ಕೇಂದ್ರ ಸಚಿವರ ಮಕ್ಕಳಿಗೆ ಟಿಕೆಟ್ ಸಿಕ್ಕಿತು?

ನವದೆಹಲಿಯಲ್ಲಿ 47 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಕಸರತ್ತು ನಡೆಯುತ್ತಿದ್ದು, ಮಂಗಳವಾರ ನಿರಂತರವಾಗಿ ಸಭೆಗಳು ನಡೆದಿವೆ. ಸೋಮವಾರ ದೆಹಲಿಗೆ ಮರಳಿದ ಸೋನಿಯಾ ಗಾಂಧಿ ಕೇಂದ್ರ ನಾಯಕರ ಮಕ್ಕಳಿಗೆ ಟಿಕೆಟ್ ನೀಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಚಿತ್ತಾಪುರದಿಂದ ಪ್ರಿಯಾಂಕ ಖರ್ಗೆ, ಕೆಜಿಎಫ್ ನಿಂದ ಕೆ.ಎಚ್.ಮುನಿಯಪ್ಪ ಪುತ್ರಿ ರೂಪಕಲಾ ಶಶಿಧರ್, ಜಯನಗರ ಕ್ಷೇತ್ರದಿಂದ ಸಚಿವ ರೆಹಮಾನ್ ಖಾನ್ ಪುತ್ರ ಮನ್ಸೂರ್ ಅಲಿಖಾನ್, ಹೆಬ್ಬಾಳ ಕ್ಷೇತ್ರದಿಂದ ಜಾಫರ್ ಷರೀಫ್ ಅವರ ಮೊಮ್ಮಗ ರೆಹಮಾನ್ ಷರೀಫ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇವರಲ್ಲಿ ಮೂವರಿಗೆ ಟಿಕೆಟ್ ನೀಡುವ ಕುರಿತು ಅಂತಿಮ ಒಪ್ಪಿಗೆ ದೊರೆತಿದೆ.
ಪಕ್ಷೇತರರಿಗೂ ಖುಷಿ : ಪಕ್ಷೇತರರಾದ ನರೇಂದ್ರ ಸ್ವಾಮಿ ಹಾಗೂ ಸುಧಾಕರ್ ಗೆ ಟಿಕೆಟ್ ನೀಡುವ ಕುರಿತು ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ವಿವರವಾದ ಚರ್ಚೆಗಳು ನಡೆದಿವೆ. ಅಂತಿಮವಾಗಿ ನರೇಂದ್ರಸ್ವಾಮಿಗೆ ಟಿಕೆಟ್ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸುಧಾರಕ್ ವಿರುದ್ಧ ಸಿಬಿಐ ತನಿಖೆ ನಡೆಯುತ್ತಿರುವುದರಿಂದ ಟಿಕೆಟ್ ನಿರಾಕರಿಸಲಾಗಿದೆ ಎಂದು ತಿಳಿದುಬಂದಿದೆ.
ಕೆಪಿಸಿಸಿ ಖಜಾಂಚಿ ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡುವ ಕುರಿತು ಚರ್ಚೆಗಳು ನಡೆದಿದ್ದು, ಅಂತಿಮ ನಿರ್ಧಾರವನ್ನು ಸೋನಿಯಾ ಗಾಂಧಿ ಹೆಗಲಿಗೆ ವಹಿಸಲಾಗಿದೆ.
ಆಸ್ಕರ್ ಸಂಧಾನಕಾರ : ಟಿಕೆಟ್ ಗಾಗಿ ಭಾರೀ ಪೈಪೋಟಿ ಏರ್ಪಟ್ಟಿರುವ ಬಳ್ಳಾರಿ ನಗರ, ಪುತ್ತೂರು, ಸುರತ್ಕಲ್, ಭದ್ರಾವತಿ, ಚಿಕ್ಕನಾಯಕನಹಳ್ಳಿ, ರಾಜರಾಜೇಶ್ವರಿ ನಗರ ಮುಂತಾದ ಕ್ಷೇತ್ರಗಳ ಅಭ್ಯರ್ಥಿಗಳ ನಡುವೆ ಸಂಧಾನ ನಡೆಸಿ, ಒಬ್ಬ ಏಕೈಕ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡೀಸ್ ಅವರಿಗೆ ವಹಿಸಲಾಗಿದೆ.
ಎರಡನೇ ಪಟ್ಟಿ ಅಂತಿಮಗೊಳಿಸುವ ಕಸರತ್ತು ಇಂದು ಅಂತಿಮಗೊಳ್ಳಲಿದ್ದು, ಸಂಜೆ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಇಂದು ಅಥವ ನಾಳೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications