KJP ಅಧ್ಯಕ್ಷರಾಗಿ ಯಡಿಯೂರಪ್ಪಗೆ ನೈತಿಕ ಜಯ
ಬೆಂಗಳೂರು, ಫೆ.7: ಇತ್ತ ನಾನು ಕಟ್ಟಿಬೆಳೆಸಿದ ಹುತ್ತದೊಳಕ್ಕೆ ನುಸುಳಿದ ಯಡಿಯೂರಪ್ಪ ನನ್ನನ್ನೇ ಪಕ್ಷದಿಂದ ಹೊರಹಾಕಿದ್ದೂ ಅಲ್ಲದೆ ಜೀವಬೆದರಿಕೆ ಒಡ್ಡುತ್ತಿದ್ದಾರೆ. ನನ್ನನ್ನು ರಕ್ಷಿಸಿ ಎಂದು ಅತ್ಯಪರೂಪದ ಪ್ರಕರಣವೊಂದರಲ್ಲಿ ಕೆಜೆಪಿ ಸಂಸ್ಥಾಪಕ ಪದ್ಮನಾಭ ಪ್ರಸನ್ನಕುಮಾರ್ ನೆರೆ ರಾಜ್ಯದ ಮುಖ್ಯಮಂತ್ರಿಯೊಬ್ಬರ ಮೊರೆಹೋದ ಸಂದರ್ಭದಲ್ಲೇ ಅವರಿಗೆ ಚುನಾವಣೆ ಆಯೋಗದಲ್ಲಿ ತೀವ್ರ ಹಿನ್ನಡೆಯುಂಟಾಗಿದೆ.
ಯಡಿಯೂರಪ್ಪಗೆ ಕೆಜೆಪಿ ಅಧ್ಯಕ್ಷ ಸ್ಥಾನ ಅಬಾಧಿತ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕರ್ನಾಟಕ ಜನತಾ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಲು ತನ್ನದೇನು ಅಭ್ಯಂತರವಿಲ್ಲ ಎಂದು ಕೇಂದ್ರ ಚುನಾವಣೆ ಆಯೋಗವು ಸ್ಪಷ್ಟಪಡಿಸಿದೆ.

ಇದರಿಂದ ಇಂದಿನಿಂದ ಕಾವೇರಿ ನೀರಿಗಾಗಿ ನಾಲ್ಕು ಹೆಜ್ಜೆ ಹಾಕಲು ನಿರ್ಧರಿಸಿರುವ ಯಡಿಯೂರಪ್ಪಗೆ ಹೊಸ ಹುರುಪು ಬಂದಂತಾಗಿದೆ. ಆದರೆ ರಾಜಕೀಯ ಚಿತಾವಣೆ ಮೇರೆಗೆ ಏಕಾಏಕಿ ಯಡಿಯೂರಪ್ಪಗೆ ಟಾಂಗ್ ನೀಡಲು ಮುಂದಾಗಿದ್ದ ಕೆಜೆಪಿ ಸಂಸ್ಥಾಪಕ ಪದ್ಮನಾಭಗೆ ರಾಜಕೀಯವಾಗಿ ತೀವ್ರ ಹಿನ್ನಡೆಯುಂಟಾಗಿದೆ.
ಇದೇ ವೇಳೆ, ಆಯೋಗದ ಈ ನಿರ್ಧಾರದಿಂದಾಗಿ ಕೆಜೆಪಿ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಎದ್ದಿದ್ದ ವಿವಾದಕ್ಕೆ ಮಂಗಳ ಹಾಡಲಾಗಿದೆ. ಇದರೊಂದಿಗೆ ಮುಂದಿನ ವಿಧಾನಸಭೆ ಚುನಾವಣೆಗೆ ಯಡಿಯೂರಪ್ಪ ಅಧಿಪತ್ಯದಲ್ಲಿ ಕೆಜೆಪಿ ಪೂರ್ಣಪ್ರಮಾಣದ ಹೋರಾಟ ನಡೆಸಬಹುದಾಗಿದೆ.
'ತಮ್ಮನ್ನು ಸಂಸ್ಥಾಪಕ ಅಧ್ಯಕ್ಷ ಎಂದು ಘೋಷಿಸಿಕೊಂಡು ಪದ್ಮನಾಭ ಪ್ರಸನ್ನಕುಮಾರ್ ಇತ್ತೀಚೆಗೆ ಚುನಾವಣೆ ಆಯೋಗಕ್ಕೆ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಆಯೋಗವು ತಳ್ಳಿಹಾಕಿದೆ. ಯಡಿಯೂರಪ್ಪ ನೇತೃತ್ವದ ಕೆಜೆಪಿ ಸಲ್ಲಿಸಿದ್ದ ದಾಖಲೆ ಪರಿಶೀಲಿಸಿದ ಆಯೋಗವು, ಯಡಿಯೂರಪ್ಪ ಅವರು ಕೆಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರಕ್ರಿಯೆಯು ತನಗೆ ಒಪ್ಪಿತವಾಗಿದೆ ಎಂದು ತಿಳಿಸಿರುವುದಾಗಿ' ಕೆಜೆಪಿ ವಕ್ತಾರ ರಾಜೇಂದ್ರ ಗೋಖಲೆ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಕಳೆದ ತಿಂಗಳು 29ರಂದು ಪಕ್ಷದ ಸಂಸ್ಥಾಪಕ ಪದ್ಮನಾಭ ಪ್ರಸನ್ನ ಕುಮಾರ್ ಅವರನ್ನು KJP ಅಧ್ಯಕ್ಷ ಯಡಿಯೂರಪ್ಪ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಕಿತ್ತುಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications