ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಣ್ಣದ ರಾಜಕಾರಣಿ ರೇಣುಕಾಚಾರ್ಯಗೆ ಹೋಳಿ ಶುಭಾಶಯ!

By Prasad
|
Google Oneindia Kannada News

Happy holi to colorful politician Renukacharya
ಬೆಂಗಳೂರು, ಮಾ. 26 : ಮೊತ್ತಮೊದಲನೆಯದಾಗಿ ಅಬಕಾರಿ ಸಚಿವ ರೇಣುಕಾಚಾರ್ಯ ಅವರಿಗೆ ಬಣ್ಣದ ಹಬ್ಬ ಹೋಳಿಯ ಹಾರ್ದಿಕ ಶುಭಾಶಯಗಳು. ರೇಣುಕಾಚಾರ್ಯರಂಥ 'ಕಲರ್‌ಫುಲ್' ರಾಜಕಾರಣಿಯನ್ನು ಬಹುಶಃ ಕರ್ನಾಟಕದ ಜನತೆ ಎಂದೂ ಕಂಡಿಲ್ಲ, ಕಾಣುವುದೂ ಇಲ್ಲ.

ಬಣ್ಣಬಣ್ಣದ ಮಾತುಗಳನ್ನಾಡುತ್ತ, ಸನ್ನಿವೇಶಗಳಿಗೆ ಸಂದರ್ಭಗಳಿಗೆ ತಕ್ಕಂತೆ ಬಣ್ಣಗಳನ್ನು ಬದಲಾಯಿಸುವುದರಲ್ಲಿ ರೇಣುಕಾಚಾರ್ಯ ಅವರಿಗೆ ರೇಣುಕಾಚಾರ್ಯ ಅವರೇ ಸಾಟಿ. ಓತಿಕ್ಯಾತ ಜಾತಿಗೆ ಸೇರಿದ, ಬಣ್ಣಬದಲಾಯಿಸಿ ವಂಚಿಸುವ ಊಸರವಳ್ಳಿಯನ್ನು ಕೂಡ ಮೀರಿಸಬಲ್ಲಂಥ ಬಣ್ಣಗಳು ರೇಣುಕಾಚಾರ್ಯ ಬಳಿ ಇವೆ.

ರೇಣುಕಾಚಾರ್ಯ ಅವರು ಯಾವ ಸಮಯದಲ್ಲಿ ಎಂಥ ಹೇಳಿಕೆ ಕೊಡುತ್ತಾರೆಂದು ಊಹಿಸುವುದು ಅವರನ್ನು ಹತ್ತಿರದಿಂದ ಬಲ್ಲ ರಾಜಕಾರಣಿಗಳಿಗೆ ಕೂಡ ಅಸಾಧ್ಯ. ಏನೇ ಬರಲಿ ಬಿಜೆಪಿ ತೊರೆಯುವುದಿಲ್ಲ ಎಂದ ರೇಣು, ಮರುದಿನವೇ ಕೆಜೆಪಿಗೆ ಜೈ ಅಂದಿದ್ದರು. ಕೆಲ ದಿನಗಳ ಹಿಂದೆ ರಾಜಕೀಯ ಸನ್ಯಾಸವನ್ನೇ ತೆಗೆದುಕೊಳ್ಳುತ್ತೇನೆ ಎಂದು ಹೇಳಿ ಅವರ ಅಭಿಮಾನಿಗಳ ಎದೆಬಡಿತ ಹೆಚ್ಚಾಗುವಂತೆ ಮಾಡಿದ್ದರು.

ಪಕ್ಷದಲ್ಲಿದ್ದುಕೊಂಡೇ ಪಕ್ಷದ ನಾಯಕರನ್ನು ತೆಗಳುವುದು, ಬೇರೆ ಪಕ್ಷದ ನಾಯಕರನ್ನು ವಾಚಾಮಗೋಚರವಾಗಿ ಹೊಗಳುವುದರಲ್ಲಿ ರೇಣುಕಾಚಾರ್ಯ ಅವರನ್ನು ಮೀರಿಸಲು ಶೋಭಾ ಕರಂದ್ಲಾಜೆ ಅವರಿಗೂ ಸಾಧ್ಯವಾಗಿಲ್ಲ. ಈ ಪರಿಯ ರೇಣುಕಾಚಾರ್ಯ ಅವರು ತಮ್ಮ ಪಕ್ಷದ ನಾಯಕರ ಮೇಲೆ ಓಕುಳಿ ಹಬ್ಬದ ದಿನ ಬಣ್ಣ ಎರಚುವ ಬದಲು ಕಪ್ಪು ರಾಡಿ ಎರಚಿದ್ದಾರೆ.

ಯಡಿಯೂರಪ್ಪನವರ ಕಟ್ಟಾ ಹಿಂಬಾಲಕನಾಗಿರುವ ರೇಣುಕಾಚಾರ್ಯ ಅವರು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ತಮ್ಮಿಂದ ಹಣ ತೆಗೆದುಕೊಂಡು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಭಯಂಕರ ಆರೋಪ ಮಾಡಿ ಸದಾನಂದ ಗೌಡರ ಮುಖ ಕೆಂಪೇರುವಂತೆ ಮಾಡಿದ್ದಾರೆ. ಡಿವಿಎಸ್ ಅಲ್ಲದೆ ಅನಂತ್ ಕುಮಾರ್, ಸಂತೋಷ್ ಅವರ ಮುಖದ ಮೇಲೂ ಭ್ರಷ್ಟಾಚಾರದ ಗುಲಾಲ್ ಎರಚಿದ್ದಾರೆ. ರೇಣುಚಾಕಾರ್ಯ ಅವರ ಕೈಗೂ ಬಣ್ಣ ಬಳಿದುಬಿಟ್ಟಿದೆ. ಬಣ್ಣ ಎರಚುವ ಭರದಲ್ಲಿ ರೇಣುಕಾಚಾರ್ಯ ಅವರ ನಿಜವಾದ ಬಣ್ಣವೇ ಬಯಲಾಗಿದೆಯಾ?

ಬಣ ಬದಲಾಯಿಸುವುದು ಮತ್ತು ಬಣ್ಣ ಬದಲಾಯಿಸುವುದು ರೇಣುಕಾಚಾರ್ಯ ಅವರಿಗೆ ನೀರಿನಲ್ಲಿ ಬಣ್ಣ ಸೇರಿಸಿದಷ್ಟೇ ಸಲೀಸು. ಹಿಂದೆ 2010ರಲ್ಲಿ ಭಿನ್ನಮತೀಯರು ದಂಗೆ ಎದ್ದಿದ್ದಾಗ ಎಲ್ಲರನ್ನೂ ಯಡಿಯೂರಪ್ಪ ವಿರುದ್ಧ ಎತ್ತಿಕಟ್ಟಿದ್ದ ರೇಣುಕಾಚಾರ್ಯ, ಕೊನೆ ಘಳಿಗೆಯಲ್ಲಿ ಬಣ್ಣ ಬದಲಾಯಿಸಿ ಯಡಿಯೂರಪ್ಪ ಅವರ ಗ್ಯಾಂಗ್ ಸೇರಿಕೊಂಡು ಭಿನ್ನಮತೀಯರ ಕಣ್ಣಿಗೆ ಮಣ್ಣೆರಚಿದ್ದರು.

ಮುಂದೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಯಡಿಯೂರಪ್ಪ ಅವರು ಜೈಲು ಸೇರಿದಾಗ ಮತ್ತು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಪದ ಕಳೆದುಕೊಂಡು ಅತಂತ್ರರಾದಾಗ ಇದೇ ರೇಣುಕಾಚಾರ್ಯ ಅವರ ಮುಖವಾಣಿಯಾಗಿ ಪಕ್ಷದ ನಾಯಕರನ್ನೇ ತರಾಟೆಗೆ ತೆಗೆದುಕೊಂಡಿದ್ದರು. ರೇಣುಕಾಚಾರ್ಯ ಅವರ ಯಾವ ಹೇಳಿಕೆಯನ್ನೂ ಗಂಭೀರವಾಗಿ ಬಿಜೆಪಿ ನಾಯಕರು ಪರಿಗಣಿಸಿರಲಿಲ್ಲ.

ಇನ್ನೆರಡು ದಿನಗಳಲ್ಲಿ ಎಲ್ಲ ದಾಖಲೆ ಇಟ್ಟುಕೊಂಡು ಡಿವಿ ಸದಾನಂದ ಗೌಡರು ಸೇರಿದಂತೆ ಅನೇಕ ಬಿಜೆಪಿ ನಾಯಕರ ಬಣ್ಣ ಬಯಲು ಮಾಡುವುದಾಗಿ ರೇಣುಕಾಚಾರ್ಯ ಬಾಂಬ್ ಎಸೆದಿದ್ದಾರೆ. ಆಗಲಿ ನೋಡೇಬಿಡೋಣ ಎಂದು ಡಿವಿಎಸ್ ಸವಾಲು ಸ್ವೀಕರಿಸಿದ್ದಾರೆ. ಯಾರ ಬಣ್ಣ ಬಯಲಾಗುವುದೋ ಕಾದು ನೋಡೋಣ. ಅಂದ ಹಾಗೆ, ಭಿನ್ನಮತದ ಬಾವುಟ ಹಾರಿಸಿರುವ ರೇಣುಕಾಚಾರ್ಯಗೆ ವಿಧಾನಸಭೆಗೆ ಸ್ಪರ್ಧಿಸಲು ಯಾವ ಪಕ್ಷದಿಂದ ಟಿಕೆಟ್ ಸಿಗಲಿದೆ? ರೇಣುಕಾಚಾರ್ಯ ಅವರ ರಾಜಕೀಯ ನಾಟಕಕ್ಕೆ ಹೊನ್ನಾಳಿ ಮತದಾರರು ಏನು ಉತ್ತರ ಕೊಡುತ್ತಾರೆ?

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Happy holi to colorful politician Renukacharya. Honnali MLA Renukacharya is known for changing colors whenever situation demands. No one, even Yeddyurappa, know what is the true color of Renukacharya. Which party will Renukacharya represent in assembly election?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X