ವೀರಪ್ಪನ್ ಬಂಟರಿಗೆ ಮರಣದಂಡನೆ ಖಾಯಂ ಆಯ್ತು
ಇದರೊಂದಿಗೆ Khalistan Liberation Force (KLF) ಉಗ್ರ ಭುಲ್ಲರ್ ಗೆ ಯಾವುದೇ ಕ್ಷಣ ಗಲ್ಲು ಶಿಕ್ಷೆಯಾಗಬಹುದು. ಈ ಬಗ್ಗೆ ಮಹತ್ವದ ಆದೇಶ ನೀಡಿರುವ ನ್ಯಾಯಮೂರ್ತಿ ಜಿಎಸ್ ಸಿಂಘ್ವಿ ನೇತೃತ್ವದ ನ್ಯಾಯಪೀಠ ಶಿಕ್ಷೆ ಕಡಿತಕ್ಕೆ ವಿಳಂಬ ಮಾನದಂಡವಲ್ಲ ಎಂದು ಸಾರಿದೆ.
ಗಮನಾರ್ಹವೆಂದರೆ, ಇದೇ ತೀರ್ಪನ್ನು ಆಧಾರವಾಗಿಸಿಕೊಂಡು ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವವರೂ ಸೇರಿದಂತೆ ಒಟ್ಟು 17 ಮಂದಿಗೆ ನೇಣು ಶಿಕ್ಷೆಯಾಗುವುದು ದೃಢಪಟ್ಟಿದೆ.
ಹಾಗಾಗಿ, ಸುಪ್ರೀಂ ಕೋರ್ಟ್ ಭುಲ್ಲರ್ ಗೆ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿರುವುದು ವೀರಪ್ಪನ್ ಬಂಟರಿಗೂ ಯಮಪಾಶವಾಗಿ ಪರಿಣಮಿಸುವ ಸಾಧ್ಯತೆಯಿದೆ. ಪ್ರಸ್ತುತ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಕಾಡುಗಳ್ಳ ವೀರಪ್ಪನ್ ನ ನಾಲ್ವರು ಬಂಟರೂ ಸಹ ಇದೇ ನೆಪವೊಡ್ಡಿ ತಮಗೆ ಗಲ್ಲು ಬೇಡ. ಬದಲಿಗೆ ಜೀವಾವಧಿ ಶಿಕ್ಷೆ ನೀಡಿ ಎಂದು ಸುಪ್ರೀಂಕೋರ್ಟಿಗೆ ಅಲವತ್ತುಕೊಂಡಿದ್ದಾರೆ.
ಜ್ಞಾನಪ್ರಕಾಶ್, ಸೈಮನ್, ಮೀಸೈಕಾರನ್ ಮಾದಯ್ಯ ಮತ್ತು ಬಿಲವೇಂದ್ರನ್ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಬಂಧಿಯಾಗಿರುವ ವೀರಪ್ಪನ್ ಸಹಚರರು.
ಯುವ ಕಾಂಗ್ರೆಸ್ ನಾಯಕ ಎಂಎಸ್ ಬಿಟ್ಟ ಅವರನ್ನು ಗುರಿಯಾಗಿಸಿಕೊಂಡು ಭುಲ್ಲರ್ ಕಾರ್ ಬಾಂಬ್ ಸ್ಫೋಟಿಸಿದ್ದ. ಈ ಘಟನೆಯಲ್ಲಿ 9 ಜನ ಮೃತಪಟ್ಟಿದ್ದರು. ಈ ಸಂಬಂಧ ಭುಲ್ಲರ್ ಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.