ಸ್ಪೀಕರ್ ಕೆ ಜಿ ಬೋಪಯ್ಯ ಪತ್ತೆಯಾಗಿದ್ದು ಹೇಗೆ?

ನೇಪಾಳಕ್ಕೆ ಖಾಸಗಿ ಪ್ರವಾಸ ಹೋಗಿದ್ದ ಸ್ಪೀಕರ್ ಕೆ ಜಿ ಬೋಪಯ್ಯ ಅವರು ಮೂರು ದಿನಗಳ ಹಿಂದೆ ನಾಪತ್ತೆಯಾಗುವ ಮೂಲಕ ಯಡಿಯೂರಪ್ಪ ಅವರ ಕೆಜೆಪಿ ಸೇರಲು ಹಾತೊರೆಯುತ್ತಿರುವ ಬಿಜೆಪಿ ಶಾಸಕರಿಗೆ ಅಡ್ಡಗಾಲು ಹಾಕಿದ್ದರು.
ಗುಪ್ತ್ ಗಪ್ತ್ ಮಾಹಿತಿ ಬಯಲಾಗಿದ್ದಾದರೂ ಹೇಗೆ? ಮುಂಬೈ ವಿಮಾನ ನಿಲ್ದಾಣದಲ್ಲಿ ಬೋಪಯ್ಯ ಅವರು ದಕ್ಷಿಣ ಕನ್ನಡ JDS ಜಿಲ್ಲಾಧ್ಯಕ್ಷ ಶಶಿರಾಜ್ ಶೆಟ್ಟಿ ಅವರ ಕಣ್ಣಿಗೆ ಬಿದ್ದಿದ್ದಾರೆ. ಅಷ್ಟೇ... ಮುಂದೆ ಮಂಗಳೂರು ಮಾಧ್ಯಮ ಮಿತ್ರರಿಗೆ ಫೋನ್ ಹಚ್ಚಿದ ಶಶಿರಾಜ್ ಹೀಗ್ಹೀಗೆ ನಾನು ಮತ್ತು ಬೋಪಯ್ಯ ಅವರು ಇಂತಹ ವಿಮಾನದಲ್ಲಿ, ಇಷ್ಟೊತ್ತಿಗೆ ಮಂಗಳೂರಿಗೆ ಬಂದಿಳಿಯುತ್ತೇವೆ ಎಂಬ ಖಚಿತ ಮಾಹಿತಿ ನೀಡಿದ್ದಾರೆ. ಮಾಧ್ಯಮಗಳಿಗೆ ಅಷ್ಟು ಸಾಕಿತ್ತು!
ಮುಂಬೈಯಿಂದ ಜೆಟ್ ಏರ್ವೆಸ್ ವಿಮಾನದಲ್ಲಿ ಬಂದ ಬೋಪಯ್ಯ ಸುಮಾರು 7.30 ಗಂಟೆ ವೇಳೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಖಾಸಗಿ ವಾಹನದಲ್ಲಿ ತೆರಳಿದರು. ವಿಮಾನ ನಿಲ್ದಾಣದಲ್ಲಿ ಎದುರಾದ ಮಾಧ್ಯಮ ಪ್ರತಿನಿಧಿಗಳ ಯಾವುದೇ ಪ್ರಶ್ನೆಗೆ ಉತ್ತರಿಸಲು ಸ್ಪೀಕರ್ ನಿರಾಕರಿಸಿದರು.
ಸ್ಟೆಟರ್ ಧರಿಸಿದ್ದ ಬೋಪಯ್ಯ ಅವರು ಬರುವ ಬಗ್ಗೆ ಜಿಲ್ಲಾಡಳಿತ ಅಥವಾ ಇನ್ಯಾವುದೇ ಇಲಾಖೆಗೆ ಅಧಿಕೃತ ಮಾಹಿತಿ ಇರಲಿಲ್ಲ. ಮಾಧ್ಯಮವರಿಗೆ ಗೊತ್ತಾಗಿ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದರು.
ಬೋಪಯ್ಯ ಅವರನ್ನು ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಧ್ಯಮದವರು ವಿಚಾರಿಸಿದಾಗ ಯಾವುದೇ ಉತ್ತರ ನೀಡದೆ ನೇರವಾಗಿ ಕಾರಿನೊಳಗೆ ಕುಳಿತು ಹೊರಟು ಹೋದರು. ಚಾಲಕನಲ್ಲಿ ವಾಹನ ಚಲಾಯಿಸುವಂತೆ ಅವಸರ ಮಾಡುತ್ತಿದ್ದುದೂ ಕಂಡುಬಂತು.
ಮಂಗಳೂರಿನಿಂದ ಮಡಿಕೇರಿಗೆ ಆಗಮಿಸಿದ ಬೋಪಯ್ಯ ಅವರು ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಇದು ನನ್ನ ತೀರಾ ಖಾಸಗಿ ಪ್ರವಾಸವಾಗಿತ್ತು. ಹಾಗಾಗಿ ನಾನು ಯಾರಿಗೂ ಹೇಳುಹೋಗುವ ಅಗತ್ಯವಿರಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸೋಮವಾರ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಜನ್ಮದಿನ ಇದೆ. ಶಾಸಕರ ರಾಜೀನಾಮೆಗಿಂತ ನನಗೆ ನಮ್ಮ ನಾಡಿನ ಹೆಮ್ಮೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಜನ್ಮದಿನ ಮುಖ್ಯ. ಹಾಗಾಗಿ, ಆ ಕಾರ್ಯಕ್ರಮವನ್ನು ಮುಗಿಸಿಕೊಂಡು ಬೆಂಗಳೂರಿಗೆ ಹೋಗುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.
ಸೋಮವಾರ ವಿಧಾನಸೌಧಕ್ಕೆ ತೆರಳಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೆಂಬಲಿಗ ಶಾಸಕರ ರಾಜಿನಾಮೆ ಪತ್ರಗಳನ್ನು ಪರಿಶೀಲಿಸುವುದಾಗಿ ಅವರು ಹೇಳಿದರು. ಕಾನೂನುಬದ್ಧವಾಗಿದ್ದರೆ ಅದನ್ನು ಖಂಡಿತ ಅಂಗೀಕರಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಇದರಿಂದ 13 ಶಾಸಕರ ರಾಜೀನಾಮೆ ನಾಟಕಕ್ಕೆ ಸೋಮವಾರ ತೆರೆ ಬೀಳುವ ಸಾಧ್ಯತೆಯಿದೆ.












Click it and Unblock the Notifications