ಸಂಜಯ್ ದತ್ ವಿರುದ್ಧ ಜಾಮೀನುರಹಿತ ವಾರಂಟ್

ನಿರ್ಮಾಪಕರೊಬ್ಬರು ಸಂಜಯ್ ವಿರುದ್ಧ ಹೂಡಿದ್ದ ಕ್ರಿಮಿನಲ್ ಕೇಸಿನಲ್ಲಿ ಸಂಜಯ್ ವಿರುದ್ಧ ಮುಂಬೈ ನ್ಯಾಯಾಲಯವೊಂದು ಜಾಮೀನು ರಹಿತ ವಾರಂಟ್ ಹೊರಡಿಸಿದೆ. ತನ್ನ ಸಿನೆಮಾ ಚಿತ್ರೀಕರಣವನ್ನು ಸಂಜಯ್ ಪೂರ್ತಿಗೊಳಿಸಿಲ್ಲ ಎಂದು ನಿರ್ಮಾಪಕ ಶಕೀಲ್ ನೂರಾನಿ ಅವರು ದಾಖಲಿಸಿರುವ ಕೇಸಿನಲ್ಲಿ ವಾರಂಟ್ ಹೊರಡಿಸಲಾಗಿದೆ.
2002ರಲ್ಲಿ ದತ್ ತಮಗಾಗಿ ಚಿತ್ರ ಮಾಡಿಕೊಡುವುದಾಗಿ ಒಪ್ಪಿಕೊಂಡಿದ್ದರು. ಅವರಿಗೆ 50 ಲಕ್ಷ ರು. ಅಡ್ವಾನ್ಸ್ ನೀಡಲಾಗಿತ್ತು. ತಮಗೆ 2 ಕೋಟಿ ರು. ನಷ್ಟವಾಗಿದೆ ಅಲ್ಲದೆ, ದತ್ ಪರವಾಗಿ ಭೂಗತಲೋಕದಿಂದ ಪ್ರಾಣಬೆದರಿಕೆಗಳು ಬರುತ್ತಿವೆ ಎಂದು ಶಕೀಲ್ ನೂರಾನಿ ದೂರಿದ್ದಾರೆ. ಈ ಕೇಸಿನಲ್ಲಿ ಎರಡು ಬಾರಿ ಕೋರ್ಟಿಗೆ ಹಾಜರಾಗಲು ಸಂಜಯ್ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಮತ್ತೆ ಸಂಜಯ್ಗೆ ಬಂಧನದ ಭೀತಿ ಎದುರಾಗಿದೆ.
ಸಂಜಯ್ ವಿರುದ್ಧ ಮುಂಬೈ ಸ್ಫೋಟ ಪ್ರಕರಣ ಜಾರಿಯಲ್ಲಿದ್ದರೂ ಸಂಜಯ್ ಅವರನ್ನು ಹಾಕಿಕೊಂಡು ಸಿನೆಮಾ ಮಾಡಿದ್ದೇಕೆ ಮತ್ತು ಬೃಹತ್ ಮೊತ್ತದ ಹಣ ಹೂಡಿದ್ದೇಕೆ ಎಂದು ಕೋರ್ಟ್ ಪ್ರಶ್ನಿಸಿದೆ. ಇದು ನಿರ್ಮಾಪಕರಿಗೆ ಮೊದಲೇ ತಿಳಿಯಬೇಕಾಗಿತ್ತು ಎಂದು ಹೇಳಿಕೆ ನೀಡಿದೆ.
ಸರಣಿ ಸ್ಫೋಟದಲ್ಲಿ ಸಂಜಯ್ ಭಾಗಿಯಾಗಿಲ್ಲ ಎಂದು ತೀರ್ಮಾನ ನೀಡಲಾಗಿದ್ದರೂ, ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದಕ್ಕಾಗಿ ಅವರು 5 ವರ್ಷ ಕಾರಾಗೃಹ ಶಿಕ್ಷೆಗೆ ಗುರಿಯಾಗಿದ್ದಾರೆ. ಮೊದಲು 1.6 ವರ್ಷ ಜೈಲಿನಲ್ಲಿ ಕಳೆದಿದ್ದರಿಂದ ಇನ್ನೂ 3.6 ವರ್ಷ ಅವರು ಜೈಲಿನಲ್ಲಿ ಶಿಕ್ಷೆ ಅನುಭವಿಸಬೇಕಿದೆ. ಆದರೆ, ಅವರು ಅನೇಕ ಸಿನೆಮಾಗಳನ್ನು ಒಪ್ಪಿಕೊಂಡಿದ್ದರಿಂದ ಮಾನವೀಯತೆಯ ಆಧಾರದ ಮೇಲೆ 1 ತಿಂಗಳ ಕಾಲಾವಕಾಶವನ್ನು ಸುಪ್ರೀಂಕೋರ್ಟ್ ಒದಗಿಸಿದೆ.












Click it and Unblock the Notifications