ಡಿವಿಎಸ್ ಗೆ ಮತ್ತೆ ರಾಜ್ಯಾಧ್ಯಕ್ಷ ಪಟ್ಟ ಖಚಿತ

ಪಕ್ಷದ ಹಿರಿಯ ವರಿಷ್ಠ ಎಲ್ ಕೆ ಅಡ್ವಾಣಿ ಅವರ ನೇತೃತ್ವದಲ್ಲಿ ನಡೆದ ಸಂಸದೀಯ ಮಂಡಳಿ ಸಭೆಯಲ್ಲಿ ಕರ್ನಾಟಕ ಬಿಜೆಪಿಯ ಮುಂದಿನ ಭವಿಷ್ಯದ ಬಗ್ಗೆ ಕೂಲಂಕುಷವಾಗಿ ಚರ್ಚೆ ನಡೆದಿದೆ.
ವಿಧಾನಸಭೆ ಚುನಾವಣೆ, ರಾಜ್ಯಾಧ್ಯಕ್ಷರ ನೇಮಕದ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದ್ದು, ಉತ್ತರ ಕರ್ನಾಟಕದ ಜಗದೀಶ್ ಶೆಟ್ಟರ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಿರುವುದರಿಂದ ಸಾಮೂಹಿಕ ನಾಯಕತ್ವದ ಬದಲು ಶೆಟ್ಟರ್ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸಿ ಎಂದು ಅಡ್ವಾಣಿ ಕಿವಿಮಾತು ಹೇಳಿದ್ದಾರೆ.
ಡಿವಿಎಸ್ ಗೆ ರಾಜ್ಯಾಧ್ಯಕ್ಷ ಪಟ್ಟ: ಸಿಎಂ ಅಭ್ಯರ್ಥಿಯಾಗಿ ಮತ್ತೊಮ್ಮೆ ಶೆಟ್ಟರ್ ಕಾಣಿಸಿಕೊಂಡಿರುವುದರಿಂದ ಮಾಜಿ ಸಿಎಂ ಸದಾನಂದ ಗೌಡರು ಮತ್ತೊಮ್ಮೆ ರಾಜ್ಯಾಧ್ಯಕ್ಷರನ್ನಾಗಿ ಮಾಡಲು ನಿರ್ಧರಿಸಲಾಗಿದೆ. ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರು ಕೂಡಾ ಸದಾನಂದ ಗೌಡರ ಪರ ಮಾತುಗಳನ್ನಾಡಿದ್ದಾರೆ.
ಆದರೆ, ಆರೆಸ್ಸೆಸ್ ಮುಖಂಡರೊಂದಿಗೆ ಅಂತಿಮ ಸುತ್ತಿನ ಮಾತುಕತೆ ನಡೆಸಿ ಜ.15ರೊಳಗೆ ಹೊಸ ಸಾರಥಿಯನ್ನು ಘೋಷಿಸುವ ಸಾಧ್ಯತೆ ನಿಚ್ಚಳವಾಗಿದೆ.
ಯಡಿಯೂರಪ್ಪ ಅವರ ನಿರ್ಗಮನದಿಂದ ಗೊಂದಲದಿಂದಾಗಿ ಆಯಕಟ್ಟಿನ ಜಾಗಗಳಲ್ಲಿ ಕ್ರಮವಾಗಿ, ಲಿಂಗಾಯತ, ಗೌಡ, ಪರಿಶಿಷ್ಟ ಜಾತಿ ಹೀಗೆ ಸ್ಥಾನಗಳನ್ನು ನೀಡಲು ಬಿಜೆಪಿ ಮುಂದಾಗಿದೆ.
ಹೀಗಾಗಿ ಪರಿಶಿಷ್ಟ ಜಾತಿಯ ಎಡಗೈ ಸಮುದಾಯಕ್ಕೆ ಸೇರಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಅವರನ್ನು ಉನ್ನತ ಸ್ಥಾನಕ್ಕೆ ಪರಿಗಣಿಸಲು ಬಿಜೆಪಿ ಚಿಂತಿಸುತ್ತಿದೆ.
ಒಟ್ಟಾರೆ, ವೀರಶೈವ, ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ ಮತ್ತು ಒಕ್ಕಲಿಗ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಬಿಜೆಪಿ ಸಿದ್ಧತೆ ನಡೆಸಿದೆ.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಡಿವಿ ಸದಾನಂದ ಗೌಡ, ನಳೀನ್ ಕುಮಾರ್ ಕಟೀಲ್, ಪ್ರಹ್ಲಾದ ಜೋಶಿ ಹೆಸರುಗಳು ಎಂದಿನಂತೆ ರೇಸ್ ನಲ್ಲಿದೆ.
ಆರೆಸ್ಸೆಸ್ ಆದ್ಯತೆ ಪಟ್ಟಿಯಲ್ಲಿ ನಳೀನ್ ಕುಮಾರ್ ಕಟೀಲ್, ಸದಾನಂದ ಗೌಡ, ಪ್ರಹ್ಲಾದ ಜೋಶಿ ನಂತರದ ಸ್ಥಾನದಲ್ಲಿ ಗೋವಿಂದ ಕಾರಜೋಳ ಕಾಣಿಸಿಕೊಂಡಿದ್ದಾರೆ.
ಅನಂತ್ ಕುಮಾರ್, ಆರ್ ಅಶೋಕ್ ಅಲ್ಲದೆ ಮತ್ತೊಮ್ಮೆ ಕೆಎಸ್ ಈಶ್ವರಪ್ಪ ಅವರನ್ನೇ ರಾಜ್ಯಾಧ್ಯಕ್ಷರಾಗಿ ಘೋಷಿಸಿ ಎಂಬ ಒತ್ತಡ ಬಿಜೆಪಿ ಮುಖಂಡರ ಮೇಲಿದೆ. ಎಲ್ಲದ್ದಕ್ಕೂ ಸಂಕ್ರಾಂತಿ ನಂತರ ಉತ್ತರ ಸಿಗಲಿದ್ದು, ಸದಾನಂದ ಗೌಡರಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆ ಹೆಚ್ಚಿದೆ.












Click it and Unblock the Notifications