ವಲಸಿಗರ ಸೇರ್ಪಡೆಗೆ ಸೋನಿಯಾ ಗಾಂಧಿ ನಕಾರ

ಶುಕ್ರವಾರ ನೂರು ಅಭ್ಯರ್ಥಿಗಳ ಪಟ್ಟಿ ಜೊತೆಗೆ ವಲಸಿಗ ಆಕಾಂಕ್ಷಿಗಳ ಪಟ್ಟಿ ಹಿಡಿದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿದ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು, ವಲಸಿಗರ ಸೇರ್ಪಡೆ ಕುರಿತಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳದೇ ಮರಳಿದ್ದಾರೆ.
ಪಕ್ಷೇತರರು ಮತ್ತು ಬಿಜೆಪಿಯಿಂದ ಕೆಲವು ಶಾಸಕರು ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ. ಅನ್ಯ ಪಕ್ಷೀಯರ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕಾಗುವ ಲಾಭ ನಷ್ಟದ ಕುರಿತಂತೆ ರಾಜ್ಯ ನಾಯಕರೊಂದಿಗೆ ಸಮಾಲೋಚನೆ ನಡೆಸಿದ ಸೋನಿಯಾ ಗಾಂಧಿ, ನಿಷ್ಕಳಂಕ ವ್ಯಕ್ತಿತ್ವ ಹೊಂದಿದ ಅಭ್ಯರ್ಥಿಗಳನ್ನು ಮಾತ್ರ ಪಕ್ಷಕ್ಕೆ ಸೇರಿಸಿಕೊಳ್ಳೋಣ.
ಈ ಬಗ್ಗೆ ಅಂತಿಮ ತೀರ್ಮಾನ ಉನ್ನತ ಮಟ್ಟದ ಪರಿಶೀಲನಾ ಸಮಿತಿ ಸಭೆ ಮತ್ತು ಸಮನ್ವಯ ಸಮಿತಿ ಸಭೆಗಳ ಬಳಿಕ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ನಾಯಕರಿಗೆ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಸೇರುವ ಪ್ರತಿಯೊಬ್ಬ ವಲಸಿಗರ ಕುರಿತು ವಿವರ ಪಡೆದ ಸೋನಿಯಾ ಗಾಂಧಿ, ಸ್ವಲ್ಪದಿನ ಕಾಯೋಣ ಎಂಬ ಧೃಡ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಶುಕ್ರವಾರ ಸೋನಿಯಾಗಾಂಧಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಸೋನಿಯಾ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್, ಕೇಂದ್ರ ಸಚಿವ ಜೀತೇಂದ್ರ ಸಿಂಗ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮಧುನಸೂದನ್ ಮಿಸ್ತ್ರೀ, ಹಿರಿಯ ನಾಯಕ ಗುಲಾಂ ನಬಿ ಆಜಾದ್ ಪಾಲ್ಗೊಂಡಿದ್ದರು.
ಆಂಟನಿ ಭೇಟಿ : ಕಾಂಗ್ರೆಸ್ ಸಮನ್ವಯ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾಗಿ ರಕ್ಷಣಾ ಸಚಿವ ಎ.ಕೆ.ಆಂಟನಿ ಆಯ್ಕೆಯಾದ ನಂತರ ಮೊದಲ ಬಾರಿಗೆ ರಾಜ್ಯ ನಾಯಕರು ಶುಕ್ರವಾರ ಆಂಟನಿ ಅವರನ್ನು ಭೇಟಿ ಮಾಡಿದ್ದಾರೆ. ಚುನಾವಣೆ ಸಿದ್ಧತೆ, ಅಭ್ಯರ್ಥಿಗಳ ಪಟ್ಟಿ, ವಲಸಿಗರ ಸೇರ್ಪಡೆ ಮುಂತಾದ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ.
ವಲಸಿಗರ ಸೇಪರ್ಡೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರೋಧ ವ್ಯಕ್ತಪಡಿಸಿದ್ದರು. ಈಗ ಸೋನಿಯಗಾಂಧಿಯು ಅಂತಿಮ ನಿರ್ಧಾರ ಕೈಗೊಳ್ಳದಿರುವುದು ವಲಸಿಗ ಶಾಸಕರನ್ನು ಕಂಗೆಡಿಸಿದೆ. ಇಲ್ಲಿ ಇರಲಾರೆ, ಅಲ್ಲಿ ಹೋಗಲಾರೆ ಸ್ಥಿತಿಯಲ್ಲಿರುವ ಇವರ ಮುಂದಿನ ನಡೆ ಏನು ಎಂಬುದು ನಿಗೂಢವಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications