ಜಾರ್ಖಂಡಿನಲ್ಲಿ ಬಿಜೆಪಿ ಸಮ್ಮಿಶ್ರ ಸರಕಾರ ಪತನ

ಈ ಬೆಳವಣಿಗೆಯ ನಂತರ ಮುಖ್ಯಮಂತ್ರಿ ಅರ್ಜುನ್ ಮುಂಡಾ ನೇರವಾಗಿ ರಾಜ್ಯಪಾಲ ಸಯೀದ್ ಅಹಮದ್ ಅವರನ್ನು ಭೇಟಿಯಾಗಿ, ಮಂತ್ರಿಮಂಡಳದ ರಾಜೀನಾಮೆ ಪತ್ರವನ್ನು ಸಲ್ಲಿಸುತ್ತಾ, ವಿಧಾನಸಭೆ ವಿಸರ್ಜನೆಗೆ ಸಲಹೆ ನೀಡಿದರು.
ಅದಕ್ಕೂ ಮುನ್ನ ಹೇಮಂತ್ ಸೊರೆನ್ ನೇತೃತ್ವದಲ್ಲಿ JMM ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಿ, ಸರಕಾರಕ್ಕೆ ತಾವು ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿರುವುದಾಗಿ ಘೋಷಿಸಿದರು.
ಅರ್ಜುನ್ ಮುಂಡಾ ಸರಕಾರವು 2010ರಲ್ಲಿ ಒಟ್ಟು 44 ಶಾಸಕರ ಬೆಂಬಲದೊಂದಿಗೆ ಅಧಿಕಾರಕ್ಕೇರಿತ್ತು. 81 ಮಂದಿ ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ಬಿಜೆಪಿ ಹಾಗೂ ಜೆಎಂಎಂ ತಲಾ 18 ಮಂದಿ ಶಾಸಕರನ್ನು ಹೊಂದಿವೆ. ಅಖಿಲ ಜಾರ್ಖಂಡ್ ವಿದ್ಯಾರ್ಥಿ ಒಕ್ಕೂಟ (ಎಜೆಎಸ್ಯು) ಪಕ್ಷದ 6 ಶಾಸಕರು ಹಾಗೂ 2 ಜೆಡಿಯು ಶಾಸಕರ ಬೆಂಬಲ ಅರ್ಜುನ್ ಮುಂಡಾ ಸರಕಾರಕ್ಕಿತ್ತು. ಜೆಎಂಎಂನ 18 ಶಾಸಕರು ಬೆಂಬಲ ವಾಪಸ್ ಪಡೆದಿರುವುದರಿಂದ ಸರಕಾರದ ಶಾಸಕ ಬಲ 26ಕ್ಕೆ ಕುಸಿಯಿತು.
ಅರ್ಜುನ್ ಮುಂಡಾ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಿಗೊಳಿಸಬೇಕೆಂಬ ತನ್ನ ಬೇಡಿಕೆಯನ್ನು ಬಿಜೆಪಿ ಒಪ್ಪದ ಹಿನ್ನೆಲೆಯಲ್ಲಿ ಜೆಎಂಎಂ ವರಿಷ್ಠ ಶಿಬು ಸೊರೆನ್, ರಾಜ್ಯ ಸರಕಾರಕ್ಕೆ ನೀಡಿದ್ದ ತನ್ನ ಬೆಂಬಲವನ್ನು ವಾಪಸ್ ಪಡೆದಿದ್ದಾರೆ. ಬಿಜೆಪಿ ಸರಕಾರಕ್ಕೆ ನೀಡಿದ ಬೆಂಬಲವನ್ನು ವಾಪಸ್ ಪಡೆಯುವ ನಿರ್ಧಾರವನ್ನು ಸೋಮವಾರ ಬೆಳಗ್ಗೆ ರಾಂಚಿಯಲ್ಲಿ ನಡೆದ ಜೆಎಂಎಂ ನಾಯಕರ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಅರ್ಜುನ್ ಮುಂಡಾ ಖುದ್ದಾಗಿ ಶಿಬುಸೊರೆನ್ ಹಾಗೂ ಅವರ ಪುತ್ರ ಹೇಮಂತ್ರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರಾದರೂ,ರಾಜ್ಯ ಸರಕಾರಕ್ಕೆ ತನ್ನ ಬೆಂಬಲವನ್ನು ವಾಪಸ್ ಪಡೆಯುವ ತನ್ನ ನಿಲುವಿನಿಂದ ಹಿಂದೆ ಸರಿಯಲು ಜೆಎಂಎಂ ನಿರಾಕರಿಸಿತೆಂದು ಮೂಲಗಳು ತಿಳಿಸಿವೆ.












Click it and Unblock the Notifications