ರೈಲ್ವೆ ಹಳಿ ಮೇಲೆ ಟೆಕ್ಕಿ, ಭಾವಿ ವೈದ್ಯೆ ಬದುಕು ಅಂತ್ಯ

ಕಿವಿಗೆ ಮೊಬೈಲ್ ಫೋನ್ ಸಿಕ್ಕಿಸಿಕೊಂಡು ರೈಲು ಹಳಿ ದಾಟುತ್ತಿದ್ದ ಯುವ ಟೆಕ್ಕಿ ರೈಲಿಗೆ ಸಿಕ್ಕಿ ಮೃತಪಟ್ಟಿದ್ದರೆ ಅದಕ್ಕೂ ಮುನ್ನ ವೈದ್ಯ ವಿದ್ಯಾರ್ಥಿನಿಯೊಬ್ಬಳನ್ನು ಮತ್ತೊಂದು ರೈಲು ಅದೇ ಜಾಗದಲ್ಲಿ ಕೆಡವಿ, ಸಾಯಿಸಿತ್ತು.
ಬುಧವಾರ ಬೆಳಗ್ಗೆ ನವದೆಹಲಿ ಮೂಲದ ವಿಪಿನ್ ಕುಮಾರ್ ಗೌತಮ್ (26) ಎಂಬ ಟೆಕ್ಕಿ ರೈಲು ಹಳಿ ದಾಟುತ್ತಿರುವಾಗ ಬೆಂಗಳೂರಿನಿಂದ ಚೆನ್ನೈ ಹೋಗುವ ಲಾಲ್ಬಾಗ್ ಎಕ್ಸ್ಪ್ರೆಸ್ ಢಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಮಂಗಳವಾರ ರಾತ್ರಿ 9 ಗಂಟೆಯಲ್ಲಿ ಮೇಘಾಲಯದ ವಿನಿ ಸಾಂಕಿ ಬಮೂನ್ (20) ಬಂಗಾರಪೇಟೆ ಎಕ್ಸ್ಪ್ರೆಸ್ಗೆ ಸಿಕ್ಕಿ ಸಾವಿಗೀಡಾಗಿದ್ದರು.
ಪದೇ ಪದೇ ಅವಘಡಗಳು ಸಂಭವಿಸುತ್ತಿದ್ದರೂ ರೈಲ್ವೆ ಇಲಾಖೆ ಅಧಿಕಾರಿಗಳು ಮಾತ್ರ ಯಾವುದೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯ ಸಂಘಟನೆಗಳು ಹಾಗೂ ಸಾರ್ವಜನಿಕರು ಬುಧವಾರ ರೈಲ್ವೆ ನಿಲ್ದಾಣದಲ್ಲಿ ಸುಮಾರು ಗಂಟೆಗಳ ಕಾಲ ರೈಲುಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ರೈಲ್ವೆ ಅಧಿಕಾರಿಗಳು, ಜೂನ್ ವೇಳೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಪಾದಚಾರಿ ಮೇಲ್ಸೇತುವೆ ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ ಬಳಿಕ ಸಾರ್ವಜನಿಕರು ಪ್ರತಿಭಟನೆಯನ್ನು ಹಿಂಪಡೆದರು.
ಗಮನಾರ್ಹವೆಂದರೆ ಈ ಹಿಂದೆ ನಿಲ್ದಾಣಕ್ಕೆ ಭೇಟಿ ನೀಡಿದ್ದ ಅಂದಿನ ರೈಲ್ವೆ ಸಚಿವ ಕೆಎಚ್ ಮುನಿಯಪ್ಪ ಅವರು ದುರವಸ್ಥೆಯನ್ನು ಕಂಡು, ತಕ್ಷಣ ಪಾದಚಾರಿ ಮಾರ್ಗ ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ಅದಾದ ನಂತರ ಈ ಹಳಿಗಳ ಮೇಲೆ ಅನೇಕ ಸಂಖ್ಯೆಯಲ್ಲಿ ರೈಲುಗಳು ಸಂಚರಿಸುತ್ತಲೇ ಇವೆ. ಹಾಗೇ, ಅನೇಕ ಮಂದಿಯ ಜೀವ ಈ ಹಳಿಗಳ ಮೇಲೆ ಅಂತ್ಯ ಕಂಡಿವೆ.












Click it and Unblock the Notifications