ತುಮಕೂರು ಜೆಡಿಎಸ್ ಅಭ್ಯರ್ಥಿ ಸೆರೆಯಾದರಂತೆ

ರವಿವಾರ ಸಂಜೆ 7 ಗಂಟೆ ಸುಮಾರಿಗೆ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಹಾಗೂ ಅವರ ಸಹಚರರು ಹಣ ಹಂಚುವ ವಿಷಯ ತಿಳಿದು ಬಂದಿದೆ. ಚುನಾವಣಾಧಿಕಾರಿ ನಕುಲ್ ಹಾಗೂ ಉಪಚುನಾವಣಾಧಿಕಾರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಹೆಬ್ಬಾಳ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಿ.ಸಿ. ಗೌರಿಶಂಕರ್ ಮತದಾರರನ್ನು ತಮ್ಮ ಪಕ್ಷದತ್ತ ಸೆಳೆಯಲು ಹಣ ಹಂಚುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಅಭ್ಯರ್ಥಿ ಗೌರಿಶಂಕರ್ ಮತ್ತು ಇತರ ನಾಲ್ವರನ್ನು ವಶಕ್ಕೆ ಪಡೆದು ಮತದಾರರಿಗೆ ಹಂಚಲು ತಂದಿದ್ದ ನಾಲ್ಕು ಲಕ್ಷ ರೂಪಾಯಿಗಳಿಗೂ ಅಧಿಕ ಹಣವನ್ನು ವಶಪಡಿಸಿ ಕೊಳ್ಳಲಾಗಿದೆ.
ಆರೋಪಿಗಳನ್ನು ಬಂಧಿಸಿರುವ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರಗಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಬಿರಿಯಾನಿ ಹಂಚುತ್ತಿದ್ದ ಘಟನೆ ವರದಿಯಾಗಿದೆ.
ನೀತಿ ಸಂಹಿತೆ ಉಲ್ಲಂಘನೆಯಲ್ಲಿ ಜೆಡಿಎಸ್ ಪಕ್ಷ ಮಾತ್ರ ತೊಡಗಿಲ್ಲ. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ಈ ಕಾರ್ಯವನ್ನು ವಿವಿಧ ರೀತಿಯಲ್ಲಿ ನಡೆಸುತ್ತಿದೆ.ಸೇತುವೆ ಉದ್ಘಾಟನೆ, ವಿವಿಧ ಶುಭ ಕಾರ್ಯಗಳಿಗೆ ತೆರಳಿ ಹರಸುವ ನೆಪದಲ್ಲಿ ಮತ ಪ್ರಚಾರ ಹಾಗೂ ಹಣ ಹಂಚಿಕೆ ಕಾರ್ಯ ನಡೆದಿದೆ. ಇನ್ನು ಬಾಡೂಟವಂತೂ ಅನೇಕ ಕಡೆ ಮಾಮೂಲಿಯಾಗಿದೆ.












Click it and Unblock the Notifications