ಸಂಕ್ರಾಂತಿಗೆ ಮೊದಲು ಹಾಲಿನ ದರ ಏರಿಕೆಯ ಕಹಿ?

ಬೆಂಗಳೂರಿನಲ್ಲಿ ಜ.13ರಂದು ನಡೆಯಲಿರುವ ಕರ್ನಾಟಕದ ಹಾಲು ಮಾರಾಟಗಾರರ ಸಭೆಯಲ್ಲಿ ಹಾಲು ಬೆಲೆ ಏರಿಕೆಯ ಸುದ್ದಿಯನ್ನು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಘೋಷಿಸಲಿದ್ದಾರೆ ಎಂದು ಬಳ್ಳಾರಿಯಲ್ಲಿ ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಅವರು ಹೇಳಿ, ಮೊದಲೇ ಸಿದ್ಧರಾಗಿರಿ ಎಂಬ ಸಂದೇಶವನ್ನು ರಾಜ್ಯದ ಜನತೆಗೆ ಸಾರಿದ್ದಾರೆ. ರಾಜ್ಯ ಸರಕಾರ ಕೂಡ ಇದಕ್ಕೆ ಒಪ್ಪಿದೆ ಎಂದು ಅವರು ಹೇಳಿದ್ದಾರೆ.
ಹೈನುಗಾರಿಕೆ ಮಾಡುತ್ತಿರುವ ರೈತರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದು, ಬೆಲೆ ಏರಿಕೆಯೊಂದೇ ಅವರಿಗೆ ಸಮಾಧಾನ ತರಲಿದೆ. ಅಲ್ಲದೆ, ನೆರೆ ರಾಜ್ಯಗಳಲ್ಲಿಗಿಂತ ಕರ್ನಾಟಕದಲ್ಲಿ ಹಾಲಿನ ಬೆಲೆ ಕಡಿಮೆಯಿದೆ. ಆಂಧ್ರದಲ್ಲಿ ಲೀಟರಿಗೆ 28 ರು. ಇದ್ದರೆ, ಕೇರಳದಲ್ಲಿ ಲೀಟರಿಗೆ 30 ರು. ಇದೆ. ಕರ್ನಾಟಕದಲ್ಲಿ ಮಾತ್ರ ಲೀಟರಿಗೆ 24 ರು. ಇದೆ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ನೀಲಿ ಬಣ್ಣದ ಪ್ಯಾಕೆಟ್ ಇರುವ ಸಾಧಾರಣ ಹಾಲು ಲೀಟರಿಗೆ 24 ರು, ಹಸಿರು ಬಣ್ಣದ ಹೋಮೋಜಿನೈಸ್ಡ್ ಹಾಲು ಲೀಟರಿಗೆ 28 ರು. ಮತ್ತು ಕೇಸರಿ ಬಣ್ಣದ ಪ್ಯಾಕೆಟ್ ಕೆನೆಭರಿತ ಹಾಲು ಲೀಟರಿಗೆ 30 ರು. ಇದೆ. ಯಾವ ಹಾಲಿನ ದರ ಎಷ್ಟು ಏರಿಸಲಾಗುತ್ತದೆ ಎಂಬ ಬಗ್ಗೆ ಅವರು ನಿಖರವಾಗಿ ಹೇಳಿಲ್ಲ. ಆದರೆ, ಪ್ರತಿ ಲೀಟರಿಗೆ 5 ರು. ಏರಿಸಬೇಕೆಂಬ ಪ್ರಸ್ತಾಪ ಮಾಡಲಾಗಿದೆ.
ಕೆಲ ದಿನಗಳ ಹಿಂದೆ, ದುಬಾರಿ ಬೆಲೆಗೆ ಹತ್ತಿ ಬೀಜದ ಹಿಂಡಿಯನ್ನು ಖರೀದಿಸಿ ಕರ್ನಾಟಕ ಹಾಲು ಮಂಡಳಿಗೆ 31 ಕೋಟಿ ರು.ನಷ್ಟು ನಷ್ಟ ಉಂಟುಮಾಡಿದ್ದಾರೆ ಎಂಬ ಆರೋಪ ಹೊತ್ತಿರುವ ಸೋಮಶೇಖರ ರೆಡ್ಡಿಯನ್ನು ಕೆಎಂಎಫ್ನಿಂದ ಕಿತ್ತು ಹಾಕಬೇಕು ಎಂದು ರಾಜ್ಯದ ರೈತರು ದಂಗೆ ಎದ್ದಿದ್ದರು. ಈ ಹಗರಣದಲ್ಲಿ ಕೆಎಂಎಫ್ನ ಅನೇಕ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ.
ಕೆಎಂಎಫ್ ಮತ್ತು ರೈತರ ಬೇಡಿಕೆಗೆ ಮಣಿದು ರಾಜ್ಯ ಸರಕಾರ ಹಾಲಿನ ದರ ಏರಿಸಲು ಒಪ್ಪಿಗೆ ಸೂಚಿಸಬೇಕೆ? [ಓದಿರಿ : ನಮ್ಮ ನಂದಿನಿಗೆ ಮಾತಾಡಲು ಬಂದಿದ್ದರೆ...]












Click it and Unblock the Notifications