ಯಾರನ್ನು ಪಕ್ಷಕ್ಕೆ ಕರೆಯೋಲ್ಲ : ಯಡಿಯೂರಪ್ಪ

ಬಾಗಲಕೋಟೆಯಲ್ಲಿ ಶುಕ್ರವಾರ ಕೆಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಯಡಿಯೂರಪ್ಪ ಬೆಂಬಲಿಗರ ವರ್ತನೆಯಿಂದ ತುಂಬಾ ಬೇಸರವಾಗಿದೆ. ಒಮ್ಮೆ ಪಕ್ಷಕ್ಕೆ ಬರುತ್ತೇನೆ ಎಂದು ಹೇಳುತ್ತಾರೆ. ಮತ್ತೊಮ್ಮೆ ಬರುವುದಿಲ್ಲ ಎನ್ನುತ್ತಾರೆ ಇವರ ವರ್ತನೆಯಿಂದ ನನಗೂ ಗೊಂದಲ ಉಂಟಾಗಿದೆ ಎಂದರು.
ಯಾವ ಬೆಂಬಲಿಗರಿಗೂ ಪಕ್ಷ ಸೇರುವಂತೆ ನಾನು ಆಹ್ವಾನ ನೀಡಿಲ್ಲ. ಜನರನ್ನು ನಂಬಿ ನಾನು ಪಕ್ಷ ಕಟ್ಟಿದ್ದೇನೆ. ಬೆಂಬಲಿಗರ ನಿರ್ಧಾರರಿಂದ ತುಂಬಾ ಬೇಸರವಾಗಿದೆ ಎಂದರು. ಅಭ್ಯರ್ಥಿಗಳ ಪಟ್ಟಿ ತಯಾರಿಸುವಾಗ ಸ್ವತಃ ಕೆಲವು ಬೆಂಬಲಿಗರು ಬಂದು ನಾವು ಪಕ್ಷಕ್ಕೆ ಬರುತ್ತೇವೆ ಎಂದು ಹೇಳಿಕೆ ನೀಡಿದ್ದರು.
ಎರಡು ದಿನಗಳಿಂದ ಕೆಜೆಪಿಗೆ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ಮತ್ತು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದರು. ಯಾರನ್ನು ಪಕ್ಷಕ್ಕೆ ಕರೆಯವುದಿಲ್ಲ. ಈಗಿರುವ ನಾಯಕರ ಜೊತೆಯಲ್ಲೇ ಚುನಾವಣೆ ಎದುರಿಸುತ್ತೇನೆ ಎಂದು ಘೋಷಿಸಿದರು.
ಏ.7ಕ್ಕೆ ಪಟ್ಟಿ : 50 ಅಭ್ಯರ್ಥಿಗಳ ಪಟ್ಟಿಯನ್ನು ಏ.7ರಂದು ಬಿಡುಗಡೆ ಮಾಡುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಈಗಾಗಲೇ ಪಟ್ಟಿ ಸಿದ್ಧಪಡಿಸಲಾಗಿದೆ. ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಎಲ್ಲಾ ವರ್ಗದವರಿಗೂ ಸಮಾನ ನ್ಯಾಯ ಒದಗಿಸಿಸುವ ಪಕ್ಷದ ಪ್ರಣಾಳಿಕೆಯನ್ನು ಪಟ್ಟಿಯ ಜೊತೆ ಬಿಡುಗಡೆ ಮಾಡಲಾಗುವುದು ಎಂದರು.
ಕಣ್ಣೀರಿಟ್ಟ ನಿರಾಣಿ : ಕೆಜೆಪಿಗೆ ಹೋಗುವುದಿಲ್ಲ ಎಂದು ಘೋಷಿಸಿರುವ ನಿರಾಣಿ ಯಡಿಯೂರಪ್ಪ ನೆನೆಪು ಮಾಡಿಕೊಂಡು ಬಾಗಲಕೋಟೆಯಲ್ಲಿ ಕಣ್ಣೀರಿಟ್ಟಿದ್ದಾರೆ. ಶುಕ್ರವಾರ ಬಾಗಲಕೋಟೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನಿರಾಣಿ ಬಿಜೆಪಿಯಲ್ಲೇ ಇರುತ್ತೇನೆ ಎಂದು ಹೇಳಿದರು.
ಯಡಿಯೂರಪ್ಪ ಅವರಿಗೆ ನಾನು ದ್ರೋಹ ಮಾಡಿದ್ದೇನೆ. ಅವರಿಗೆ ಮುಖ ತೋರಿಸುವ ಧೈರ್ಯ ಸಹ ನನಗಿಲ್ಲ ಎಂದು ನಿರಾಣಿ ಕಣ್ಣೀರಿಟ್ಟರು. ಯಡಿಯೂರಪ್ಪ ಅವರ ನಂಬಿಕೆ ಹುಸಿಗೊಳಿಸಿದ್ದಕ್ಕಾಗಿ ಅವರ ಬಳಿ ಕ್ಷಮೆಯಾಚಿಸುವುದಾಗಿ ನಿರಾಣಿ ಮನವಿ ಮಾಡಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications