕೆ ಬರಲಿದೆ. ಬಿಜೆಪಿಯ ವಿಜಯ ಯಾತ್ರೆ ಕರ್ನಾಟಕದಿಂದಲೇ ಪ್ರಾರಂಭವಾಗಲಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೋದಿ ಜನಪ್ರಿಯ ನಾಯಕ : ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಜನಪ್ರಿಯ ನಾಯಕರು. ಆದರೆ, ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿಲ್ಲ. ಮೋದಿಯನ್ನು ಜಾತಿಗಳ ಚೌಕಟ್ಟು ಮೀರಿ ಜನರು ಗೌರವಿಸುತ್ತಿದ್ದಾರೆ. ಶೀಘ್ರದಲ್ಲೇ ಪ್ರಧಾನಿ ಅಭ್ಯರ್ಥಿ ಬಗ್ಗೆ ಪಕ್ಷ ನಿರ್ಧಾರ ಕೈಗೊಳ್ಳಲಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ