ಚುನಾವಣೆ : ಮಂಗಳವಾರದ ಧೂಳು ದುಮ್ಮ
ಮಂಡ್ಯ ಜಿಲ್ಲಾ ಕಾಂಗ್ರೆಸ್ ವಕ್ತಾರ ಸತ್ಯಾನಂದ ಅಂಬರೀಶ್ ಹೈ ಕಮಾಂಡ್ ಗೆ ಬೆದರಿಕೆ ಹಾಕಿ ಟಿಕೆಟ್ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ನನಗೆ ಬ್ಲಾಕ್ ಮೇಲ್ ಮಾಡಿ ಟಿಕೆಟ್ ಪಡೆಯುವ ಅವಶ್ಯಕತೆ ಇಲ್ಲ. ಸತ್ಯಾನಂದ ಅವರ ಹೆಸರಿಗೆ ತಕ್ಕಂತೆ ನಡೆದುಕೊಳ್ಳಲಿ ಎಂದು ಅಂಬರೀಶ್ ಗುಡುಗಿದ್ದಾರೆ.
ಭದ್ರಾವತಿಯಲ್ಲೂ ಭಾರೀ ಕಾಳಗ : ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರಿಗೆ ಟಿಕೆಟ್ ನೀಡಿರುವುದು ಭದ್ರಾವತಿ ಹಾಲಿ ಶಾಸಕ ಸಂಗಮೇಶ್ ರನ್ನು ಕೆರಳಿಸಿದೆ. ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ಅವರು ಘೋಷಿಸಿದ್ದಾರೆ.(ಕಾಂಗ್ರೆಸ್ ಅಂತಿಮ ಪಟ್ಟಿ)
ಬಳ್ಳಾರಿಯಲ್ಲಿ ರಾಜೀನಾಮೆ ಬೆದರಿಕೆ : ಅನಿಲ್ ಲಾಡ್ ಗೆ ಬಳ್ಳಾರಿ ನಗರ ಕ್ಷೇತ್ರದಲ್ಲಿ ಟಿಕೆಟ್ ನೀಡಿರುವುದನ್ನು ಪ್ರತಿಭಟಿಸಿ ಬಳ್ಳಾರಿಯಲ್ಲಿ ಬಂಡಾಯದ ಕಹಳೆ ಮೊಳಗಿದೆ. ಕಾಂಗ್ರೆಸ್ ನಿರ್ಧಾರ ಬದಲಿಸದಿದ್ದರೆ ಮಹಾನಗರ ಪಾಲಿಕೆ ಸದಸ್ಯರು ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ.(ಕೈ ಎರಡನೇ ಪಟ್ಟಿ)
ಕೈ ಕಚೇರಿಗೆ ಕಲ್ಲು : ಚಿಕ್ಕಬಳ್ಳಾಪುರ ಟಿಕೆಟ್ ಆಕಾಂಕ್ಷಿ ಅಂಜನಪ್ಪ ಬೆಂಬಲಿಗರು ಚಿಕ್ಕಬಳ್ಳಾಪುರ ಕಾಂಗ್ರೆಸ್ ಕಚೇರಿಗೆ ಕಲ್ಲು ತೂರಿದ್ದಾರೆ. ಡಿ.ಸುಧಾಕರಾ ಅವರಿಗೆ ಟಿಕೆಟ್ ನೀಡಿರುವುದು ಅಂಜನಪ್ಪ ಬಂಡಾಯಕ್ಕೆ ಕಾರಣವಾಗಿದೆ.
ಶಾಮನೂರು ಡೆಡ್ ಲೈನ್ : ತಮ್ಮ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಇಂದು ರಾತ್ರಿಯೊಳಗೆ ದಾವಣಗೆರೆ ಉತ್ತರ ಕ್ಷೇತ್ರದ ಟಿಕೆಟ್ ಘೋಷಿಸಬೇಕು ಎಂದು ಕೆಪಿಸಿಸಿ ಖಚಾಂಚಿ ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ನಾಯಕರಿಗೆ ಡೆಡ್ ಲೈನ್ ನೀಡಿದ್ದಾರೆ.
ಕೆಜೆಪಿ ನಿರ್ಣಾಯಕ : ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿ ಹೊರತು ಪಡಿಸಿ ಬೇರೆ ಪಕ್ಷಗಳು ಸರ್ಕಾರ ರಚಿಸುವುದು ಅಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುನರುಚ್ಚರಿಸಿದ್ದಾರೆ. ಬಿಜೆಪಿ 40 ಸ್ಥಾನ ಗೆಲ್ಲುವುದಿಲ್ಲ. ಕಾಂಗ್ರೆಸ್ 110 ಸ್ಥಾನ ಪಡೆಯುವುದು ಕನಸಿನ ಮಾತು ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಜೆಡಿಎಸ್ ಗೂ ಕಷ್ಟ ಕಷ್ಟ : ತುಮಕೂರು ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಗೋವಿಂದರಾಜ್ ನಾಮಪತ್ರ ಸಲ್ಲಿಸಿದ್ದರಿಂದ ಬಂಡಾಯ ಸ್ಪೋಟಗೊಂಡಿದೆ. ನಗರ ಸಭೆ ಮಾಜಿ ಸದಸ್ಯ ನರಸಿಂಹರಾಜು, ಪಕ್ಷದ ನಾಯಕರಾದ ಬೋರೇಗೌಡಮ ಟಿ.ಎಚ್.ಕೃಷ್ಣಪ್ಪ ಮುಂತಾದವರು ಟಿಕೆಟ್ ದೊರೆಯದಿದ್ದರೆ ಬಂಡಾಯ ಅಭ್ಯರ್ಥಿಯ ಕಣಕ್ಕಿಳಿಸುವುದಾಗಿ ಹೇಳಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಅಮಂಗಳ: ಇಂದು ಮಂಗಳವಾರವಾದ್ದರಿಂದ ನಾಮಪತ್ರ ಸಲ್ಲಿಕೆಗೆ ಅಭ್ಯರ್ಥಿಗಳು ಕೊಂಚ ಹಿಂದೇಟು ಹಾಕಿದರು ಕೇವಲ 2001 ನಾಮಪತ್ರಗಳು ಇಂದು ಸಲ್ಲಿಕೆಯಾಗಿವೆ. ಬುಧವಾರ ಕೊನೆಯ ದಿನವಾಗಿದ್ದು, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನಾಳೆ ಉಮೇದುವಾರಿಕೆ ಸಲ್ಲಿಸಲಿದ್ದಾರೆ.
46 ಲಕ್ಷ ವಶಕ್ಕೆ : ಬಾಗಲಕೋಟೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಸಾಗಸುತ್ತಿದ್ದ 46 ಲಕ್ಷ ರೂ.ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಲೋಕಾಪುರ ಠಾಣೆ ವ್ಯಾಪ್ತಿಯಲ್ಲಿ ಲಾರಿಯಲ್ಲಿ ಸಾಗಿಸುತ್ತಿದ್ದ 25 ಲಕ್ಷ ಹಣವನ್ನು ಚೆಕ್ ಪೋಸ್ಟ್ ಬಳಿ ಪೊಲೀಸರು ವಶಪಡಿಸಿಕೊಂಡರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ