ಬೀದರ್ ಚೌಳಿಮಠದಲ್ಲಿ ಮತ್ತೊಂದು ಘೋರ ದುರಂತ
ಫೆ. 28ರಂದು ಹಿರಿಯ ಸ್ವಾಮೀಜಿ ಗಣೇಶ್ವರ ಅವಧೂತ ಸ್ವಾಮೀಜಿ ಅವರು ಜೀವಂತ ಸಮಾಧಿಯಾಗಿದ್ದರಿಂದ ಬೇಸರಗೊಂಡು ಈ ಮೂವರೂ ಕಿರಿಯ ಸ್ವಾಮಿಜೀಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಠದ ಆವರಣದಲ್ಲಿ ಭಕ್ತಾದಿಗಳು ಯಾರೂ ಇಲ್ಲದ ವೇಳೆ, ಯಾರ ಗಮನಕ್ಕೂ ಬಾರದೆ ಉರವಲು ಕಟ್ಟಿಗೆ ಮೆದೆಗೆ ಬೆಂಕಿ ಹಚ್ಚಿಕೊಂಡು ಈರಾರೆಡ್ಡಿ ಸ್ವಾಮೀಜಿ (50), ಜಗನ್ನಾಥ ಸ್ವಾಮೀಜಿ (22) ಮತ್ತು ಪ್ರಣವ್ ಸ್ವಾಮೀಜಿ (16) ಅವರು ಅಗ್ನಿಪ್ರವೇಶ ಮಾಡಿ, ಇಹಲೋಕ ತ್ಯಜಿಸಿದ್ದಾರೆ.
ಮೃತರು 2 ಆತ್ಮಹತ್ಯೆ ಪತ್ರಗಳನ್ನು ಬರೆದಿಟ್ಟಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಠದಲ್ಲಿನ ಅನಾಹುತಗಳಿಗೆ ಸ್ಥಳೀಯ ಪೊಲೀಸರು ಕುಮ್ಮಕ್ಕು ನೀಡಿದ್ದು, ಅವರ ದಿವ್ಯ ನಿರ್ಲಕ್ಷದಿಂದ ಮಠದಲ್ಲಿ ಇಂತಹ ಅನಾಹುತಗಳು ಮೇಲಿಂದ ಮೇಲೆ ನಡೆಯುತ್ತಿದೆ ಎಂದು ಮಠದ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀದರ್ ಪೊಲೀಸ್ ವರಿಷ್ಠಾಧಿಕಾರಿ ತ್ಯಾಗರಾಜ್ ಅವರು ಸ್ಥಳಕ್ಕೆ ಆಗಮಿಸಿದ್ದಾರೆ.
ಚವಳಿ ಮಠದ ಹಿರಿಯ ಸ್ವಾಮೀಜಿ ಗಣೇಶ್ವರ ಅವಧೂತರ ಜೀವಂತ ಸಮಾಧಿ: ಕಿರಿಯರಾದ ಮಾರುತಿ ಸ್ವಾಮೀಜಿ ಅವರ ಅಪಹರಣದಿಂದ ಮನನೊಂದು ಮಠದ ಹಿರಿಯ ಸ್ವಾಮೀಜಿ ಗಣೇಶ್ವರ ಅವಧೂತರು ಮಠದ ಗರ್ಭಗುಡಿಯಲ್ಲಿ ಮರಣಪತ್ರ ಬರೆದಿಟ್ಟು ಜೀವಂತ ಸಮಾಧಿಯಾಗಿದ್ದರು. ಮೂಲತಃ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಗುಗುವಾಡ ಗ್ರಾಮದವರಾದ ಗಣೇಶ್ವರ ಅವಧೂತ ಸ್ವಾಮೀಜಿ ಗೃಹಸ್ಥಾಶ್ರಮ ತೊರೆದು ಸನ್ಯಾಸತ್ವ ಸ್ವೀಕರಿಸಿದ್ದರು.
ಗಮನಾರ್ಹವೆಂದರೆ ಮಾರುತಿ ಸ್ವಾಮೀಜಿ ಇನ್ನೂ ಪತ್ತೆಯಾಗಿಲ್ಲ. ಜನವರಿ 31 ರಂದು ಕಿರಿಯ ಸ್ವಾಮೀಜಿ ಹಲ್ಲೆಗೊಳಗಾಗಿ ಅಪಹರಣಗೊಂಡಿದ್ದರು. ಚೌಳಿ ಮಠದ ಕಿರಿಯ ಸ್ವಾಮೀಜಿಗಳ ನಾಪತ್ತೆ ಪ್ರಕರಣ ಸೇರಿದಂತೆ ಇದುವರೆಗೆ ಮಠದಲ್ಲಿ ನಡೆದ ಯಾವುದೇ ಅನಾಹುತಗಳ ಬಗ್ಗೆ ಸ್ಥಳೀಯ ಪೋಲೀಸರು ಸರಿಯಾಗಿ ಸ್ಪಂದಿಸುತ್ತಿಲ್ಲ. ಆದರೆ ಪೋಲೀಸರು ಅಹೋರಾತ್ರಿ ತನಿಖೆ ನಡೆಸುತ್ತಿದ್ದಾರೆ ಎಂದು ಗೃಹ ಸಚಿವ ಆರ್ ಅಶೋಕ್ ಅಂದೇ ಹೇಳಿದ್ದರಾದರೂ ಪೊಲೀಸರ ನಿಷ್ಕ್ರಿಯತೆ ಸಂಶಯಾಸ್ಪದವಾಗಿದೆ.