ಪ್ರಳಯಕ್ಕೆ 6 ಗಂಟೆ 37 ನಿಮಿಷ 30 ಸೆಕೆಂಡ್ ಬಾಕಿ
ಇಡೀ ಜಗತ್ತಿನ ತುಂಬ ಇದರದೇ ಚರ್ಚೆ. ಹಬ್ಬಲಾಗಿರುವ ಸುದ್ದಿಯನ್ನು ನಂಬುವವರು ಪ್ರಳಯ ಆಗೇ ಬಿಡುತ್ತೆ, ನಾವೆಲ್ಲ ಸತ್ತೇ ಹೋಗಿಬಿಡುತ್ತೇವೆ ಎಂದು ಕ್ಷಣಗಣನೆ ಶುರುಮಾಡಿದ್ದರೆ, ನಾಸಾದ ವಿಜ್ಞಾನಿಗಳ ತಂಡ, ಯಾವೋನ್ರೀ ಹೇಳಿದ್ದು, ಪ್ರಳಯ ಎಲ್ಲಾ ಬಂಡಲ್, ಏನೂ ಆಗಲ್ಲ ಎಂದು ಅಭಯಹಸ್ತ ನೀಡಿದೆ. ಕೆಲವರಿಗೆ ಪ್ರಳಯ ಎಂಬ ವಸ್ತುವೇ ತಮಾಷೆಯಾಗಿದೆ. ಕೆಲವರು ಮಾಯನ್ ಕ್ಯಾಲೆಂಡರ್ ಮತ್ತು ಅದರ ಭವಿಷ್ಯವನ್ನು ಅಪಹಾಸ್ಯ ಮಾಡಿ ನಗಾಡುತ್ತಿದ್ದಾರೆ.
ಜಗತ್ತಿನಲ್ಲಿರುವ ಇತರರು ಏನೇ ಹೇಳಲಿ, ಈಗ ಮೆಕ್ಸಿಕೋದಿಂದ ವಲಸೆ ಬಂದು ಅಮೆರಿಕದ ಮಧ್ಯ ಭಾಗದಲ್ಲಿ ಬದುಕಿರುವ ಮಾಯನ್ ಜನಾಂಗದವರು ಹೇಳುವ ವಿಷಯವೇ ನಾವೆಲ್ಲ ಮಾತನಾಡಿಕೊಳ್ಳುತ್ತಿರುವ ವಿಷಯಗಳಿಗಿಂತ ಭಿನ್ನವಾಗಿದೆ. ಅವರು ಹೇಳುವುದೇನೆಂದರೆ, ಒಂದು ವೇಳೆ ಜಗತ್ತು ಕೊನೆಗೊಳ್ಳುವುದಾದರೆ ಕೊನೆಗೊಳ್ಳಲಿ ಬಿಡಿ. ಅದಕ್ಯಾಕೆ ಅಷ್ಟೊಂದು ಗಲಿಬಿಲಿಗೊಳ್ಳಬೇಕು ಮತ್ತು ಮಾಯನ್ ಕ್ಯಾಲೆಂಡರನ್ನೇ ಏಕೆ ತಮಾಷೆ ಮಾಡಬೇಕು?
ಮಾಯನ್ನರಿಗೆ ಇದು ಪರಿವರ್ತನೆಯ ಸಮಯ. ಹಿಂದೂಗಳ ಪ್ರಕಾರ, ಯುಗಾದಿ ಹಬ್ಬಕ್ಕೆ ಒಂದು ಯುಗ ಮುಗಿದು ಇನ್ನೊಂದು ಆರಂಭವಾಗುವುದಿಲ್ಲವೆ, ಹಾಗೆ. ಡಿ.21ರಂದು ಒಂದು ಯುಗ ಮುಗಿದು ಹೊಸ ಯುಗ ಆರಂಭವಾಗುತ್ತದೆ. ಅದು ಮಾನವೀಯತೆಯ ಯುಗ. ಮಾನವ ಜನಾಂಗವನ್ನು ಒಗ್ಗೂಡಿಸಬೇಕಾದರೆ ಸಂಪೂರ್ಣ ಪರಿವರ್ತನೆ ಆಗಲೇಬೇಕು ಎಂದು ಹಿರಿಯ ಮಾಯನ್ ಅಲೆಜಾಂಡ್ರೊ ಸಿರಿಲೊ ಪೆರೆಜ್ ಒಕ್ಸ್ಲಾಜ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನೊಬ್ಬ ಹಿರಿಯ ಮಾಯನ್ ನಾಗರಿಕ ಡಾನ್ ಕಾರ್ಲೋಸ್ ಬರಿಯೋಸ್ ಪ್ರಕಾರ, ಮಾಯನ್ ಕ್ಯಾಲೆಂಡರನ್ನು ಅನೇಕರು ತಪ್ಪಾಗಿ ಅರ್ಥೈಸಿದ್ದಾರೆ. ಅವರು ಅದನ್ನು ಸರಿಯಾಗಿ ಬಿಂಬಿಸುತ್ತಿಲ್ಲ. ಡಿಸೆಂಬರ್ 21ರಂದು ಎಲ್ಲವೂ ಬದಲಾಗುತ್ತದೆ. ಒಂದು ಸಾವು ಸಂಭವಿಸಿ ಮತ್ತೊಂದು ಹುಟ್ಟು ಪಡೆದುಕೊಂಡಿರುತ್ತದೆ. ಮಾನವೀಯತೆ ಖಂಡಿತ ಮುಂದುವರಿಯುತ್ತದೆ. ಆದರೆ, ವಿಭಿನ್ನ ರೂಪದಲ್ಲಿ ಮುಂದುವರಿಯುತ್ತದೆ. ಭೌತಿಕ ವಸ್ತುಗಳು ಬದಲಾಗುತ್ತವೆ. ಅಂದಿನಿಂದ ಮಾನವೀಯತೆಯ ಹೊಸ ಭಾಷ್ಯವನ್ನೇ ಬರೆಯಲಾಗುತ್ತದೆ.
ಮಾಯನ್ ಕ್ಯಾಲೆಂಡರ್ ಬಗ್ಗೆ ಅಧಿಕಾರಯುತವಾಗಿ ಮಾತನಾಡುವ ಮೊನಾಶ್ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿರುವ ಜೋಸೆಫ್ ಗಲ್ಫರ್ ಅವರು, ಮಾಯನ್ ಕ್ಯಾಲೆಂಡರ್ ಏನು ಹೇಳುತ್ತೆ ಅದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ. ಅವರು ಏನು ಹೇಳುತ್ತಾರೆಂದರೆ, ಪ್ರಳಯ ಆಗುತ್ತೆ ಎಂದು ನಂಬಿರುವವರೆಲ್ಲ ಬೀಚಲ್ಲಿ ನಿಂತಿರುತ್ತಾರೆಂದು ಕಲ್ಪಿಸೋಣ. ಆ ಕ್ಷಣಕ್ಕಾಗಿ ಕಾಯುತ್ತಾರೆ. ಪ್ರಳಯ ಆಯ್ತಾ ಸರಿ, ಆಗಲಿಲ್ಲವೆಂದರೆ ಮರಳಿ ಮನೆಗೆ ಹೋಗಿ ತಾವೇ ತಮ್ಮನ್ನು ಬದಲಾಯಿಸಿಕೊಳ್ಳುತ್ತಾರೆ.
ಮುಹೂರ್ತ ನಿಗದಿ : ಮಾಯನ್ ಕ್ಯಾಲೆಂಡರ್ ಪ್ರಕಾರ, ಭಾರತೀಯ ಕಾಲಮಾನ ಡಿಸೆಂಬರ್ 20ರ ಸಂಜೆ 5.17ರ ಹೊತ್ತಿಗೆ ಪ್ರಳಯ ಸಂಭವಿಸಲು 6 ಗಂಟೆ 42 ನಿಮಿಷ ಬಾಕಿಯಿದೆಯಂತೆ. ಹಾಗಿದ್ರೆ, ಪ್ರಳಯ ಎಷ್ಟು ಹೊತ್ತಿಗೆ ಸಂಭವಿಸುತ್ತದೆ ಎಂದು ನೀವು ಲೆಕ್ಕ ಹಾಕಿಕೊಳ್ಳಿ. ಪ್ರಳಯ ಸಂಭವಿಸಿತಾ, ಮಣ್ಣಲ್ಲಿ ನೀವು ಮಣ್ಣಾಗಿ. ಸಂಭವಿಸಲಿಲ್ಲವಾ, ಹೊಸ ಯುಗದ ಜೊತೆ ಹೊಸ ಮಾನವೀಯತೆ ನಿಮ್ಮಲ್ಲಿ ಚಿಗುರೊಡೆಯಲಿ.