ಕೆಜೆಪಿ ಪಟ್ಟಿ-2 ಶನಿವಾರಕ್ಕೆ: ಬಿಜೆಪಿಗೆ ಏನು ಕಾದಿದೆಯೋ?

ಹಾಗೆ ನೋಡಿದರೆ ಯಡಿಯೂರಪ್ಪ ಹಾಲಿ ವಿಧಾನಸಭೆ ಚುನಾವಣೆಗಾಗಿ ಎಲ್ಲರಿಗಿಂತ ಮುಂಚೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಬೇರೆ ಪಕ್ಷಗಳಿಗೆ ಇನ್ನೂ ಒಂದೂ ಪಟ್ಟಿಯನ್ನು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಹಾಗಿರುವಾಗ ಯಡಿಯೂರಪ್ಪ ಮಾರ್ಚ್ 30ರಂದು 2ನೇ ಪಟ್ಟಿ ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಜತೆಗೆ, ಆ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಅಭ್ಯರ್ಥಿಗಳ ಹೆಸರುಗಳನ್ನು ನೋಡಿ ಪ್ರತಿಪಕ್ಷಗಳು ಬೆಚ್ಚಿಬೀಳಲಿವೆ ಎಂದೂ ಪಟ್ಟಿ ಕಟ್ಟಿದ್ದಾರೆ.
ಅಂದರೆ ಆಡಳಿತಾರೂಢ ಬಿಜೆಪಿಯಿಂದ ಮತ್ತಷ್ಟು ಸಚಿವ/ಶಾಸಕರು ಕೆಜೆಪಿ ತೆಕ್ಕೆಗೆ ಬೀಳುವುದು ಗ್ಯಾರಂಟಿ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಅವರ ಮಾತನ್ನು ನಂಬುವುದಾದರೆ ರೇಣುಕಾ, ಸೋಮಣ್ಣ, ಉಮೇಶ, ಮುರುಗೇಶಗಳು ಕೆಜೆಪಿ ಹೊಸ್ತಿಲು ತುಳಿಯುವುದು ಖಚಿತ.
Except ಒಬ್ಬ ಬಸವರಾಜ ಬೊಮ್ಮಾಯಿ (ಕಾಂಗ್ರೆಸ್ ಪಕ್ಷಕ್ಕೆ ಜಂಪ್ ಇಲ್ಲಾಂದ್ರೆ ಬಿಜೆಪಿಯಲ್ಲೇ ಮುಂದುವರಿಕೆ). ಇದರಿಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ತನ್ನ ಬಲ ಹೆಚ್ಚಿಸಿಕೊಳ್ಳುವ ಸಾಧ್ಯತೆ ಬಲವಾಗಿ ಕಂಡು ಬರುತ್ತಿದೆ.
ಹೋಳಿ ಮುಗಿಸಿಕೊಂಡು ಬರ್ತೀವಿ ಅಂದಿದ್ದಾರಂತೆ!:
ಮಾ. 30 ರಂದು ಬಿಡುಗಡೆ ಮಾಡುವ ಎರಡನೇ ಪಟ್ಟಿಯಲ್ಲಿ ಇತರೆ ಪಕ್ಷಗಳಿಂದ ಕೆಜೆಪಿಗೆ ಸೇರುವ ಎಲ್ಲರ ಹೆಸರು ಇರಲಿದೆ. ಬಿಜೆಪಿ ಸೇರಿದಂತೆ ಇತರ ಪಕ್ಷಗಳಿಂದ ಕೆಜೆಪಿಗೆ ಬರುವವರು ಹೋಳಿ ಹಬ್ಬದ ನಂತರ ಬರುವುದಾಗಿ ತಿಳಿಸಿದ್ದಾರೆ. ಇವರೆಲ್ಲರೂ ಶನಿವಾರದೊಳಗೆ ಕೆಜೆಪಿಗೆ ಸೇರಲಿದ್ದಾರೆ. ಯಡಿಯೂರಪ್ಪ ಇಲ್ಲದ ಬಿಜೆಪಿ ಏನು ಎಂಬುದು ಮೇ 8ರಂದು ಪ್ರಕಟವಾಗುವ ಚುನಾವಣಾ ಫಲಿತಾಂಶದ ನಂತರ ಅರ್ಥವಾಗಲಿದೆ ಎಂದರು.
ನಾಳೆಯಿಂದ (ಮಾ. 28) ಯಡಿಯೂರಪ್ಪ ಅವರು ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಅದೇ ಸಂದರ್ಭ ಅವರ ಬೆಂಬಲಿಗ ಸಚಿವರು ಹಾಗೂ ಶಾಸಕರು ಕೆಜೆಪಿಗೆ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ. 29 ರಂದು ಬಾಗಲಕೋಟೆ ಜಿಲ್ಲೆಯಲ್ಲಿ ಸಚಿವ ನಿರಾಣಿ ಮತ್ತು 30 ರಂದು ಬೆಳಗಾವಿ ಜಿಲ್ಲೆಯಲ್ಲಿ ಸಚಿವ ಕತ್ತಿ ಕೆಜೆಪಿ ಸೇರಲಿದ್ದಾರೆ ಎನ್ನಲಾಗಿದೆ. ಜತೆಗೆ ಶಾಸಕರಾದ ಎಂಕೆ ಪಟ್ಟಣಶೆಟ್ಟಿ, ಶ್ರೀಶೈಲಪ್ಪ ಬಿದರೂರು, ಲಕ್ಷ್ಮಣ ಸವದಿ, ಆಸ್ಪತ್ರೆಯಲ್ಲಿರುವ ಸಿಸಿ ಪಾಟೀಲ್ ಮೊದಲಾದವರ ಹೆಸರುಗಳು ಕೇಳಿಬರುತ್ತಿವೆ.
ಏನೇ ಆಗಲಿ, ಯಾರೆಲ್ಲ ಮೂರ್ಖರಾಗಲಿದ್ದಾರೆ ಎಂಬುದರ ಬಗ್ಗೆ ಏಪ್ರಿಲ್ 1ರಂದು ಸ್ಪಷ್ಟ ಚಿತ್ರಣ ಹೊರಬೀಳುವ ಲಕ್ಷಣಗಳಿವೆ.












Click it and Unblock the Notifications