'ಕೈ'ಕೊಡೋಲ್ಲ: ಸೋಷಿಯಲಿಸ್ಟ್ ಸಿದ್ದರಾಮಯ್ಯ

ಸಮಾಜವಾದದಿಂದ ಆರಂಭಿಸಿ ಜೆಡಿಎಸ್ ಮೂಲಕ ಕಾಂಗ್ರೆಸ್ ವರೆಗೂ ರಾಜಕೀಯವಾಗಿ ಬೆಳೆದುಬಂದ ತಾನು ರಾಜಕೀಯ ಸಂಧ್ಯಾಕಾಲದಲ್ಲಿದ್ದು, ಕಾಂಗ್ರೆಸ್ ಪಕ್ಷದಲ್ಲೇ ತಮ್ಮ ರಾಜಕೀಯ ಪರ್ಯವಸನವಾಗಲಿದೆ ಎನ್ನುತ್ತಾರೆ ಸಿದ್ದರಾಮಯ್ಯ
ಉಪ ಮುಖ್ಯಮಂತ್ರಿಗಳಾದ ಕೆಎಸ್ ಈಶ್ವರಪ್ಪ, ಆರ್ ಅಶೋಕ್, ಕೃಷಿ ಸಚಿವ ಉಮೇಶ್ ಕತ್ತಿ ಮೊದಲಾದವರು ಸಿದ್ದರಾಮಯ್ಯ ಅವರನ್ನು ಕೆಣಕಿದಾಗ, ಭಾವುಕರಾದ ಅವರು ಮುಂಬರುವ ವಿಧಾನಸಭೆ ಚುನಾವಣೆ ನಂತರ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದೂ ಘೋಷಿಸಿದರು.
ಉಮೇಶ್ ಕತ್ತಿ, ನಿರಾಣಿ ಸೇರಿದಂತೆ ಹಲವು ಸಚಿವರು ಕೆಜೆಪಿಯ ಯಡಿಯೂರಪ್ಪ ಜತೆ ಸಂಪರ್ಕದಲ್ಲಿದ್ದಾರೆ ಎಂದ ಸಿದ್ದರಾಮಯ್ಯ, 'ಉಮೇಶ್, ನೀವು ಯಡಿಯೂರಪ್ಪ ಕಡೆಗೋ, ಈಶ್ವರಪ್ಪನವರ ಕಡೆಗೋ?' ಎಂದು ಕೆಣಕಿದರು. ಆದರೆ ಇದು ಸಿದ್ದುಗೇ ತಿರುಗುಬಾಣವಾಯಿತು.
ತಕ್ಷಣ ಉತ್ತರಿಸಿದ ಉಮೇಶ್ ಕತ್ತಿ, 'ನಾನು ಇಬ್ಬರ ಜತೆಯಲ್ಲೂ ಇಲ್ಲ. ಬಿಜೆಪಿಯೊಂದಿಗೆ ಇದ್ದೇನೆ. ಮುಂದೇನು ಮಾಡಬೇಕು ಎಂಬುದನ್ನು ನಿಮ್ಮ ಜತೆ ಚರ್ಚಿಸಿ ನಿರ್ಧರಿಸುತ್ತೇನೆ. ಬೇಕಾದರೆ ನೀವು ನಮ್ಮ ಜತೆ ಬರಬಹುದು' ಎಂದರು. ಆಗ ಮಧ್ಯೆ ಪ್ರವೇಶಿಸಿದ ಗೃಹ ಸಚಿವ ಆರ್ ಅಶೋಕ್, 'ನಿಮ್ಮನ್ನು ನಮ್ಮ ಜತೆ ಕರೆಯುತ್ತಾ ಇದ್ದಾರೆ' ಎಂದು ಸಿದ್ದರಾಮಯ್ಯನವರ ಕಾಲೆಳೆದರು.
ಜೆಡಿಎಸ್ ಉಚ್ಚಾಟಿಸಿದ್ದಕ್ಕೆ ಕಾಂಗ್ರೆಸ್ಸಿಗೆ ಬಂದೆ: ಆಗ ಸಿದ್ದರಾಮಯ್ಯನವರು ತಮ್ಮ ರಾಜಕೀಯ ನಿರ್ಣಯಗಳನ್ನು ಪ್ರಕಟಿಸಿದರು. 'ನಾನು ಸೋಷಿಯಲಿಸ್ಟ್ ಪಕ್ಷದಿಂದ ರಾಜಕಾರಣ ಆರಂಭಿಸಿದೆ. ನಂತರ ಜನತಾ ದಳ ಸೇರಿದೆ. ಜೆಡಿಎಸ್ ನವರು ನನ್ನನ್ನು ಉಚ್ಚಾಟನೆ ಮಾಡದೇ ಇದ್ದಿದ್ದರೆ ಅಲ್ಲೇ ಮುಂದುವರಿಯುತ್ತಿದ್ದೆ.
ಆದರೆ ಇನ್ನು ರಾಜಕೀಯದಲ್ಲಿ ಇರುವವರೆಗೂ ಕಾಂಗ್ರೆಸ್ನಲ್ಲೇ ಇರುತ್ತೇನೆ. ಪಕ್ಷ ಬಿಡುವ ಸಂದರ್ಭ ಬಂದರೆ ರಾಜಕಾರಣದಿಂದಲೇ ನಿವೃತ್ತಿಯಾಗುತ್ತೇನೆ' ಎಂದು ತಮ್ಮ ಸ್ಪಷ್ಟ ಅಭಿಪ್ರಾಯವನ್ನು ವಿಧಾನ ಸಭೆಯಲ್ಲಿ ಮಂಡಿಸಿದರು.












Click it and Unblock the Notifications