ಲಂಚ : ಜಯಲಕ್ಷ್ಮೀ ದೇವಿಗೆ ನಾಲ್ಕು ವರ್ಷ ಜೈಲು

ಮಂಗಳವಾರ ಪ್ರಕರಣದ ಅಂತಿಮ ತೀರ್ಪು ಪ್ರಕಟಿಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎನ್.ಕೆ.ಸುಧೀಂದ್ರರಾವ್, ಜಯಲಕ್ಷ್ಮೀ ಅವರ ಪುತ್ರ ಅಲೋಕ್ ವಸಿಷ್ಠ ಅವರನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದ್ದು, ಜಯಲಕ್ಷ್ಮೀ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಅವರಿಗೆ ನಾಲ್ಕು ವರ್ಷಗಳ ಸಜೆ ಮತ್ತು 1 ಲಕ್ಷ 35 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದರು.
ಏನಿದು ಪ್ರಕರಣ : 2009ರಲ್ಲಿ ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯೆಯಾಗಿದ್ದ ಜಯಲಕ್ಷ್ಮೀ ದೇವಿ ವಿವಿ ವ್ಯಾಪ್ತಿಯ ಖಾಸಗಿ ಕಾಲೇಜುಗಳ ಮೂಲಭೂತ ಸೌಲಭ್ಯ ಮತ್ತು ಶೈಕ್ಷಣಿಕ ವಾತಾವರಣ ಪರಿಶೀಲನೆ ನಡೆಸುವ ಸ್ಥಳೀಯ ತಪಾಸಣಾ ಸಮಿತಿ (ಎಲ್ಇಸಿ) ಅಧ್ಯಕ್ಷರಾಗಿದ್ದರು.
ಆಗ ಜಿಂದಾಲ್ ಗ್ರೂಪ್ ನ ಶೈಕ್ಷಣಿಕ ಸಂಸ್ಥೆಗಳಿಗೆ ಭೇಟಿ ನೀಡಿದ್ದ ಇವರು, ಸಂಸ್ಥೆಯ ಪರವಾಗಿ ವರದಿ ನೀಡಲು 2 ಲಕ್ಷ ರೂ.ಗಳ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಳು.
ತಮ್ಮ ಪುತ್ರ ಅಲೋಕ್ ವಸಿಷ್ಠನ ಮುಖಾಂತರ ಲಂಚದ ಹಣ ತರಲು ಪ್ರಯತ್ನಿಸಿದ್ದಳು. ಲೋಕಾಯುಕ್ತ ದಾಳಿ ನಡೆದಾಗ ಅಲೋಕ್ ಸಹ ಬಂಧಿತನಾಗಿದ್ದ. ಲೋಕಾಯುಕ್ತ ಪೊಲೀಸರು ಅಲೋಕ್ ಪ್ರಕರಣದಲ್ಲಿ ಎರಡನೇ ಆರೋಪಿ ಎಂದು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಅಧ್ಯಕ್ಷ ಹುದ್ದೆ ವಿವಾದ : ಕೇವಲ ಪ್ರಾಧ್ಯಪಕರು ಎಲ್ಇಸಿ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಬಹುದಿತ್ತು. ಆದರೆ, ಸಿಂಡಿಕೇಟ್ ಸದಸ್ಯೆಯಾಗಿದ್ದ ಜಯಲಕ್ಷ್ಮೀ ದೇವಿ ತಮ್ಮ ಪ್ರಭಾವ ಬಳಸಿಕೊಂಡು ಸಿಂಡಿಕೇಟ್ ಸಭೆಯ ಒಪ್ಪಿಗೆ ಪಡೆದು ಎಲ್ಐಸಿ ಅಧ್ಯಕ್ಷ ಹುದ್ದೆ ಏರಿ ವಿವಾದಕ್ಕೆ ಸಿಲುಕಿದ್ದರು.
ಸಮಿತಿಯ ಅಧ್ಯಕ್ಷರಾದ ನಂತರ ಬೆಂಗಳೂರು ವಿವಿ ವ್ಯಾಪ್ತಿಯ ಖಾಸಗಿ ಕಾಲೇಜುಗಳಿಗೆ ಭೇಟಿ ನೀಡಿ, ಆಯಾ ಶಿಕ್ಷಣ ಸಂಸ್ಥೆಗಳ ಪರವಾಗಿ ವರದಿ ನೀಡಲು ಲಂಚ ಪಡೆಯುತ್ತಾರೆ ಎಂಬ ಆರೋಪಗಳು ಇವರ ಮೇಲಿತ್ತು. ಹೀಗೆ ಜಿಂದಾಲ್ ಗ್ರೂಪ್ ನಿಂದ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ಜಯಲಕ್ಷ್ಮೀ ಅವರನ್ನು ಬಂಧಿಸಿದ್ದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications