'ಕರ್ನಾಟಕದ ಮೋದಿ' ಯಾರಂತ ಘೋಷಣೆಯಾಯ್ತು
ಹಾಸನ/ಚಿಕ್ಕಮಗಳೂರು, ಜ. 8: ಕೆಜೆಪಿ ಅಧ್ಯಕ್ಷ, ಬಿಜೆಪಿಯ ಮಾಜಿ ನಾಯಕ ಬಿಎಸ್ ಯಡಿಯೂರಪ್ಪನವರು ತಾವೇ 'ಕರ್ನಾಟಕದ ಮೋದಿ' ಎಂದು ಹಾಸನದಲ್ಲಿ ಸ್ವಯಂ ಘೋಷಿಸಿಕೊಂಡಿದ್ದಾರೆ.
ಕಳೆದ ವರ್ಷ ಅತ್ತ ಗುಜರಾತಿನಲ್ಲಿ ಕೇಶುಭಾಯ್ ಪಟೇಲ್ ಸೋತು ಸುಣ್ಣವಾಗುತ್ತಿದ್ದಂತೆ ಇತ್ತ ಯಡಿಯೂರಪ್ಪನವರ ವಿರೋಧಿಗಳೆಲ್ಲ 'ನಮ್ಮ ಕರ್ನಾಟಕದ ಕೇಶುಭಾಯ್ ಪಟೇಲ್ ಅವರೇ ರೀ' ಎಂದು ಕುಹಕವಾಡಿದ್ದರು. ಹಾಗಂದಿದ್ದೇ ತಡ, ಹಾಗಾದರೆ 'ಕರ್ನಾಟಕದ ಮೋದಿ ಯಾರು ಸ್ವಾಮಿ?' ಎಂದು ಬಿಎಸ್ವೈ ಸಹ ಕುಹಕಿಗಳತ್ತ ಪ್ರಶ್ನೆ ಎಸೆದಿದ್ದರು ಎಂಬುದು ಗಮನಾರ್ಹ.

ಆದರೆ ಯಡಿಯೂರಪ್ಪ ಹಾಸನದಲ್ಲಿಯೇ ಈ ಘೋಷಣೆ ಮಾಡಿರುವುದು ಕುತೂಹಲಕಾರಿಯಾಗಿದೆ. ಯಡಿಯೂರಪ್ಪ ಮಾತುಗಳಲ್ಲೇ ಹೇಳುವುದಾದರೆ 'ವಿಧಾನಸಭೆ ಚುನಾವಣೆಯ ನಂತರ ಬಿಎಸ್ವೈಗೆ ಗುಜರಾತಿನ ಕೇಶುಭಾಯ್ ಪಟೇಲ್ ಸ್ಥಿತಿ ಬರುತ್ತದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. ಅವರಿಗೆ ಗೊತ್ತಿಲ್ಲ, ಯಡಿಯೂರಪ್ಪ ಕರ್ನಾಟಕದ ನರೇಂದ್ರ ಮೋದಿಯಾಗಲಿದ್ದಾರೆ. ಆದರೆ ಹಾಗೆ ಹೇಳಲು ಗೌಡರಿಗೆ ಸಾಧ್ಯವಿಲ್ಲ. ಆದ್ದರಿಂದ ಕೇಶುಭಾಯಿ ಪಟೇಲ್ಗೆ ತಮ್ಮನ್ನು ಹೋಲಿಸಿದ್ದಾರೆ' ಎಂದು ಬಿಎಸ್ವೈ ತಿರುಗೇಟು ನೀಡಿದರು.
ಈ ಮಧ್ಯೆ, ಬಿಜೆಪಿ ಸರ್ಕಾರವನ್ನು ಬೀಳಿಸಲು ಹಿಂಜರಿಯುತ್ತಿರುವ ಯಡಿಯೂರಪ್ಪನವರು, ಹಾಲಿ ಸರಕಾರದ ಪತನಕ್ಕೆ ಮತ್ತೂಂದು ಡೆಡ್ಲೈನ್ ನಿಗದಿಪಡಿಸಿದ್ದಾರೆ. ಜನವರಿ 23 ರಂದು ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ರವಿ, ಯಾವ ಸೀಮೆಯ ದೊಡ್ಡ ಮನುಷ್ಯ?: ಇದೇ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಯಡಿಯೂರಪ್ಪ 'ಸದಾನಂದ ಗೌಡ ಮತ್ತು ಸಿಟಿ ರವಿ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸುವುದಿಲ್ಲ ಅವರೆಲ್ಲ ದೊಡ್ಡ ಮನುಷ್ಯರು' ಎಂದು ಗೇಲಿ ಮಾಡಿದರು.
ಸಚಿವ ರವಿ ತಮ್ಮ ವಿರುದ್ಧ ಮಾಡಿರುವ ಟೀಕೆಗೆ ಏನು ಉತ್ತರ ನೀಡುತ್ತೀರಿ ಎಂದು ಕೇಳಿದಾಗ ಮುಜುಗರಕ್ಕೀಡಾದ ಯಡಿಯೂರಪ್ಪ ನನ್ನ ಬಾಯಲ್ಲಿ 'ಸಂಸ್ಕೃತ ಭಾಷೆ' ಮಾತನಾಡಿಸಬೇಡಿ. ಅವನೊಬ್ಬ (ರವಿ) ಮೂರ್ಖ. ಅವ ಯಾವ ಸೀಮೆಯ ದೊಡ್ಡ ಮನುಷ್ಯ ಎಂದು ಆತನ ಮಾತಿಗೆ ಉತ್ತರ ನೀಡಲಿ? ಎಲುಬಿಲ್ಲದ ನಾಲಿಗೆಯಲ್ಲಿ ಏನೇನೋ ಮಾತನಾಡುವುದು ಅವನಿಗೆ ರೂಢಿಯಾಗಿ ಬಿಟ್ಟಿದೆ. ಅದಕ್ಕೆ ನಾನೇನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತೀಕ್ಷ್ಣ ರೀತಿಯಲ್ಲಿ ನಡೆಸಿದ ವಾಗ್ದಾಳಿ ಗಮನಾರ್ಹವಾಗಿತ್ತು.












Click it and Unblock the Notifications