ಚುನಾವಣೆ ನಂತರ ರೆಡ್ಡಿ ಬಿಡುಗಡೆ : ಶ್ರೀರಾಮುಲು
ಭಾನುವಾರ ಬಳ್ಳಾರಿಯ ಚೇಳ್ಳಗುರ್ಕಿ ಗ್ರಾಮದಲ್ಲಿ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಬಹಿರಂಗ ಚುನಾವಣಾ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿದ ಶ್ರೀರಾಮುಲು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಯಾವ ತಪ್ಪು ಮಾಡದ ರೆಡ್ಡಿಯನ್ನು ಕುತಂತ್ರದಿಂದ ಕಾಂಗ್ರೆಸ್ ಜೈಲಿಗೆ ಕಳುಹಿಸಿದೆ ಎಂದು ಅವರು ಆರೋಪಿಸಿದರು.
ಆಂಧ್ರ ಪ್ರದೇಶದಲ್ಲಿ ಜಗಮೋಹನ್ ರೆಡ್ಡಿ ಮತ್ತು ಕರ್ನಾಟಕದಲ್ಲಿ ಜನಾರ್ದನ ರೆಡ್ಡಿ ಕಾಂಗ್ರೆಸ್ ಗೆಲುವಿಗೆ ಅಡ್ಡಿ ಪಡಿಸುತ್ತಿದ್ದರು. ಆದ್ದರಿಂದ, ಅವರನ್ನು ಜೈಲಿಗೆ ಕಳುಹಿಸಿ ಕಾಂಗ್ರೆಸ್ ಕುತಂತ್ರ ರಾಜಕಾರಣ ಮಾಡುತ್ತಿದೆ ಎಂದು ಅವರು ದೂರಿದರು.
ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿರಬಹುದು. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು ಭ್ರಮೆ ಎಂದು ಅವರು ಟೀಕಿಸಿದರು. ನಾನು ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದರೂ ಜನರ ಆಶೀರ್ವಾದ ನನ್ನ ಮೇಲಿದೆ ಬಿಎಸ್ಆರ್ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. (ಬಳ್ಳಾರಿ ಬಿರು ಬಿಸಿಲಿನ ಕ್ಷೇತ್ರ ಪರಿಚಯ)
ರಾಜಕೀಯ ನಿವೃತ್ತಿ : ಕೇಂದ್ರದ ಯುಪಿಎ ಸರ್ಕಾರ ರೈತರ ಸಾಲಮನ್ನಾ ಮಾಡಲಿ, ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಲಿ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಶ್ರೀರಾಮುಲು ಸವಾಲು ಹಾಕಿದರು.
ರಾಣಿಗೆ ಗೃಹ ಬಂಧನ : ಹೊಸಪೇಟೆ ವಿಜಯನಗರ ಕ್ಷೇತ್ರದ ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ರಾಣಿ ಸಂಯುಕ್ತಾರನ್ನು ಗೃಹ ಬಂಧನದಲ್ಲಿ ಇಡಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಇದನ್ನು ಸ್ವತಃ ರಾಣಿ ಸಂಯುಕ್ತಾ ಒಪ್ಪಿಕೊಂಡಿದ್ದಾರೆ.
ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಣಿ ಸಂಯುಕ್ತಾ, ಸಚಿವ ಆನಂದ್ ಸಿಂಗ್ ವಿರುದ್ಧ ಸ್ಪರ್ಧಿಸದೇ ತಟಸ್ಥ ನಿಲುವು ಪಡೆಯಬೇಕೆಂದು ಕುಟುಂಬದವರು ತನ್ನನ್ನು ಎರಡು ದಿನ ಗೃಹ ಬಂಧನದಲ್ಲಿ ಇಟ್ಟಿದ್ದರು ಎಂದು ಆರೋಪಿಸಿದ್ದಾರೆ.
ಬಳ್ಳಾರಿಯಲ್ಲಿ ಸಿಬಿಐ: ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಖರ್ಚು ವೆಚ್ಚಗಳ ಮೇಲೆ ನಿಗಾವಹಿಸಲು ಸಿಬಿಐ ಅಧಿಕಾರಿಗಳ ಒಂದು ತಂಡ ಬಳ್ಳಾರಿಯಲ್ಲಿ ಬೀಡು ಬಿಟ್ಟಿದೆ. ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅಧಿಕಾರಿಗಳು ಶ್ರೀರಾಮುಲು ಅವರ ಖರ್ಚು ವೆಚ್ಚಗಳ ಮೇಲೆ ಕಣ್ಣಿಟ್ಟು ಬಳ್ಳಾರಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. (ಬಿಎಸ್ಆರ್ ಪ್ರಣಾಳಿಕೆ)
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ