ಡೀಸೆಲ್ 4.5 ರು, ಎಲ್ಪಿಜಿ 100 ರು. ಏರಿಕೆ ಗ್ಯಾರಂಟಿ

ಜಿಡಿಪಿ ದರವನ್ನು ಶೇ.8ಕ್ಕೆ ಏರಿಸುವ ಗುರಿಯನ್ನು ಕೇಂದ್ರ ಸರಕಾರ ಇಟ್ಟುಕೊಂಡಿದ್ದು, ಈ ನಿಟ್ಟಿನಲ್ಲಿ ಅನೇಕ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ತೈಲೋತ್ಪನ್ನಗಳ ಬೆಲೆ ಏರಿಕೆ ಇನ್ನೊಂದೆರಡು ವಾರಗಳಲ್ಲಿ ಹೊರಬೀಳಲಿದೆ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು ಗುರುವಾರ ತಿಳಿಸಿದರು.
ಡೀಸೆಲ್ ಬೆಲೆ ಏರಿಸಲು ಮತ್ತು ರಿಯಾಯಿತಿ ದರದಲ್ಲಿ ದೊರೆಯುವ ಅಡುಗೆ ಅನಿಲ ಸಿಲಿಂಡರನ್ನು ವರ್ಷಕ್ಕೆ 6ರಿಂದ 9ಕ್ಕೆ ಏರಿಸಲು ತೈಲ ಸಚಿವಾಲಯ ಕೇಂದ್ರ ಸಂಪುಟಕ್ಕೆ ಶಿಫಾರಸು ಮಾಡಿದೆ. ಇದಕ್ಕೆ ಪ್ರಧಾನಿ ಡಾ. ಮನಮೋಹನ ಸಿಂಗ್ ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅನುಮತಿ ಕೂಡ ದೊರೆತಿದೆ.
2010ರ ಜೂನ್ನಲ್ಲಿ ಪೆಟ್ರೋಲ್ ಬೆಲೆ ಏರಿಕೆಯನ್ನು ಕೇಂದ್ರ ಸರಕಾರ ತನ್ನ ಹಿಡಿತದಿಂದ ಮುಕ್ತಗೊಳಿಸಿತ್ತು. ಆದರೆ, ದೇಶದ ಬಡ ನಾಗರಿಕರನ್ನು ಗಮನದಲ್ಲಿಟ್ಟುಕೊಂಡು ಡೀಸೆಲ್ ಬೆಲೆ ಏರಿಕೆಯ ಹಕ್ಕನ್ನು ತಾನೇ ಉಳಿಸಿಕೊಂಡಿತ್ತು. ತೈಲೋತ್ಪನ್ನಗಳ ಬೆಲೆ ಅಂತಾರಾಷ್ಟ್ರೀಯ ದರಗಳಿಗೆ ಹೋಲಿಸಿದರೆ ಭಾರತದಲ್ಲಿ ಕಡಿಮೆಯಿದ್ದು, ನಿಯಮಿತವಾಗಿ ಏರಿಸಬೇಕಾಗುತ್ತದೆ ಎಂದು ಮನಮೋಹನ ಸಿಂಗ್ ಅವರು ಸೋಮವಾರ ಹೇಳಿದ್ದರು.
ರೈಲು ದರ, ಡೀಸೆಲ್ ದರ ಮತ್ತು ಎಲ್ಪಿಜಿ ದರ ಏರಿಕೆಯ ಬೆನ್ನಹಿಂದೆಯೇ ಮತ್ತೊಂದು ಆಘಾತ ಕರ್ನಾಟಕದ ನಾಗರಿಕರಿಗೆ ಕಾದಿದೆ. ರಾಜ್ಯ ಸರಕಾರ ಒಪ್ಪಿಕೊಂಡರೆ ಸದ್ಯದಲ್ಲೇ ಹಾಲಿನ ದರ ಕೂಡ ಕರ್ನಾಟಕದಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಲಿದೆ. ಈ ಕುರಿತು ಜ.13ರಂದು ಅಧಿಕೃತ ಘೋಷಣೆ ಹೊರಬೀಳಲಿದೆ.












Click it and Unblock the Notifications