ತಾಕತ್ತಿದ್ದರೆ ಅವರಿಬ್ಬರನ್ನು ಉಚ್ಚಾಟಿಸಿ: ರೇಣುಕಾ

ಬಿಜೆಪಿ 'ಬಿ' ಫಾರ್ಮ್ ನನಗೆ ಬೇಕಾಗಿಲ್ಲ, ಮತದಾರರ ಬಿ ಫಾರ್ಮ್ ಸಿಕ್ಕರೆ ಸಾಕು. ನನ್ನನ್ನು ಉಚ್ಚಾಟನೆ ಮಾಡ್ತಿರಾ? ತಾಕತ್ತಿದ್ದರೆ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ, ಕೆಎಸ್ ಈಶ್ವರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರು ಉಚ್ಚಾಟಿಸಲಿ ಎಂದು ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.
ಡಿವಿಎಸ್ ಗೆ ಹಣ ಯಾವಾಗ?: ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ಹಣ ಕೊಟ್ಟಿದ್ದು ನೂರಕ್ಕೆ ನೂರು ಸತ್ಯ. ನಾನು ಚಿಕ್ಕಮಗಳೂರು ಉಸ್ತುವಾರಿ ಸಚಿವನಾಗಿದ್ದ ಕಾಲದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕಾಗಿ ಚಿಕ್ಕಮಗಳೂರಿಗೆ ಹೋಗಿದ್ದೆ. ಆಗ ಪ್ರವಾಸಿ ಮಂದಿರದಲ್ಲಿ ಸಿಟಿ ರವಿ , ಜೀವರಾಜು ಎಲ್ಲಾ ಸೇರಿದ್ದೆವು.
ಆಗ ಸದಾನಂದ ಗೌಡರು ನನ್ನನ್ನು ಹತ್ತಿರಕ್ಕೆ ಕರೆದು ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇನೆ. ಸಹಾಯ ಮಾಡಿ ಎಂದರು. ಹಿರಿಯ ನಾಯಕರ ಕಷ್ಟಕ್ಕೆ ಆಗಬೇಕು ಎಂದು ಬೇರೆಯವರಿಂದ ಹಣ ಪಡೆದು ಅವರಿಗೆ ಕೊಟ್ಟಿದ್ದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಒಟ್ಟಾರೆ ಅವರು ರಾಜ್ಯಾಧ್ಯಕ್ಷರಾಗಿದ್ದಾಗ ಎರಡು ಬಾರಿ, ಮುಖ್ಯಮಂತ್ರಿಯಾಗಿದ್ದಾಗ ಮೂರು ಬಾರಿ ಹಣ ಕೊಟ್ಟಿದ್ದೇನೆ. ಈ ಬಗ್ಗೆ ಎಲ್ಲಿ ಬೇಕಾದರೂ ಪ್ರಮಾಣ ಮಾಡಲು ಸಿದ್ಧ. ಅವರು ದೇವರ ಮುಂದೆ ಪ್ರಮಾಣ ಮಾಡಲಿ ಎಂದು ರೇಣುಕಾ ಸವಾಲ್ ಹಾಕಿದರು.
ನನ್ನನ್ನು ಯಡಿಯೂರಪ್ಪ ಅವರ ವಿರುದ್ಧ ಅಸ್ತ್ರವಾಗಿ ಬಿಜೆಪಿ ಬಳಸಿಕೊಂಡಿತು. ಯಡಿಯೂರಪ್ಪ ಅವರು 80 ಶಾಸಕರ ಜೊತೆ ತಿರುಪತಿಗೆ ಹೋಗಿ ಪ್ರಮಾಣ ಮಾಡಿಸಿಕೊಳ್ಳಲಾಗಿತ್ತು. ಅವರು ಕೇಳಿದಾಗ ಸೀಟು ಬಿಟ್ಟುಕೊಡುವುದಾಗಿ ಎಲ್ಲರೂ ಹೇಳಿದ್ದರು ಆದರೆ, ಯಡಿಯೂರಪ್ಪಗೆ ಮೋಸವಾಯಿತು.
ಎಲ್ಲಾ ಮಾಜಿ ಮುಖ್ಯಮಂತ್ರಿಗಳು ಕಳಂಕಿತರಾಗಿದ್ದರೂ ಯಡಿಯೂರಪ್ಪ ಮೇಲೆ ಮಾತ್ರ ಗಣಿಗಾರಿಕೆ ಆರೋಪ ಹೊರೆಸಲಾಯಿತು. ಬೇಳೂರು ಗೋಪಾಲಕೃಷ್ಣ ಹಾಗೂ ಕೆಎಸ್ ಈಶ್ವರಪ್ಪ, ಅನಂತಕುಮಾರ್ ನನ್ನನ್ನು ಕರೆಸಿಕೊಂಡು ಯಡಿಯೂರಪ್ಪ ವಿರುದ್ಧ ಭಿನ್ನಮತ ಸಾರುವಂತೆ ಸೂಚಿಸಿದರು. ಹೈದರಾಬಾದ್ ರೆಸಾರ್ಟಿಗೆ ಹೋಗಲು ಇದೇ ಕಾರಣ. ಆದರೆ, ನನ್ನ ಮೇಲೆ ಮಾತ್ರ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಇರಲಿ ನಾನೀಗ ಮುಕ್ತನಾಗಿದ್ದೇನೆ. ಮುಂದಿನ ಹೆಜ್ಜೆ ಮತದಾರರ ಅಭಿಪ್ರಾಯ ಸಂಗ್ರಹಿಸಿದ ನಂತರ ಪ್ರಕಟಿಸುತ್ತೇನೆ ಎಂದು ರೇಣುಕಾಚಾರ್ಯ ಹೇಳಿದರು.












Click it and Unblock the Notifications