ಡೆತ್ ನೋಟ್ ಬರೆದಿಟ್ಟು ಹಿರಿಯ ಸ್ವಾಮೀಜಿ ಆತ್ಮಹತ್ಯೆ

ಸಾವಿಗೆ ಕಾರಣ ನಿಗೂಢವಾಗಿದ್ದು, ನಾನು ಭಗವಂತನನ್ನು ಸೇರುತ್ತಿದ್ದೇನೆ ' ಎಂಬ ಸಾಲುಗಳಿದ್ದ ಎರಡು ಪತ್ರಗಳು ಸ್ವಾಮೀಜಿಯ ಪೂಜಾ ಸ್ಥಳ ಬಳಿಯ ಗರ್ಭಗುಡಿ ಬಳಿ ದೊರೆತಿವೆ.
ಬುಧವಾರ (ಫೆ 27) ರಾತ್ರಿ 11ರ ಸುಮಾರಿಗೆ ಗರ್ಭಗುಡಿಯಿಂದ ಹೊರ ಬಂದಿದ್ದ ಸ್ವಾಮೀಜಿ ಮಂದಿರದ ಆವರಣದಲ್ಲಿ ತಿರುಗಾಡುತ್ತಿದ್ದರು. ನಂತರ ತಮ್ಮ ಜತೆಗಿದ್ದವರನ್ನು ಮಲಗಲು ಕಳುಹಿಸಿ ಗರ್ಭಗುಡಿಯೊಳಗೆ ತೆರಳಿದ್ದರು. ಗುರುವಾರ (ಫೆ 28) ಬೆಳಗ್ಗೆ 10 ಗಂಟೆಯಾದರೂ ಸ್ವಾಮೀಜಿ ಹೊರಗೆ ಬಂದಿರಲಿಲ್ಲ.
ಸಂಶಯ ಬಂದು ಭಕ್ತಾದಿಗಳು ಬಾಗಿಲು ಬಳಿ ಬಂದಾಗ ಅವರು ಬರೆದಿಟ್ಟ ಮರಣ ಪತ್ರ ಸಿಕ್ಕಿತ್ತು. "ಮಠದ ಸೇವಕರಿಗೆ ಆಗುತ್ತಿರುವ ಕಿರುಕುಳ ನೋಡಲಾಗದೆ, ನೊಂದು ಶಿವನ ಪಾದ ಸೇರುತ್ತಿದ್ದೇನೆ, ಪೋಲೀಸರು ಕಿರಿಯ ಸ್ವಾಮೀಜಿಯನ್ನು ಪತ್ತೆ ಮಾಡುವ ವಿಚಾರದಲ್ಲಿ ಸೂಕ್ತವಾಗಿ ಸ್ಪಂದಿಸುತ್ತಿಲ್ಲ" ಎನ್ನುವ ಒಕ್ಕಣೆ ಮರಣ ಪತ್ರದಲ್ಲಿತ್ತು.
ಕೂಡಲೇ ಭಕ್ತಾದಿಗಳು ಸ್ಥಳೀಯ ಪೋಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಗರ್ಭಗುಡಿಯ ಬಾಗಿಲು ತೆಗೆದಾಗ ಸ್ವಾಮೀಜಿಯ ಸಾವಿನ ಬಗ್ಗೆ ಗೊತ್ತಾಗಿದೆ.
ಮೂಲತಃ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಗುಗುವಾಡ ಗ್ರಾಮದವರಾದ ಸ್ವಾಮೀಜಿ ಗೃಹಸ್ಥಾಶ್ರಮ ತೊರೆದು ಸನ್ಯಾಸತ್ವ ಸ್ವೀಕರಿಸಿದ್ದರು. ಚವಳಿ ಮಠದಲ್ಲಿ ಹಿರಿಯ ಸ್ವಾಮೀಜಿ ಮತ್ತು ಕಿರಿಯ ಸ್ವಾಮೀಜಿ (ಮಾರುತಿ ಸ್ವಾಮೀಜಿ) ಸೇರಿ ಒಟ್ಟು ಹದಿನೈದು ಮಂದಿದ್ದಾರೆ.
ಜನವರಿ 31 ರಂದು ಕಿರಿಯ ಸ್ವಾಮೀಜಿ ಹಲ್ಲೆಗೊಳಗಾಗಿ ಅಪಹರಣಗೊಂಡಿದ್ದರು. ಇದುವರೆಗೂ ಸ್ವಾಮೀಜಿಯ ಪತ್ತೆಯಾಗಿರಲಿಲ್ಲ. ಮಾರುತಿ ಸ್ವಾಮಿ ನಾಪತ್ತೆ ಪ್ರಕರಣದಲ್ಲಿ ಮಠದವರ ಕೈವಾಡವೂ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿ ಗ್ರಾಮಸ್ಥರು ದೂರು ಕೂಡಾ ದಾಖಲು ಮಾಡಿದ್ದರು.
ಅಲ್ಲದೇ ಇತ್ತೀಚಿನ ದಿನಗಳಲ್ಲಿ ಮಠದ ಮೇಲೆ ಕಲ್ಲು ತೂರಾಟ, ಬೆದರಿಕೆ ಕರೆಗಳು, ಮಠದ ಸೇವಕರಿಗೆ ಹಲ್ಲೆ ಮಾಡುವುದೂ ಸೇರಿದಂತೆ ಹಲವು ಅಹಿತಕರ ಘಟನೆಗಳು ನಡೆದಿದ್ದವು. ತನಿಖೆಗಾಗಿ ಪೊಲೀಸರು ಅನೇಕ ಬಾರಿ ಮಠಕ್ಕೆ ಭೇಟಿ ನೀಡಿದ್ದರು. ಮಠದ ಆವರಣದಲ್ಲೂ ಒಂದಿಬ್ಬರು ಪೇದೆಗಳನ್ನು ನಿಯೋಜಿಸಲಾಗಿತ್ತು.
ಸ್ವಾಮೀಜಿಗಳ ಸಾವಿನ ಸುದ್ದಿ ತಿಳಿಯುತ್ತಲೇ ಸುತ್ತಮುತ್ತಲ ಮಠದ ಭಕ್ತರು, ಸಾರ್ವಜನಿಕರು ಮಠದತ್ತ ಧಾವಿಸಿ ಶ್ರದ್ದಾಂಜಲಿ ಅರ್ಪಿಸಿದ್ದಾರೆ. ಸ್ವಾಮೀಜಿಯವರ ಅಕಾಲಿಕ ನಿಧನದಿಂದ ದುಃಖ ತಡಯಲಾರದೆ ಶಿಷ್ಯನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೂಡಾ ವರದಿಯಾಗಿದೆ.
ಚವಳಿ ಮಠದ ಹಿರಿಯ ಸ್ವಾಮೀಜಿ ಗಣೇಶ್ವರ ಅವಧೂತರ ಅಂತ್ಯಕ್ರಿಯೆ ಶುಕ್ರವಾರ (ಮಾ 1) ಮಠದ ಆವರಣದಲ್ಲಿ ನೆರವೇರಲಿದೆ.
ಚವಳಿ ಮಠದ ಕಿರಿಯ ಸ್ವಾಮೀಜಿಗಳ ನಾಪತ್ತೆ ಪ್ರಕರಣದಲ್ಲಿ ಪೋಲೀಸರು ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವುದು ಸರಿಯಲ್ಲ. ಪೋಲೀಸರು ಅಹೋರಾತ್ರಿ ತನಿಖೆ ನಡೆಸುತ್ತಿದ್ದಾರೆ ಎಂದು ಗೃಹ ಸಚಿವ ಆರ್ ಅಶೋಕ್ ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications