ಪಕ್ಷ ಬಿಟ್ಟವರ ಬಗ್ಗೆ ಕೆಎಸ್ ಈಶ್ವರಪ್ಪ ಏನಂದ್ರು?

ರಾಷ್ಟ್ರೀಯ ಪಕ್ಷವಾದ ಬಿಜೆಪಿ ವರಿಷ್ಠರ ಕೈ ಕಾಲು ಹಿಡಿದು ಟಿಕೆಟ್ ಗಿಟ್ಟಿಸಿ ಗೆದ್ದು ಬಂದು ಅಧಿಕಾರ ಅನುಭವಿಸಿದವರು ಈಗ ಪ್ರಾದೇಶಿಕ ಪಕ್ಷಕ್ಕೆ ಹೋಗುತ್ತಿದ್ದಾರೆ. ಇದು ಹೆತ್ತ ತಾಯಿಯನ್ನು ಮರೆತಂತೆ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಮಾತೃಪಕ್ಷ ಬಿಜೆಪಿ ತೊರೆದವರ ರಾಜಕೀಯ ಭವಿಷ್ಯ ಅಸ್ಥಿರಗೊಳ್ಳಲಿದೆ. ಇಲ್ಲೂ ಇಲ್ಲ ಅಲ್ಲೂ ಇಲ್ಲ ಎಂಬ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಒತ್ತಡ ಹಾಕಿ ಪ್ರಾದೇಶಿಕ ಪಕ್ಷ ಉದ್ಧಾರ ಮಾಡುವ ಯತ್ನ ಎಂದಿಗೂ ಸಫಲವಾಗುವುದಿಲ್ಲ.
ಬಿಜೆಪಿಯಲ್ಲಿದ್ದ 13 ಜನ ಶಾಸಕರು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ಮೇಲೆ ಪಕ್ಷದ ಶಿಸ್ತು ಉಲ್ಲಂಘನೆ ಮಾತು ಬರುವುದಿಲ್ಲ. ಹೀಗಾಗಿ ಅವರ ವಿರುದ್ಧ ಕ್ರಮ ಏಕೆ ತೆಗೆದುಕೊಳ್ಳೋಣ. ಕೆಜೆಪಿ ಸ್ಥಾಪನೆ ವೇಳೆ ನಮ್ಮ ಬಳಿ ಸುಮಾರು 70 ಶಾಸಕರಿದ್ದಾರೆ ಎಂದು ಬೆದರಿಕೆ ಒಡ್ಡುತ್ತಿದ್ದ ಯಡಿಯೂರಪ್ಪ ಅವರ ಬಳಿ ಈಗ ಇರುವುದು ಕೇವಲ 13 ಜನ ಎಂಬುದು ಸಾಬೀತಾಗಿದೆ.
ಸದ್ಯಕ್ಕೆ ರಾಜೀನಾಮೆಗಳು ಸಿಂಧುವಾಗಿಲ್ಲ. ವಿಧಾನಸಭೆ ಅಧ್ಯಕ್ಷರಿಗೆ ರಾಜೀನಾಮೆ ನೀಡಿದರೆ ಮಾತ್ರ ಸಿಂಧುವಾಗುತ್ತದೆ. ಯಡಿಯೂರಪ್ಪ ಅವರು ಅದೆಷ್ಟು ದಿನ ಅವರನ್ನು ತಮ್ಮ ಬಳಿ ಹಿಡಿದಿಟ್ಟುಕೊಳ್ಳುತ್ತಾರೋ ಕಾದು ನೋಡಬೇಕು ಎಂದು ಈಶ್ವರಪ್ಪ ಹೇಳಿದರು.
ಕೆಜೆಪಿಯಿಂದ ಬಿಜೆಪಿ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಬಿಜೆಪಿ ಸರ್ಕಾರ ತನ್ನ ಪೂರ್ಣಾವಧಿ ಕಾಣಲಿದೆ. ಜಗದೀಶ್ ಶೆಟ್ಟರ್ ಅವರು ಜನಪ್ರಿಯ ಬಜೆಟ್ ಮಂಡಿಸಲಿದ್ದಾರೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು, ವಿಧಾನಸಭಾಧ್ಯಕ್ಷರು ನಾಪತ್ತೆಯಾಗಿದ್ದಾರೆ ಎಂದು ಸುದ್ದಿ ಹಬ್ಬಿಸುವುದನ್ನು ಮಾಧ್ಯಮಗಳು ಬಿಡಬೇಕು. ಸ್ಪೀಕರ್ ಬೋಪಯ್ಯ ಅವರ ಇರುವಿಕೆ ಬಗ್ಗೆ ಅವರ ಕಚೇರಿ ಸಿಬ್ಬಂದಿಗೆ ಮಾಹಿತಿ ಇದ್ದೇ ಇರುತ್ತದೆ ಎಂದರು.
ಜಗದೀಶ್ ಶೆಟ್ಟರ್ ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಸಾಮಾನ್ಯ ಜನರನ್ನು ಕೇಳಿದರೂ ಹೇಳುತ್ತಾರೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗಳು ವಾಸ್ತವಾಂಶವನ್ನು ಅರ್ಥಮಾಡಿಕೊಂಡು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಜನರು ತಮಗೆ ಬೇಕಾದ ಸರ್ಕಾರ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಬೇಕು.
ಇಬ್ಬರು ಸಚಿವರು, 13 ಶಾಸಕರು ನಿನ್ನೆ ರಾಜೀನಾಮೆ ನೀಡಿದ್ದಾರೆ. ಇನ್ನಷ್ಟು ಸಚಿವರು ರಾಜೀನಾಮೆ ನೀಡುತ್ತಾರೆ ಎಂದು ಬಿಎಸ್ ಯಡಿಯೂರಪ್ಪ ಅವರು ಗುರುವಾರ(ಜ.24) ಸುದ್ದಿಗೋಷ್ಠಿಯಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications