ಬಂಜೆ ಎಂದು ಹೀಯಾಳಿಸಿ ಹೆಣ್ಣು ಜೀವವ ಕೊಂದರು

ಚಿಕ್ಕನಾಯಕನಹಳ್ಳಿ ತಾಲೂಕಿನ ಕಂದಿಕೆರೆ ಗ್ರಾಮದ ವಾಸಿ ದಾಸಪ್ಪ ಎಂಬುವರ ಮಗಳು ಕಮಲಮ್ಮ ಎಂಬುವರೇ ದುರ್ದೈವಿ. ಮದುವೆಯಾಗಿ ಐದು ವರ್ಷವಾದರೂ ಕಮಲಮ್ಮ ಅವರಿಗೆ ಮಕ್ಕಳಾಗಿರಲಿಲ್ಲ. ಜೊತೆಗೆ ವರದಕ್ಷಿಣೆ ತರುವಂತೆ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರು. ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಆಕೆಯನ್ನು ಬಲಿ ತೆಗೆದುಕೊಂಡಿದ್ದಾರೆ.
ಜ.8 ರಂದು ಕಮಲಾ ಮನೆಯಲ್ಲಿದ್ದಾಗ ಗುಂಡು ಹಾರಿಸಲಾಗಿತ್ತು. ಆದರೆ, ಆಕೆಯನ್ನು ವಿಕ್ಟೋರಿಯಾ ಅಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕಮಲಮ್ಮ ಅವರು ಶುಕ್ರವಾರ(ಜ.11) ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ಹೇಳಿದೆ,
ಶಿರಾ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆದಿದೆ. ಕಮಲಮ್ಮ ಅವರ ತಂದೆ ದಾಖಲಿಸಿರುವ ದೂರಿನ ಪ್ರತಿ ಇಲ್ಲಿದೆ.. ಓದಿಕೊಳ್ಳಿ
ಶಿರಾ ನಗರ ಪೊಲೀಸ್ ಠಾಣಾ ಮೊ.ಸಂ 08/2013 ಕಲಂ 498(ಎ), 302 ರೆ.ವಿ 34 ಐಪಿಸಿ ಮತ್ತು 3, 25,27,30 ಆಯುಧಗಳ ಅಧಿನಿಯಮ 1959
ದಿ:10/01/2013 ರಂದು ಬೆಳಿಗ್ಗೆ 10:30 ಗಂಟೆಗೆ ಪಿರ್ಯಾದಿ ಬಿ.ಡಿ. ದಾಸಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ತಮ್ಮ ಮಗಳಾದ ಕಮಲಮ್ಮ ರವರನ್ನು ಗಿಣ್ಣಪ್ಪನಹಟ್ಟಿ ಬೋವಿ ಕಾಲೋನಿ ವಾಸಿ ತಿಮ್ಮಾಬೋವಿ ರವರ ಮಗನಾದ ಕರಿಯಪ್ಪ ಎಂಬುವರಿಗೆ ಈಗ್ಗೆ 5 ವರ್ಷಗಳ ಹಿಂದೆ ಮದುವೆ ಮಾಡಿ ಕೊಟ್ಟಿದ್ದು...
ಕಮಲಮ್ಮಾಗೆ ಮಕ್ಕಳಾಗದ ಕಾರಣ ತನ್ನ ಅಳಿಯ ಕರಿಯಪ್ಪ, ಕರಿಯಪ್ಪ ರವರ ತಂದೆ ತಿಮ್ಮಾಬೋವಿ, ತಾಯಿ ಯಲ್ಲಮ್ಮ ರವರು ನಿನಗೆ ಮಕ್ಕಳಾಗಿಲ್ಲ ಎಂದು ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದು..
ದಿ:09/01/2013 ರಂದು ಬೆಳಿಗ್ಗೆ 11:00 ಗಂಟೆಗೆ ಕರಿಯಪ್ಪ ಪಿರ್ಯಾಧಿಗೆ ಪೋನ್ ಮಾಡಿ ಕಮಲಮ್ಮಳಿಗೆ ಹುಷಾರಿಲ್ಲ ಬಲ ಕುಂಡಿ ಬಳಿ ಏಟಾಗಿದೆ ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಅಲ್ಲಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇನೆ ಬನ್ನಿ ಎಂದು ತಿಳಿಸಿದ್ದು...
ವಿಕ್ಟೋರಿಯಾ ಆಸ್ಪತ್ರೆಗೆ ಪಿರ್ಯಾದಿ ಹೋಗಿ ನೋಡಲಾಗಿ ತನ್ನ ಮಗಳು ಪ್ರಜ್ಞೆ ಇಲ್ಲದೇ ಚಿಕಿತ್ಸೆ ಪಡೆಯುತ್ತಿದ್ದು, ನನ್ನ ಅಳಿಯ ಅಲ್ಲಿ ಇಲ್ಲದೇ ಇದ್ದುದರಿಂದ ಅಲ್ಲಿಯೇ ಇದ್ದು ಗಿಣ್ಣಪ್ಪನಹಟ್ಟಿಯ ಭೂತೇಶ ರವರನ್ನು ವಿಚಾರ ಮಾಡಲಾಗಿ ...
ದಿ:08/01/2013 ರಂದು ರಾತ್ರಿ 8:00 ಗಂಟೆಯ ಸಮಯದಲ್ಲಿ ಮನೆಯಲ್ಲಿ ಕರಿಯಪ್ಪ ಮತ್ತು ಕಮಲಮ್ಮ ಇಬ್ಬರು ಮಕ್ಕಳಾಗದ ವಿಚಾರದಲ್ಲಿ ಗಲಾಟೆ ಮಾಡಿಕೊಂಡು. ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದ ತನ್ನ ಚಿಕ್ಕಪ್ಪ ಭೂತಾಬೋವಿ ರವರ ಬಾಬ್ತು ಬಂದೂಕಿನಿಂದ ಕರಿಯಪ್ಪ ರವರು ಕಮಲಮ್ಮಳನ್ನು ಕೊಲೆ ಮಾಡುವ ಉದ್ದೇಶದಿಂದ ಗುಂಡು ಹಾರಿಸಿದ್ದು ಗುಂಡು ಕಮಲಮ್ಮಳ ಬಲ ಕುಂಡಿಗೆ ಬಿದ್ದು ಗಾಯವಾಗಿದ್ದು ಚಿಕಿತ್ಸೆಗಾಗಿ ಸೇರಿಸಿರುತ್ತೇವೆಂದು ತಿಳಿಸಿದನು.
ನನ್ನ ಮಗಳಿಗೆ ಚಿಕಿತ್ಸೆ ಫಲಕಾರಿಯಾಗದೇ ದಿ:09/01/2013 ರಂದು ರಾತ್ರಿ ಸುಮಾರು 12:00 ರಿಂದ 1:00 ಗಂಟೆ ಮದ್ಯೆ ಮೃತಪಟ್ಟಿರುತ್ತಾಳೆ.
ಆದ್ದರಿಂದ ನನ್ನ ಮಗಳಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ, ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿರುವ ಕರಿಯಪ್ಪ. ತಿಮ್ಮಾಬೋವಿ, ಯಲ್ಲಮ್ಮ ರವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.












Click it and Unblock the Notifications