56 ದಿನ ಸಿರ್ಸಿ ಸರ್ಕಲ್ ಫ್ಲೈ ಓವರ್ ಬಂದ್

ಸುಮಾರು 56 ದಿನಗಳ ಕಾಲ ಟೌನ್ ಹಾಲ್ ನಿಂದ ಸಿರ್ಸಿ ಸರ್ಕಲ್ ಫ್ಲೈ ಓವರ್ ಅರ್ಥಾತ್ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ ಬಂದ್ ಮಾಡಲಾಗುತ್ತದೆ ಹೀಗಾಗಿ ಪ್ರಯಾಣಿಕರಿಗೆ ಪರದಾಟ ತಪ್ಪಿದ್ದಲ್ಲ.
ಎರಡು ದಿನ ಮುಂಚಿತವಾಗೇ ಬೆಂಗಳೂರು ಟ್ರಾಫಿಕ್ ಪೊಲೀಸರು ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದರೂ ಸಾರ್ವಜನಿಕರು ಮಂಗಳವಾರ(ಜ.8) ಮಾಮೂಲಿಯಾಗಿ ಫ್ಲೈ ಓವರ್ ಬಳಿ ತೆರಳಿ ಬಂದ್ ಆಗಿರುವುದನ್ನು ನೋಡಿ ಬದಲಿ ಮಾರ್ಗ ಹುಡುಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ನಗರದ ಪಶ್ಚಿಮ ವಿಭಾಗದ ಬೆಂಗಳೂರು-ಮೈಸೂರು ರಸ್ತೆಯಲ್ಲಿ ನಿರ್ಮಿಸಿರುವ ಈ ಮೇಲ್ಸೇತುವೆ ದುರಸ್ತಿ ಕಾರ್ಯಕ್ಕೆ ಬಹುದಿನಗಳಿಂದ ಬೇಡಿಕೆ ಬಂದಿತ್ತು. ಕೊನೆಗೂ ಪಾಲಿಕೆ ದುರಸ್ತಿ ಕಾರ್ಯಕ್ಕೆ ಮನಸ್ಸು ಮಾಡಿದೆ.
ಎಲ್ ಅಂಡ್ ಟಿ ಕಂಪನಿ ನಿರ್ಮಿಸಿದ ಈ ಮೇಲ್ಸೇತುವೆ ದುರಸ್ತಿ ಕಾರ್ಯವನ್ನು ಸ್ಯಾನ್ ಫೀಲ್ಡ್ ಕಂಪನಿಗೆ ಬಿಬಿಎಂಪಿ ಗುತ್ತಿಗೆ ನೀಡಿದೆ.
ಮಾರ್ಗ ಬದಲಾವಣೆ: ಮೈಸೂರು ರಸ್ತೆ ಫ್ಲೈ ಓವರ್ ಮೇಲೆ ಮೈಸೂರು ಕಡೆಯಿಂದ ಬರುವ ವಾಹನಗಳಿಗೆ ಗೂಡ್ ಶೆಡ್ ರಸ್ತೆ ಕಡೆಗಿನ ಡೌನ್ ರಾಂಪ್ ಸಂಚಾರಕ್ಕೆ ಮುಕ್ತವಾಗಿರುತ್ತೆ.
ಮೈಸೂರು ರಸ್ತೆ ಮೇಲು ಸೇತುವೆ, ಟೌನ್ ಹಾಲ್ ಅಪ್ ramp- ಎಡ ತಿರುವುದ್ ರಾಯನ್ ವೃತ್ತ- ಬಲತಿರುವು ಚಾಮರಾಜಪೇಟೆ 1ನೇ ಮುಖ್ಯರಸ್ತೆ-ಬೆಂಗಳೂರು ಬಾಡಿ ಬಿಲ್ಡರ್ ಜಂಕ್ಷನ್-ಮೈಸೂರು ರಸ್ತೆ ಸಂಚಾರಕ್ಕೆ ಲಭ್ಯವಿರುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಹೇಳಿದ್ದಾರೆ.
ಸುಮಾರು 2.65 ಕಿ.ಮೀ ದೂರವಿರುವ ಈ ಮೇಲು ಸೇತುವೆಯನ್ನು ಸುಮಾರು 97 ಕೋಟಿ ರು ವೆಚ್ಚ 1999ರಲ್ಲಿ ನಿರ್ಮಿಸಲಾಗಿದೆ.
ನರಸಿಂಹರಾಜ ರಸ್ತೆ (ಪುರಭವನ) ಹಾಗೂ ಮೈಸೂರು ರಸ್ತೆಯ ಸಿರ್ಸಿ ಸರ್ಕಲ್ ಗೆ ಸಂಪರ್ಕ ಒದಗಿಸುವುದು ಮುಖ್ಯ ಉದ್ದೇಶವಾಗಿದೆ. 2008ರ ಜುಲೈನಲ್ಲಿ ನಾಲ್ಕು ಬಾರಿ, 2010ರ ನವೆಂಬರ್ ನಲ್ಲಿ ಮೇಲುಸೇತುವೆ ದುರಸ್ತಿಗಾಗಿ ಬಿಬಿಎಂಪಿ ಟೆಂಡರ್ ಕರೆದಿತ್ತು. ಆದರೆ, ಕೇವಲ ಒಂದು ಕಂಪನಿ ಮಾತ್ರ ಬಿಡ್ಡಿಂಗ್ ಸಲ್ಲಿಸಿದ್ದರಿಂದ ಟೆಂಡರ್ ರದ್ದಾಗಿತ್ತು.
ಈಗ ಸುಮಾರು 2.65 ಕೋಟಿ ರು ವೆಚ್ಚದಲ್ಲಿ ಶಿಥಿಲವಾಗಿರುವ 12ಕ್ಕೂ ಅಧಿಕ ಕೊಂಡಿಗಳನ್ನು ಸರಿಪಡಿಸಲು ಸ್ಯಾನ್ ಫೀಲ್ಡ್ ಇಂಡಿಯಾ ಲಿ. ಕಂಪನಿ ಮುಂದೆ ಬಂದಿದೆ. ಸುಮಾರು ಎರಡರಿಂದ ಮೂರು ತಿಂಗಳಿನಲ್ಲಿ ಕಾಮಗಾರಿ ಮುಗಿಯುವ ನಿರೀಕ್ಷೆಯಿದೆ.












Click it and Unblock the Notifications