ರಾಜೀನಾಮೆಗೆ ಮುಂದಾದವರಿಗೆ ಶೆಟ್ಟರ್ ಕಿವಿ ಮಾತು

ಒಬ್ಬರ ಹಿತಾಸಕ್ತಿಗಾಗಿ ನಾಡಿನ ಜನತೆ ಹಿತಾಸಕ್ತಿ ಬಲಿ ಕೊಡುವುದು ಎಷ್ಟು ಸರಿ? ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ನನಗೆ ಇಂದು (ಬುಧವಾರ) ಬೆಳಗ್ಗೆ ತಲುಪಿಸಿದ್ದಾರೆ. ಅವರ ರಾಜೀನಾಮೆ ಅಂಗೀಕರಿಸುವ ಬಗ್ಗೆ ಶೀಘ್ರದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪೂರ್ವ ನಿಯೋಜನೆ ಯಂತೆ ಫೆ.8ರಂದೇ 2013-14೪ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದೇನೆ. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇನೆ. ಫೆ.4ರಂದು ವಿಧಾನ ಮಂಡಲದ ಉಭಯ ಸದನಗಳ ಸದಸ್ಯರ ಜಂಟಿ ಅಧಿವೇಶನ ಕರೆಯಲಾಗಿದೆ. ಅಂದು ರಾಜ್ಯಪಾಲರು ಜಂಟಿ ಸದನ ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಅಧಿವೇಶನದಲ್ಲಿ ಬಜೆಟ್ ಕುರಿತಾದ ಚರ್ಚೆ ನಡೆಯಲಿದೆ ಎಂದರು.
ಈ ಬಾರಿ ಜನಪರ, ರೈತಪರ ಬಜೆಟ್ ಮಂಡಿಸಲಿದ್ದೇನೆ. ಈ ಕುರಿತು ವಿವಿಧ ಇಲಾಖೆಗಳ ಸಚಿವರೊಡನೆ, ಅಧಿಕಾರಿಗಳೊಡನೆ ಚರ್ಚಿಸಿ, ನೂತನ ಯೋಜನೆಗಳನ್ನು ಬಜೆಟ್ನಲ್ಲಿ ಪ್ರಕಟಿಸುವ ಕುರಿತು ಸಮಾಲೋಚನೆ ನಡೆಸಿದ್ದೇನೆ. ಅಷ್ಟೇ ಅಲ್ಲ ಸಂಘ ಸಂಸ್ಥೆಗಳೊಡನೆ, ರೈತರೊಡನೆ, ಉದ್ಯಮಿ ಗಳೊಡನೆ ಹಾಗೂ ಸಮಾಜದ ವಿವಿಧ ವರ್ಗಗಳ ಜನರೊಡನೆ ಚರ್ಚಿಸಿ ಅಭಿಪ್ರಾಯಗಳನ್ನು ಕ್ರೊಢೀಕರಿಸಿದ್ದೇನೆ ಎಂದರು.
ನಾನು ಸಂವಿಧಾನಬದ್ಧವಾಗಿ ಆಯ್ಕೆ ಯಾಗಿದ್ದು, ಕಾನೂನು ರೀತಿಯಲ್ಲಿ ಈ ರಾಜ್ಯದ ಹಣಕಾಸು ಸಚಿವನಾಗಿ ಬಜೆಟ್ ಮಂಡಿಸಲು ಅಧಿಕಾರವಿದೆ. ಕೆಲ ಸಚಿವರ ರಾಜೀನಾಮೆಯಿಂದ ತೆರವಾದ ಸಚಿವ ಸ್ಥಾನ ಭರ್ತಿಮಾಡಲು ಸಂಪುಟ ವಿಸ್ತರಣೆ ಬಗ್ಗೆ ಸಂಪುಟದ ಇತರೇ ಸಚಿವರು ಮತ್ತು ಪಕ್ಷದ ಮುಖಂಡರ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರದ ಜವಾಬ್ದಾರಿ ಯುತ ಮುಖ್ಯ ಮಂತ್ರಿಯಾಗಿ ನಾನು ನನ್ನ ಕರ್ತವ್ಯ ಮಾಡುತ್ತೇನೆ.
ಟೀಕೆಗಳಿಗೆ ಪ್ರತಿಕ್ರಿಯೆ ನೀಡಬೇಕಿಲ್ಲ ಎಂದರು.
ಜೈಲಿನಲ್ಲಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಯವರನ್ನು ಸಚಿವ ಬೆಳ್ಳುಬ್ಬಿ ಭೇಟಿ ಮಾಡಿ ಮಾತುಕತೆ ನಡೆಸಿದ್ದು ಅವರ ವೈಯಕ್ತಿಕ ವಿಚಾರ. ಅದು ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದರು.












Click it and Unblock the Notifications