ರಾಜಧಾನಿಯಲ್ಲೇ ಮಹಿಳೆ ಹಕ್ಕು ಕಿತ್ಕೊಂಡ ಬಿಜೆಪಿ ಸರಕಾರ
ರಾಜ್ಯದ ಏಳು ಮಹಾನಗರ ಪಾಲಿಕೆಗಳ 14ನೇ ಅವಧಿಯ ಮೇಯರ್ ಸ್ಥಾನವನ್ನು ರೋಸ್ಪರ್ ಪದ್ದತಿಯಂತೆ ಸಾಮಾನ್ಯ ಮಹಿಳೆ ಮತ್ತು ಉಪ ಮೇಯರ್ ಸ್ಥಾನವನ್ನು ಹಿಂದುಳಿದ ಮರ್ಗ ಮಹಿಳೆ ಸ್ಥಾನ ಮೀಸಲಾಗಿತ್ತು. ಇದರ ಅನ್ವಯ ಬಿಬಿಎಂಪಿ ಮೇಯರ್ ಸ್ಥಾನವು ಮಹಿಳೆಯ ಕೈವಶವಾಗಬೇಕಾಗಿತ್ತು.
ಆದರೆ, ನಗರಾಭಿವೃದ್ಧಿ ಇಲಾಖೆ ತಿಂಗಳ ಹಿಂದೆಯೇ ಬಿಬಿಎಂಪಿ ಮೇಯರ್ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಾಗಿ ನಿಗದಿಗೊಳಿಸಿ ಆದೇಶ ಹೊರಡಿಸಿದೆ. ಇದು ಅಧಿಕೃತವಾಗಿ ಕರ್ನಾಟಕ ರಾಜ್ಯ ಪತ್ರದಲ್ಲಿಯೂ ಪ್ರಕಟಗೊಂಡಿದೆ. ಆದರೆ ಉಪಮೇಯರ್ ಸ್ಥಾನದ ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಬಿಬಿಎಂಪಿ ಮೇಯರ್ ಸ್ಥಾನಕ್ಕೆ ಮೂವರು ಮಹಿಳೆಯರ ನಡುವೆ ತೀವ್ರ ಪೈಪೋಟಿಯು ಆರಂಭವಾಗಿತ್ತು. ಬೆಂಗಳೂರಿನ ಹಾಲಿ ಮೇಯರ್ ಡಿ.ವೆಂಕಟೇಶಮೂರ್ತಿ ಮತ್ತು ಹಾಗೂ ಉಪಮೇಯರ್ ಎಲ್.ಶ್ರೀನಿವಾಸ್ ಅವರ ಒಂದು ವರ್ಷದ ಅವಧಿ ಏಪ್ರಿಲ್ 26ಕ್ಕೆ ಕೊನೆಗೊಳ್ಳಲಿದೆ.
47 ನೇ ಮೇಯರ್ ಸ್ಥಾನ ಮಹಿಳೆಯರಿಗೆ ಮೀಸಲು ಎಂದು ಮೂವರು ಮಹಿಳೆಯರು ಮೇಯರ್ ಗಾದಿ ಏರಲು ಪೈಪೋಟಿ ನಡೆಸಿದ್ದರು. ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಉಪ ಮುಖ್ಯಮಂತ್ರಿ ಆರ್.ಅಶೋಕ್ ಮೇಯರ್ ಸ್ಥಾನ ಈ ಬಾರಿ ಮಹಿಳೆಯರಿಗೆ ನೀಡುವುದು ಖಚಿತ ಎಂದು ಭರವಸೆ ನೀಡಿದ್ದರು.
ಕಳೆದ ಬಾರಿ ಮೇಯರ್ ಆಗಿ ಶಾರದಮ್ಮ ಆಯ್ಕೆಯಾಗಿದ್ದರು. ಅವರ ಅವಧಿ ಪೂರ್ಣಗೊಂಡ ನಂತರ ಮೀಸಲಾತಿಯಲ್ಲಿ ಬದಲಾವಣೆ ಆಗಿ ಮೇಯರ್ ಸ್ಥಾನಕ್ಕೆ ವೆಂಕಟೇಶ್ ಮೂರ್ತಿ ಏರಿದ್ದರು. ಈ ಬಾರಿಯು ಮಹಿಳೆಯರು ಮೇಯರ್ ಸ್ಥಾನ ಅಲಂಕರಿಸುತ್ತಾರೆ ಎಂಬ ಭರವಸೆ ಸರ್ಕಾರದ ನಿರ್ಧಾರದಿಂದಾಗಿ ಹುಸಿಯಾಗಿದೆ.
ಮಾ.21ರಂದು ಯಡಿಯೂರು ವಾರ್ಡ್ ನಲ್ಲಿ ವಿವಿಧ ಕಾಮಗಾರಿ ಉದ್ಘಾಟಿಸಿ ಮಾತನಾಡಿದ್ದ ಉಪ ಮುಖ್ಯಮಂತ್ರಿ ಅಶೋಕ್, ಮೇಯರ್ ಮೀಸಲಾತಿಯಲ್ಲಿ ಸರ್ಕಾರ ಬದಲಾವಣೆ ಮಾಡುತ್ತಿದೆ ಎಂಬ ಬಗ್ಗೆ ತಮಗೆ ಮಾಹಿತಿ ಇಲ್ಲ. ಇದಕ್ಕೆ ಕಾನೂನಿನಲ್ಲೂ ಅವಕಾಶಗಳಿಲ್ಲ. ಈ ಬಾರಿ ಮಹಿಳೆಯರಿಗೆ ಮೇಯರ್ ಖುರ್ಚಿ ಖಚಿತ ಎಂದು ಹೇಳಿದ್ದರು.
ಆದರೆ, ಗುರುವಾರ ಪ್ರಕಟಗೊಂಡಿರುವ ಕರ್ನಾಟಕ ರಾಜ್ಯಪತ್ರದಲ್ಲಿ ಮೇಯರ್ ಸ್ಥಾನದ ಮೀಸಲಾತಿಯನ್ನು ಬದಲವಾಣೆ ಮಾಡಿ ಫೆ.10 ರೊಳಗೆ ಸರ್ಕಾರ ಆದೇಶ ಹೊರಡಿಸಿರುವುದು ಸ್ಪಷ್ಟವಾಗಿದೆ. ಸರ್ಕಾರದ ನಿರ್ಧಾರದಿಂದಾಗಿ ಮಹಿಳೆಯರಿಗೆ ಬೆಂಗಳೂರಿನ ಮೇಯರ್ ಆಗುವ ಅವಕಾಶ ಕೈ ತಪ್ಪಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ