ರೂಪ, ಯಡಿಯೂರಪ್ಪ ಗೂಟದ ಕಾರು ಕಿತ್ಕೊಂಡ್ರಪ್ಪಾ!
ಬೆಂಗಳೂರು, ಏ. 23: ಕರ್ನಾಟಕ ವಿಧಾನಸಭೆ ಚುನಾವಣೆ ಸಮ್ಮುಖದಲ್ಲಿ ಖಾದಿ ಎದುರು ಖಾಕಿ ಖದರ್ರು ಜೋರಾಗಿದೆ. ಮಾಜಿ ಹಾಲಿ ಅಂಥೇನೂ ವ್ಯತ್ಯಾಸ/ ಭೇದಭಾವ ತೋರದೆ ಎಲ್ಲರಿಗೂ ಒಂದೇ ನ್ಯಾಯ ಸಲ್ಲುವಂತೆ ನಮ್ಮ ಪೊಲೀಸರು ನಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ನಮ್ಮ ಮಹಿಳಾ ಐಪಿಎಸ್ ರೂಪಾ ಮುದ್ಗಲ್ ಅವರು ಕಾನೂನು ಮುಂದೆ ಎಲ್ಲರೂ ಒಂದೇ ಎಂದಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನೇ ತೆಗೆದುಕೊಳ್ಳಿ. ಮೇಡಂ ರೂಪಾ ಅವರು ಯಡಿಯೂರಪ್ಪಗೆ ನೀಡಿದ್ದ ಪೈಲಟ್ ಕಾರನ್ನು ಸೈಲೆಂಟಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ದೊಡ್ಡ ದೊಡ್ಡ ಖುಳಗಳನ್ನು ಕಾಯುತ್ತಿದ್ದ ನೂರಕ್ಕೂ ಹೆಚ್ಚು orderlyಗಳನ್ನು ರಾಜಕಾರಣಿಗಳ ಮನೆಗಳಿಂದ ಎಬ್ಬಿಸಿ, ಚುನಾವಣೆ ಡ್ಯೂಟಿಗೆ ಅಟ್ಟಿದ್ದಾರೆ.
ಇಸ್ವಿ 2000ನೇ ಬ್ಯಾಚಿನ ಐಪಿಎಸ್ ಅಧಿಕಾರಿಣಿ ರೂಪಾ 20 ವರ್ಷಗಳಿಂದ ಪೊಲೀಸ್ ಇಲಾಖೆಯ ಘಟಾನುಘಟಿ ಅಧಿಕಾರಿಗಳು ಮಾಡದೇ ಇರುವುದನ್ನು (ಯಾವ ಪುರುಷಾರ್ಥಕ್ಕೋ?) ಈ ಬಾರಿ ತಾವು ಮಾಡಿದ್ದು, ಖಾಕಿ ಗೌರವವನ್ನು ಕಾಪಾಡಿದ್ದಾರೆ. ಹಾಗೆ ನೋಡಿದರೆ ಎಂತೆಂಥಾ ಅಧಿಕಾರಿಗಳು ನಮ್ಮನ್ನು ಆಳಿದ್ದಾರಲ್ವಾ? ಅವರು ಯಾರಿಗೂ ರೂಪಾ ಮಾದರಿಯಲ್ಲಿ ಧೈರ್ಯ ತೋರುವ ತಾಖತ್ತು ಇರಲಿಲ್ವಾ? ಛೇ (ಛೀ)!
ಇನ್ನು, ಊರಿಗೊಬ್ಬನೇ ಪರಿಶುದ್ಧ ಎಂದು ಬಡಾಯಿಕೊಚ್ಚಿಕೊಳ್ಳುವ ಸದಾನಂದ ಗೌಡರಿಗೂ ಅಷ್ಟೇ, ಪೈಲಟ್ ಕಾರು- orderly ಸೇವೆ ಅಬಾಧಿತವಾಗಿತ್ತು. ಆದರೆ ರೂಪಾ ಮೇಡಂ ಒಂದೇ ಏಟಿಗೆ ಅದೆಲ್ಲಾ ಆಗೋಲ್ಲ ಎಂದು ಸದರಿ orderlyಗಳನ್ನು ಚುನಾವಣೆ ಡ್ಯೂಟಿಗೆ ಅಟ್ಟಿ, ಜನರಿಂದ ಷಹಬ್ಬಾಸ್ ಅನಿಸಿಕೊಂಡಿದ್ದಾರೆ.
ಮೇಡಂ ರೂಪಾ ಪಟ್ಟಿಯಲ್ಲಿ ಕಾಣಿಸಿಕೊಂಡ ಇತರೆ ಜನನಾಯಕರ ಲಿಸ್ಟ್ ಇಂತಿದೆ. ಅದಕ್ಕೂ ಮುನ್ನ ಪೊಲೀಸ್ ಸ್ಟೈಲಿನಲ್ಲೇ, ಮೇಡಂ ರೂಪಾಗೊಂದು ಸೆಲ್ಯೂಟ್ ಹೊಡೆಯೋಣ್ವಾ!

ಯಾದಗೀರ್ ನಿಂದ ಬಂದ ಮೇಡಂ:
ಕೆಸಿ ಕೊಂಡಯ್ಯ ಎಂಬ ಕಾಂಗ್ರೆಸ್ ಶಾಸಕ ಮಹಾಶಯನಿಗೂ orderly/gunman ಹತ್ತಾರು ವರ್ಷದಿಂದ ಸೇವೆ ನಡೆಯುತ್ತಿತ್ತು. ಮುಲಾಜಿಲ್ಲದೆ ಮೇಡಂ ಅದಕ್ಕೂ ಸಂಚಕಾರ ತಂದಿದ್ದಾರೆ. ಕರ್ನಾಟಕದ ತಾಜಾ ಜಿಲ್ಲೆ ಯಾದಗೀರ್ ನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ರೂಪಾರನ್ನು ನಗರ ಸಶಸ್ತ್ರ ಮೀಸಲು ಪಡೆಯ ಡಿಸಿಪಿ ಆಗಿ ವರ್ಗಾವಣೆ ಮಾಡಿದ್ದೇ ತಡ ಮೇಡಂ ರೂಪಾ ಅವರು ಬೆಂಗಳೂರಿಗೆ ಬಂದ ಮಾರನೆಯ ದಿನದಿಂದಲೇ ಖಾಕಿ ಪವರ್ ತೋರಿಸಿದ್ದಾರೆ.

ಜೆಡಿಎಸ್ ನಾಯಕ ಪಿಜಿಆರ್ ಸಿಂಧ್ಯಾ:
1994ರಿಂದ ಅಂದರೆ ಈ ಮಹಾನುಭಾವರು ಸಚಿವರಾಗಿದ್ದಾಗಿನಿಂದಲೂ ಒಬ್ಬ ಪೇದೆ ಇವರ ಸೇವೆಗೆ ಅಂಕಿತರಾಗಿದ್ದರು.

ಕಾಂಗ್ರೆಸ್ ಮೇಲ್ಮನೆ ಸದಸ್ಯೆ ಮೋಟಮ್ಮ:
1996ರಿಂದಲೂ ಒಬ್ಬರಲ್ಲ ಇಬ್ಬರು ಸದಾ ಈಕೆಯ ಸೇವೆಗೆ ನಿಂತಿದ್ದರು.

ಕಳಂಕಿತ ಕಟ್ಟಾ:
ಕಳಂಕಿತ ಎಂದು ಬಿಜೆಪಿ ಪಕ್ಷವೇ ಕಟ್ಟಾ ಸುಬ್ರಮಣ್ಯ ನಾಯ್ಡುಗೆ ಟಿಕೆಟ್ ನೀಡದೇ ಹೋಯ್ತು. ಆದರೆ ಪೊಲೀಸ್ ಇಲಾಖೆ ಅವರಿಗೆ ನಿನ್ನೆ ಮೊನ್ನೆವರೆಗೂ orderly ಸೇವೆಯನ್ನು ನಿರ್ಲಜ್ಜವಾಗಿ ಒದಗಿಸುತ್ತಿತ್ತು.

ಮುಖ್ಯಮಂತ್ರಿ ಪಟ್ಟದಿಂದ ಇಳಿದರೂ...
ಬದ್ಧ ವೈರಿಗಳಾದ, ಒಬ್ಬರಾದನಂತರ ಒಬ್ಬರು ಮುಖ್ಯಮಂತ್ರಿ ಪಟ್ಟದಿಂದ ಇಳಿದ ಯಡಿಯೂರಪ್ಪ ಮತ್ತು ಸದಾನಂದ ಗೌಡರಿಗೆ ಸರಕಾರ ಅನಧಿಕೃತವಾಗಿ ಪೈಲಟ್ ವಾಹನಗಳನ್ನು ಉದಾರವಾಗಿ ನೀಡಿತ್ತು.

ಯಡಿಯೂರಪ್ಪನವರ ಸುಪುತ್ರ ರಾಘು:
ಯಡಿಯೂರಪ್ಪನವರ ಸುಪುತ್ರ ಬಿವೈ ರಾಘವೇಂದ್ರಗೂ ಅಷ್ಟೇ. ಗುರುರಾಯರ ಕ್ಷಮೆ ಕೋರುತ್ತಾ ಮೇಡಂ ರೂಪ ಅವರು ಸಂಸದ ರಾಘವೇಂದ್ರರ ಪೈಲಟ್ ಕಾರಿನ ಕೀಲಿಯನ್ನು ವಶಪಡಿಸಿಕೊಂಡಿದ್ದಾರೆ.

ಅಬ್ಬಬ್ಬಾ! ಪಟ್ಟಿ ಇನ್ನೂ ಇದೇರಿ ...
ಮಾಜಿ ಮಂತ್ರಿಗಳಾದ ಸಿಪಿ ಯೋಗೀಶ್ವರ್, ಪುಟ್ಟಸ್ವಾಮಿ, ಆನಂದ್ ಅಸ್ನೋಟಿಕರ್, ಆನಂದ್ ಸಿಂಗ್, ಕೃಷ್ಣಯ್ಯ ಶೆಟ್ಟಿ, ಉಮೇಶ್ ಕತ್ತಿ, ರಾಜು ಗೌಡ, ವಿ ಸೋಮಣ್ಣ, ರಾಮಚಂದ್ರ ಗೌಡ, ಕರುಣಾಕರ ರೆಡ್ಡಿ, ಅನಿಲ್ ಲಾಡ್.
ಕುತೂಹಲದ ಸಂಗತಿಯೆಂದರೆ ಕೆಇಬಿ (ಇಲಾಖೆಯ ಹೆಸರು ಬದಲಾಗಿಯೇ ಯಾವುದೋ ಕಾಲವಾಗಿದೆ) ಮಾಜಿ ಅಧ್ಯಕ್ಷ ವಿಶಾಲ್ ಈಶ್ವರ್ ಎಂಬ ಮಾಜಿ ಅಧಿಕಾರಿಗೆ 1994ರಿಂದಲೂ ಗನ್ ಮನ್ ನೀಡಲಾಗಿತ್ತು.












Click it and Unblock the Notifications