ಟಿಪ್ಪು ವಿವಿ ಉಗ್ರರ ಅಡಗುತಾಣವಾಗುವ ಭಯವಿದೆ

ಕೇಂದ್ರ ಸಚಿವ ರೆಹಮಾನ್ ಖಾನ್ ಅವರ ಉದ್ದೇಶಿತ ಟಿಪ್ಪು ವಿಶ್ವವಿದ್ಯಾಲಯ ಸ್ಥಾಪನೆಗೆ ಗೆ ಯಾವುದೇ ಸಹಕಾರ ನೀಡುವುದಿಲ್ಲ. ಟಿಪ್ಪು ವಿವಿ ಸ್ಥಾಪಿಸಿದರೆ ಉಗ್ರಗಾಮಿಗಳ ಕೇಂದ್ರವಾಗಲಿದೆ. ಈಗಾಗಲೇ ಆಲಿಗಢ ಉಗ್ರರ ತಾಣವಾಗಿದೆ ಎಂದು ಗೋ ಮಧುಸೂದನ್ ಅಭಿಪ್ರಾಯಪಟ್ಟಿದ್ದಾರೆ.
ಟಿಪ್ಪು ಹೆಸರು ಕೈಬಿಡುವುದಿಲ್ಲ: ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಅಲ್ಪಸಂಖ್ಯಾತರ ವಿಶ್ವ ವಿದ್ಯಾಲಯಕ್ಕೆ ಟಿಪ್ಪುಸುಲ್ತಾನ್ ಹೆಸರನ್ನು ಇಡಲಾಗುವುದು ಇದರಿಂದ ಹಿಂದೆ ಸರಿಯುವ ಮಾತಿಲ್ಲ. ಉದ್ದೇಶಿತ ಯೋಜನೆ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕೆ.ರೆಹಮಾನ್ ಖಾನ್ ಹೇಳಿದ್ದಾರೆ.
ಟಿಪ್ಪು ವ್ಯಕ್ತಿತ್ವ ಹಾಗೂ ಹೋರಾಟ ಕುರಿತು ಸರಿಯಾಗಿ ಅರಿಯದೆ ಕೆಲವರು ವಿರೋಧ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ತೀರ್ಮಾನದಿಂದ ಹಿಂದೆ ಸರಿಯುವುದಿಲ್ಲ.ಟಿಪ್ಪು ಹೆಸರಿಗೆ ವಿರೋಧ ಮಾಡುತ್ತಿರುವವರ ಜತೆ ಮಾತುಕತೆ ನಡೆಸುವುದಿಲ್ಲ ಎಂದು ಕೇಂದ್ರ ಸಚಿವ ಖಾನ್ ತಿಳಿಸಿದರು.
ದೇಶಕ್ಕೆ ಟಿಪ್ಪು ಕೊಡುಗೆ ಅನನ್ಯ. ಮಕ್ಕಳನ್ನೇ ತ್ಯಾಗ ಮಾಡಿದ ಮಹಾನ್ ದೇಶಪ್ರೇಮಿ. ಮೊಟ್ಟಮೊದಲಿಗೆ ಕ್ಷಿಪಣಿಗಳನ್ನು ಜಗತ್ತಿಗೆ ಕೊಟ್ಟವನು. ಇಂಥ ವ್ಯಕ್ತಿ ಹೆಸರನ್ನು ವಿವಿಗೆ ಇಡುವುದಕ್ಕೆ ವಿರೋಧ ಮಾಡುತ್ತಿರುವುದು ನೋವು ತಂದಿದೆ ಎಂದು ರೆಹಮಾನ್ಖಾನ್ ವಿಷಾದಿಸಿದರು.
ಟಿಪ್ಪು ಸುಲ್ತಾನ್ ಈ ದೇಶ ಕಂಡ ಅಪ್ರತಿಮ ದೇಶಭಕ್ತ. ಟಿಪ್ಪು ಬಗ್ಗೆ ಟೀಕಿಸುವವರು ಆತನ ಇತಿಹಾಸವನ್ನೊಮ್ಮೆ ಅವಲೋಕಿಸಿ ನೋಡಲಿ. ಮುಸ್ಲಿಮರನ್ನು ಬಿಟ್ಟು ಈ ದೇಶ ಕಟ್ಟಲು ಸಾಧ್ಯವಿಲ್ಲ. ಆದ್ದರಿಂದ ಟಿಪ್ಪು ವಿಶ್ವ ವಿದ್ಯಾನಿಲಯ ಸ್ಥಾಪನೆ ಆಗಬೇಕು ಎಂದು ಜ್ಞಾನಪೀಠ ಪುರಸ್ಕೃತ ಡಾ.ಯು.ಆರ್.ಅನಂತಮೂರ್ತಿ ಇತ್ತೀಚೆಗೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದಕ್ಕೂ ಮುನ್ನ, ಟಿಪ್ಪು ಕ್ರೂರಿ, ಅನ್ಯಧರ್ಮ ದ್ವೇಷಿ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ವಿರೋಧಿಯಾಗಿದ್ದ
ಅವರನ್ನು ಹೊಗಳುವ ಮೂಲಕ ವೋಟ್ ಬ್ಯಾಂಕ್ ರಾಜಕಾರಣ ಮಾಡಲಾಗುತ್ತಿದೆ. ಆತ ಕನ್ನಡಿಗರ ಪರ ಇರಲಿಲ್ಲ. ವ್ಯಾಪಾರಿ ಮನೋಭಾವದಿಂದ ಸಮಾಜ ಸುಧಾರಣೆ ಮುಂದಾಗಿದ್ದ ಅಷ್ಟೇ.
ಮೇಲುಕೋಟೆ, ಶ್ರೀರಂಗಪಟ್ಟಣ, ಶೃಂಗೇರಿ ಮಠ, ನಂಜನಗೂಡು ದೇಗುಲಗಳಿಗೆ ದಾನ ದತ್ತಿ ನೀಡಿರುವ ಹಿಂದೆ ರಾಜಕೀಯ ಉದ್ದೇಶವಿತ್ತು. ಹೀಗಾಗಿ ಆತನ ಹೆಸರು ವಿವಿಗೆ ಇಡಬಾರದು ಎಂದು ಚಿದಾನಂದ ಮೂರ್ತಿ ಆಗ್ರಹಿಸಿದ್ದಾರೆ. ಟಿಪ್ಪು ಹೆಸರಿನ ಬದಲು ಅಬ್ದುಲ್ ಕಲಾಂ ಅಥವಾ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿಡುವುದು ಸೂಕ್ತ ಎಂದು ಇತಿಹಾಸಕಾರ ಚಿದಾನಂದ ಮೂರ್ತಿ ಅಭಿಪ್ರಾಯಪಟ್ಟಿದ್ದರು.,












Click it and Unblock the Notifications