ಬುಧವಾರದ ರಾಜಕೀಯ ಬೆಳವಣಿಗೆಗಳು

ಹುಬ್ಬಳ್ಳಿಯ ಮೂರು ಸಾವಿರ ಮಠಕ್ಕೆ ದಂಪತಿಗಳ ಸಮೇತ ಭೇಟಿ ನೀಡಿ ಗುರುರಾಜ ಯೋಗೀಂದ್ರ ಸ್ವಾಮೀಜಿ ಆಶೀರ್ವಾದ ಪಡೆದ ಜಗದೀಶ್ ಶೆಟ್ಟರ್, ನಂತರ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಬಿಜೆಪಿ ಸರ್ಕಾರ ಮುಂದಿನ ಚುನಾವಣೆಯಲ್ಲೂ ಸ್ಪಷ್ಟ ಬಹುಮತ ಪಡೆದು ಅಧಿಕಾರ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ ನಗರ ಕ್ಷೇತ್ರದಿಂದ ಮತ್ತು ಆರ್.ಅಶೋಕ್ ಪದ್ಮನಾಭ ನಗರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಹಿರಿಯ ನಟ ಅಂಬರೀಶ್ ಬಂಡಾಯದ ನಡುವೆಯೇ ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು.
ಒಟ್ಟು ನಾಮಪತ್ರ : ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿತ್ತು. ವಿಧಾನಸಭೆ ಚುನಾವಣೆಗೆ ಒಟ್ಟು 2,942 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ರಾಜ್ಯ ಮುಖ್ಯಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಹೇಳಿದ್ದಾರೆ. ಬಿಜೆಪಿಯಿಂದ 360, ಕಾಂಗ್ರೆಸ್ 408, ಜೆಡಿಎಸ್ 309 ಬಿಎಸ್ಆರ್ ಕಾಂಗ್ರೆಸ್ 131, ಕೆಜೆಪಿಯ 213, ಪಕ್ಷೇತರರಾಗಿ 1051 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ದಾವಣಗೆರೆ ಜಿಲ್ಲೆ ಮಾಯಕೊಂಡ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ, 31 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಸೈಕಲ್ ಏರಿದ ಯೋಗೇಶ್ವರ್ : ಮಾಜಿ ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಸಮಾಜವಾದಿ ಪಕ್ಷ ಸೇರಿದ್ದಾರೆ. ಕಾಂಗ್ರೆಸ್ ಟಿಕೆಟ್ ವಂಚಿತ ಯೋಗೇಶ್ವರ್ ಇಂದು ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಚನ್ನಪಟ್ಟಣ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.(ಲಾಠಿ ಏಟಿನ ಮಧ್ಯೆ ಯೋಗೇಶ್ವರ್ ನಾಮಪತ್ರ )
ಬಾಂಬ್ ಸ್ಪೋಟ : ಬೆಂಗಳೂರಿನ ಬಿಜೆಪಿ ಕಚೇರಿಯ ಬಳಿ ಬುಧವಾರ ಬಾಂಬ್ ಸ್ಪೋಟಿಸಿ 16 ಜನರು ಗಾಯಗೊಂಡಿದ್ದಾರೆ. ಸ್ಪೋಟದ ಬಗ್ಗೆ ತನಿಖೆ ನಡೆಯುತ್ತಿದ್ದು, ಸ್ಪೋಟದ ಜವಾಬ್ದಾರಿಯನ್ನು ಯಾವ ಸಂಘಟನೆಗಳು ಹೊತ್ತುಕೊಂಡಿಲ್ಲ.(ಚಿತ್ರಗಳಲ್ಲಿ ಬಾಂಬ್ ಸ್ಪೋಟ)
ವಿವಾದ ಹುಟ್ಟು ಹಾಕಿದ ವಿಶ್ವನಾಥ್ : ಬಿಜೆಪಿ ಕಚೇರಿ ಬಳಿ ಆರ್ ಎಸ್ ಎಸ್ ಬಾಂಬ್ ಇಟ್ಟಿದೆ. ಮಲೆಗಾಂವ್ ಮಾದರಿಯ ಕೃತ್ಯವಿದಾಗಿದೆ ಎಂದು ಹೇಳುವ ಮೂಲಕ ಮಾಜಿ ಸಚಿವ ಹೆಚ್.ವಿಶ್ವನಾಥ್ ಹೊಸ ವಿವಾದ ಹುಟ್ಟು ಹಾಕಿದ್ದಾರೆ. ಚುನಾವಣೆ ನೀತಿ ಸಂಹಿತಿ ಜಾರಿಯುಲ್ಲಿರುವಾಗ ವಿಶ್ವನಾಥ್ ಹೇಳಿಕೆ ತೀವ್ರ ವಿವಾದ ಹುಟ್ಟು ಹಾಕಬಹುದಾಗಿದೆ.
ರಾಯಚೂರಿನಲ್ಲಿ ಮದ್ಯದ ಹೊಳೆ : ರಾಯಚೂರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1.39 ಲಕ್ಷ ಮೌಲ್ಯದ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಯಾವ ಪಕ್ಷ ಅಭ್ಯರ್ಥಿಗಳಿಗೆ ಸೇರಿದ ಮದ್ಯ ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಮಾಲೂರಿನಲ್ಲಿ ಬಿಜೆಪಿ ಸ್ಪರ್ಧೆ ಇಲ್ಲ : ಬಿಜೆಪಿ ತೊರೆದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೃಷ್ಣಯ್ಯ ಶೆಟ್ಟಿ ವಿರುದ್ಧ ಬಿಜೆಪಿ ಅಭ್ಯರ್ಥಿಗಳಿಲ್ಲ. ಮಾಲೂರು ಕ್ಷೇತ್ರದಿಂದ ವೆಂಕಟೇಶ ಗೌಡರಿಗೆ ಟಿಕೆಟ್ ನೀಡಲಾಗಿತ್ತು. ಆದರೆ, ಅವರು ಇಂದು ನಾಮಪತ್ರ ಸಲ್ಲಿಸಿಲ್ಲ. ಕೃಷ್ಣಯ್ಯ ಶೆಟ್ಟಿ ಆಪ್ತರಾಗಿರುವ ವೆಂಕಟೇಶ್ ಕೊನೆ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications