ರಾಜಕೀಯ ಜನ್ಮ ನೀಡಿದ ಕ್ಷೇತ್ರ ಬಿಡೋದುಂಟೆ?

ಲೇಟೆಸ್ಟ್ ಸುದ್ದಿ: ಮಾವಿನಕೆರೆ ರಂಗನಾಥ, ಲಕ್ಷ್ಮಿನರಸಿಂಹ ಸ್ವಾಮಿ, ಆಂಜನೇಯಸ್ವಾಮಿ ದರ್ಶನ ಪಡೆದ ರೇವಣ್ಣ ದಂಪತಿಗಳು ಸೋಮವಾರ ಮಧ್ಯಾಹ್ನ ರಾಹುಕಾಲ ಮುಗಿಸಿಕೊಂಡು ಮೆರವಣಿಗೆ ನಡೆಸಿದರು. ಹೊಳೆ ನರಸೀಪುರದ ಜೆಡಿಎಸ್ ಅಭ್ಯರ್ಥಿಯಾಗಿ ರೇವಣ್ಣ ಅವರು ನಾಮಪತ್ರ ಸಲ್ಲಿಸಿದರು.
ಭಾನುವಾರ ಹೊಳೆನರಸೀಪುರ ಕ್ಷೇತ್ರದ ಕುಂದೂರು ಮಠದಲ್ಲಿ ನಡೆದ ಜೆಡಿಎಸ್ ಬಹಿರಂಗ ಸಭೆಯಲ್ಲಿ ಮಾತನಾಡಿದ ರೇವಣ್ಣ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ನನಗೆ ರಾಜಕೀಯ ಜನ್ಮ ನೀಡಿದ ಹೊಳೆನರಸೀಪುರ ಕ್ಷೇತ್ರ ಬಿಟ್ಟು ಬೇರಲ್ಲೂ ಹೋಗುವ ಮಾತೇ ಇಲ್ಲ. ರಾಜಕೀಯದಲ್ಲಿದ್ದರೆ ಅದು ಈ ಕ್ಷೇತ್ರದ ಜನತೆಯೊಂದಿಗೆ ಮಾತ್ರ ಎಂದು ರೇವಣ್ಣ ಹೇಳಿದರು.
ರೇವಣ್ಣ ಬಗ್ಗೆ ಹಬ್ಬಿದ್ದ ಸುದ್ದಿ: ಮಹಿಳೆಯಿಂದ ನಿಮಗೆ ಕಂಟಕವಿದೆ. ಹಾಗಾಗಿ ಪರಂಪರಾಗತ ಹೊಳೇನರಸೀಪುರವನ್ನು ಬಿಟ್ಟು ಪಕ್ಕದ ಶ್ರವಣಬೆಳಗೊಳ ಕ್ಷೇತ್ರ ಆಯ್ಕೆ ಮಾಡಿಕೊಳ್ಳಿ ಎಂದು ಜ್ಯೋತಿಷಿಗಳು ಸಲಹೆ ನೀಡಿದ್ದರಂತೆ. ಈ ಹಿಂದೆ ದೇವೇಗೌಡರು ಕೂಡಾ ಒಮ್ಮೆ ತೇಜಸ್ವಿನಿ ಎಂಬ ಮಹಿಳೆಯ ವಿರುದ್ಧ ಸೋತಿದ್ದು ರೇವಣ್ಣ ಅವರಿಗೆ ನೆನಪಿಗೆ ಬಂದು ಭೀತಿ ಕಾಡಿತ್ತಂತೆ.
ಹೊಳೇನರಸೀಪುರದಲ್ಲಿ ಕಾಂಗ್ರೆಸ್ಸಿನ ಅನುಪಮ ಮಹೇಶ್ ಅವರಿಗೆ (ದಿ. ಜಿ. ಪುಟ್ಟಸ್ವಾಮಿ ಗೌಡರ ಸೊಸೆ) ಮತ್ತೆ ಟಿಕೆಟ್ ಸಿಕ್ಕಿದೆ. ಯಾವುದೇ ಕಾರಣಕ್ಕೂ ಮಹಿಳೆಯ ಎದುರು ಕಣಕ್ಕೆ ಇಳಿಯಬೇಡಿ ಎಂದು ಸಲಹೆ ನೀಡಿ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಜ್ಯೋತಿಷಿ ಇಷ್ಟು ಭವಿಷ್ಯ ಹೇಳಿದ್ದೇ ತಡ ರೇವಣ್ಣ ಸ್ವಕುಟುಂಬ ಪರಿವಾರ ಸಮೇತರಾಗಿ ಶೃಂಗೇರಿ, ಕೊಲ್ಲೂರು ಕಡೆಗೆ ತೀರ್ಥಯಾತ್ರೆ ಹೋಗಿಬಂದರಂತೆ. ಹೋಮ ಹವನಗಳಲ್ಲೇ ವಿರೋಧಿಗಳನ್ನು ಸದೆಬಡಿಯುವ ಗೌಡರ ಕುಟುಂಬದ ರೇವಣ್ಣ ಅವರು ಅಲ್ಲೆಲ್ಲಾ ಚಂಡಿಕಾ ಹೋಮ ನಡೆಸಿದ್ದಾರೆ.
ಅದಾಗುತ್ತಿದ್ದಂತೆ ಶ್ರವಣಬೆಳಗೊಳದ ಜೆಡಿಎಸ್ ಅಭ್ಯರ್ಥಿ ಸಿಎನ್ ಬಾಲಕೃಷ್ಣ ಅವರಿಗೆ ಫೋನಾಯಿಸಿ, ಈ ಬಾರಿ ನಾನೇ ನಿನ್ನ ಕ್ಷೇತ್ರದಿಂದ ನಿಲ್ತಿದ್ದೀನಿ ಎಂದು ಬಾಲಕೃಷ್ಣಗೆ ಮಾತ್ರ ಕೇಳಿಸುವಂತೆ ಹೇಳಿದ್ದಾರೆ ಎಂಬ ಸುದ್ದಿ ಬಂದಿತ್ತು.
ಅದರೆ, ಎಲ್ಲಾ ಸುದ್ದಿಗಳನ್ನು ಬದಿಗೊತ್ತಿದ ರೇವಣ್ಣ ಅವರು ಹೊಳೆನರಸೀಪುರದಿಂದಲೇ ಸ್ಪರ್ಧಿಸುವುದಾಗಿ ಘೋಷಿಸಿರುವುದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆ. ಆದರೆ, ಭವಾನಿ ರೇವಣ್ಣ ಸ್ಪರ್ಧೆ ಬಗ್ಗೆ ಗೊಂದಲ ಇನ್ನೂ ಮುಂದುವರೆದಿದೆ.












Click it and Unblock the Notifications