ಈ ಬಾರಿ ಸಮ್ಮಿಶ್ರ ಸರ್ಕಾರ ದೇವೇಗೌಡರ ಭವಿಷ್ಯ
ಗುರುವಾರ ಸಂಜೆ ಪದ್ಮನಾಭನಗರದ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ದೇವೇಗೌಡರು, ಸಮ್ಮಿಶ್ರ ಸರ್ಕಾರ ವ್ಯವಸ್ಥೆ, ರಾಜ್ಯಕ್ಕೆ ಕಾಲಿಟ್ಟಿದೆ. ಪ್ರಾದೇಶಿಕ ಪಕ್ಷಗಳ ಬೆಂಬಲ ವಿಲ್ಲದೇ ಯಾರು ಸರ್ಕಾರ ರಚಿಸುವುದಿಲ್ಲ ಎಂದರು. ಜೆಡಿಎಸ್ ಸರ್ಕಾರ ರಚನೆಯಲ್ಲಿ ಮಹತ್ತರ ಪಾತ್ರ ವಹಿಸಲಿದೆ ಎಂದು ಪರೋಕ್ಷವಾಗಿ ನುಡಿದರು.
ಬೆಂಗಳೂರು ಬಾಂಬ್ ಸ್ಫೋಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಕರಣದ ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಮತ್ತು ಬಿಜೆಪಿ ಹೋರಾಟ ನಡೆಸುತ್ತಿವೆ ಎಂದು ಆರೋಪಿಸಿದರು. ತನಿಖೆಯಿಂದ ಜನತೆಗೆ ಸತ್ಯಾಂಶ ತಿಳಿಯಬೇಕು ಎಂದು ಹೇಳಿದರು.
ಪಕ್ಷದಲ್ಲಿ ಭಿನ್ನಮತವಿದೆ : ವಿಜಾಪುರ, ಮುಳಬಾಗಿಲು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಪಕ್ಷದ ಟಿಕೆಟ್ ಹಂಚಿಕೆ ಸಂಬಂಧ ಒಂದಷ್ಟು ಭಿನ್ನಾಭಿಪ್ರಾಯ ಇದೆ ಎಂದು ಗೌಡರು ಸ್ಪಷ್ಟ ಪಡಿಸಿದರು.
ಹಾಸನದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಜವರೇಗೌಡ ರಾಜೀನಾಮೆ ನೀಡಿರುವುದು ಗಮನಕ್ಕೆ ಬಂದಿದೆ. ಮುದ್ದೇಬಿಹಾಳದಲ್ಲಿ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಪಕ್ಷ ಮಾತುಕತೆ ಮೂಲಕ ಬಗೆಹರಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಪ್ರವಾಸ : ಏ.19ರಿಂದ ಮೇ 3ರ ತನಕ ರಾಜ್ಯಾದ್ಯಂತ ಚುನಾವಣೆ ಪ್ರಚಾರಕ್ಕಾಗಿ ಪ್ರವಾಸ ನಡೆಸಲಿದ್ದೇನೆ ಎಂದ ದೇವೇಗೌಡರು, ಶುಕ್ರವಾರ ಹಾಸನದಿಂದಲೇ ಪ್ರಚಾರ ಆರಂಭಿಸದ್ದೇನೆ ಎಂದು ಘೋಷಿಸಿದರು.
ಕುಮಾರಸ್ವಾಮಿ, ಬಂಡೆಪ್ಪ ಖಾಶೆಂಪುರ್, ನಾಣಯ್ಯ, ಎಚ್.ಡಿ.ರೇವಣ್ಣ, ಪಿ.ಜಿ.ಆರ್.ಸಿಂಧ್ಯಾ ಪಕ್ಷದ ಪರವಾರ ಎಲ್ಲಾ ಜಿಲ್ಲೆಗಳಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ವಿವರಿಸಿದರು.
ಖೇಣಿಗೆ ಬುದ್ದಿ ಹೆಚ್ಚಾಗಿದೆ : ದೇವೇಗೌಡರ ವಿರುದ್ಧ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಹೇಳಿಕೆ ನೀಡಿರುವ ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಬಗ್ಗೆ ಪ್ರತಿಕ್ರಿಯಿಸಿದ ಗೌಡರು, ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತಹ ಪರಿಸ್ಥತಿ ಖೇಣಿ ಅವರದ್ದು ಎಂದು ಲೇವಡಿ ಮಾಡಿದರು. [ಯಡಿಯೂರಪ್ಪ ಹೇಳಿದ ಭವಿಷ್ಯ]
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ