ವಿವಾದಿತ ಶಾಸಕ ಅಕ್ಬರುದ್ದೀನ್ ಓವೈಸಿ ಬಂಧನ

ಮಂಗಳವಾರ (ಜ.8) ಗಂಟೆಗಟ್ಟಲೇ ಗಾಂಧಿ ಆಸ್ಪತ್ರೆಯಲ್ಲಿ ಶಾಸಕ ಓವೈಸಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ವೈದ್ಯಕೀಯ ವರದಿ ಪ್ರಕಾರ ಓವೈಸಿ ಆರೋಗ್ಯ ಸ್ಥಿತಿ ಸದೃಢವಾಗಿರುವುದರಿಂದ ನಂತರ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ವಾರಂಗಲ್ ಎಸ್ಪಿ ಹೇಳಿದ್ದಾರೆ. ಆದರೆ, ಓವೈಸಿಯನ್ನು ಯಾವ ಜೈಲಿಗೆ ಕರೆದೊಯ್ಯಲಾಗಿದೆ ಎಂಬುದರ ಬಗ್ಗೆ ಪೊಲೀಸರು ಸುಳಿವು ನೀಡಿಲ್ಲ.
ವಕೀಲ ರಸೂಲ್ ಟೀಕೆ: ಓವೈಸಿ ಪರ ವಕೀಲ ರಸೂಲ್ ಖಾನ್ ಅವರು ವೈದ್ಯಕೀಯ ವರದಿ ಬಗ್ಗೆ ಅಪಸ್ವರ ಹಾಡಿದ್ದಾರೆ. ಓವೈಸಿ ಅವರ ದೇಹದಲ್ಲಿ ಗುಂಡು(ಬುಲೆಟ್) ಇದೆ. ಅವರಿಗೆ ಹೆಚ್ಚು ದೂರ ನಡೆಯಲು ಆಗುವುದಿಲ್ಲ ಈ ಬಗ್ಗೆ ಲಂಡನ್ ವೈದ್ಯಾಧಿಕಾರಿಗಳ ಪ್ರಮಾಣ ಪತ್ರ ಸಲ್ಲಿಸಲಾಗಿದೆ. ಆದರೂ, ತರಾತುರಿಯಲ್ಲಿ ಪರೀಕ್ಷೆ ನಡೆಸಿ ಬಂಧಿಸಿ ಕರೆದೊಯ್ಯಲಾಗಿದೆ ಎಂದು ಆಕ್ಷೇಪಿಸಿದ್ದಾರೆ.
ಓವೈಸಿ ಬಂಧನ ಹಿನ್ನೆಲೆಯಲ್ಲಿ ಆದಿಲಾಬಾದ್, ನಿರ್ಮಲ್ ಸೇರಿದಂತೆ ಸೇರಿದಂತೆ ಹೈದರಾಬಾದಿನ ಹಲವು ಪ್ರದೇಶದಲ್ಲಿ ಬಿಗುವಿನ ವಾತಾವರಣವಿದ್ದು, ಹಲವೆಡೆ ನಿಷೇಧಾಜ್ಞೆ ಜಾರಿಯಲ್ಲಿದೆ.
ಪೊಲೀಸ್ ಬಂಧನವನ್ನು ತಪ್ಪಿಸಿಕೊಳ್ಳಲು ನೇರವಾಗಿ ಕೋರ್ಟಿಗೆ ಶರಣಾಗುವ ಮಾತನ್ನಾಡಿಸಿದ್ದ ಧರ್ಮಾಂಧ ಓವೈಸಿ, ಇದೀಗ ತನಗೆ ಬುಕಾರ್ ಇದೆ ಎಂದು ಪುಕಾರ್ ಎಬ್ಬಿಸಿದ್ದಾನೆ. ಮತ್ತು ಅದನ್ನೇ ತನ್ನ ವಕೀಲ ರಸೂಲ್ ಖಾನ್ ಮೂಲಕ ಕೋರ್ಟಿಗೆ ಹೇಳಿಸಿದ್ದರು.
ಹಿಂದೂಗಳ ಭಾವನೆಗೆ ಧಕ್ಕೆ ಬರುವಂತೆ ಭಾಷಣ ಮಾಡಿದ್ದ ಚಂದ್ರಯಾನಗುಟ್ಟ ಕ್ಷೇತ್ರದ ಶಾಸಕ ಅಕ್ಬರುದ್ದೀನ್ ವಿರುದ್ಧ ಉಸ್ಮಾನಿಯಾ ವಿವಿ ಪೊಲೀಸರು ಐಪಿಸಿ ಸೆಕ್ಷನ್ 153(A) ಅನ್ವಯ ಕೇಸು ದಾಖಲಿಸಿಕೊಂಡಿದ್ದರು.
ಉದ್ಯಮಿ ಎಸ್ ವೆಂಕಟೇಶ್ ಗೌಡ ಎಂಬುವರು ದಾಖಲಿಸಿದ್ದ ದೂರು ಅರ್ಜಿಯ ವಿಚಾರಣೆ ನಡೆಸಿದ ಹೈದರಾಬಾದಿನ ಸ್ಥಳೀಯ ಕೋರ್ಟ್ ಈ ಆದೇಶ ಹೊರಡಿಸಿತ್ತು. ಓವೈಸಿ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿ, ಜ.28ರೊಳಗೆ ವರದಿ ಸಲ್ಲಿಸುವಂತೆ ಉಸ್ಮಾನಿಯಾ ವಿವಿ ಪೊಲೀಸರಿಗೆ ಕೋರ್ಟ್ ನಿರ್ದೇಶನ ನೀಡಿದೆ.
ವಕೀಲ ಕೆ ಕರುಣಾಸಾಗರ್ ಅವರು ಓವೈಸಿ ವಿರುದ್ಧ ದಾಖಲಿಸಿರುವ ದೂರಿನ ವಿಚಾರಣೆ ಮತ್ತೊಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯಬೇಕಿದೆ.












Click it and Unblock the Notifications