ಕರಾಟೆ ಕಲಿತ ಹುಡುಗಿಗೆ ಚುಡಾಯಿಸಿ ಒದೆ ತಿಂದರು
ಏನಿದು ಘಟನೆ : ಕೇರಳದ ಸಂಗುಮಂಕುಮ್ ನಲ್ಲಿ ಒನ್ ಬಿಲಿಯನ್ ರೈಸಿಂಗ್ ಕಾರ್ಯಕ್ರಮದ ಪ್ರಚಾರ ಕಾರ್ಯ ನಡೆಯುತ್ತಿತ್ತು. ಇದರಲ್ಲಿ ಪಾಲ್ಗೊಂಡಿದ್ದ ಅಮೃತ ಬೈಕ್ ಓಡಿಸಿ, ತನ್ನ ಕರಾಟೆ ಚಾಕಚಕ್ಯತೆ ಪ್ರದರ್ಶಿಸಿ, ಕೇರಳದ ಪುರಾತನ ಕಲೆಯಾದ ಕಲಾರಿಪಟ್ಟುವಿನ ಪ್ರದರ್ಶನ ನೀಡಿದಳು.
ಕಾರ್ಯಕ್ರಮದ ನಂತರ ಹತ್ತಿರವಿದ್ದ ಬೇಕರಿಗೆ ಕುಟುಂಬದವರು, ಸ್ನೇಹಿತರೊಟ್ಟಿಗೆ ಹೊರಟಿದ್ದಾಳೆ. ಬೈಕ್ ನಲ್ಲಿ ಈಕೆ ತೆರಳುತ್ತಿದ್ದರೆ ಕಾರು ಮತ್ತು ಜೀಪ್ ನಲ್ಲಿ ಕುಟುಂಬದವರು ಮತ್ತು ಸ್ನೇಹಿತರು ಹಿಂಬಾಲಿಸುತ್ತಾರೆ. ಬೇಕರಿ ಬಳಿ ಅಮೃತ ಬೈಕ್ ನಿಲ್ಲಿಸುವಾಗ ಸರ್ಕಾರದ ಜಾಹೀರಾತು ಫಲಕಕ್ಕೆ ಆಕಸ್ಮತ್ ತಾಗಿ, ಅದು ಕೆಳಗೆ ಬೀಳುತ್ತದೆ.
ಪಕ್ಕದಲ್ಲಿದ್ದ ಹುಡುಗ ಇದನ್ನು ಕಂಡು ಆಕೆಯನ್ನು ಚುಡಾಯಿಸುತ್ತಾನೆ. ಇದರಿಂದ ಕೋಪಗೊಂಡ ಅಮೃತ ಹುಡುಗನಿಗೆ ಬೈಯುತ್ತಾಳೆ. ಇದರಿಂದ ಕೆರಳಿದ ಆತ ಸ್ನೇಹಿತರಿಗೆ ಫೋನ್ ಮಾಡಿ ಕರೆಸಿದ್ದಾನೆ. ನಂತರ ಮೂವರು ಸೇರಿ ಆಕೆಯನ್ನು ಮತ್ತೆ ಚುಡಾಯಸಿದ್ದಾರೆ. ಅಶ್ಲೀಲ ಪದಗಳನ್ನು ಬಳಸಿ ಆಕೆಯನ್ನು ನಿಂದಿಸಿದ್ದಾರೆ.
ಅಮೃತಾಗೆ ಕರಾಟೆ ಮತ್ತು ಕಲಾರಿಪಟ್ಟು ತಿಳಿದಿದೆ ಎಂಬ ಅರಿವಿಲ್ಲದೆ ಹುಡುಗರು ಆಕೆಗೆ ಮಾನಸಿಕ ಹಿಂಸೆ ನೀಡಲು ಪ್ರಾರಂಭಿಸಿದ್ದಾರೆ. ತಕ್ಷಣ ಹುಡುಗರ ವಿರುದ್ಧ ತಿರುಗಿ ಬಿದ್ದ ಅಮೃತ ಮತ್ತು ಆಕೆಯ ತಂದೆ ಮೂವರು ಹುಡುಗರನ್ನು ಚೆನ್ನಾಗಿ ಥಳಿಸಿದ್ದಾರೆ. ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿದ್ದ ಅಮೃತ ತನ್ನ ಕೌಶಲ್ಯಗಳನ್ನೆಲ್ಲ ಚುಡಾಯಿಸಿದ ಹುಡುಗರ ಮೇಲೆ ಪ್ರಯೋಗಿಸಿ ಅವರನ್ನು ಬಡಿದಿದ್ದಾಳೆ.
ಹುಡುಗಿಯ ಪೌರುಷ ಕಂಡು ದಂಗಾದ ಹುಡುಗರು ಅಲ್ಲಿಂದ ಓಡಲು ಪಯತ್ನಿಸಿದ್ದಾರೆ. ಆದರೆ, ಅವರನ್ನು ಹಿಡಿದ ಅಮೃತ ತನ್ನನ್ನು ಚುಡಾಯಿಸಿದ್ದಾರೆ ಎಂದು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾಳೆ. ಅಮೃತಗೆ ಚುಡಾಯಿಸಿದ ಹುಡುಗರು ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ.