ನಾನು ರಾಜೀನಾಮೆ ಕೊಡುವುದಿಲ್ಲ: ಈಶ್ವರಪ್ಪ

ಬುಧವಾರ (ಡಿ.19) ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ಅವರು, ಹಾದಿ ಬೀದಿಯಲ್ಲಿ ಹೋಗುವವರೆಲ್ಲ ರಾಜೀನಾಮೆ ಕೋಡಿ ಎಂದು ಕೇಳಿದರೆ ರಾಜೀನಾಮೆ ನೀಡಲು ಸಾಧ್ಯವಿಲ್ಲ ಎಂದರು.
ನನಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ಅಪಾರ ನಂಬಿಕೆ, ವಿಶ್ವಾಸವಿದೆ. ಲೋಕಾಯುಕ್ತ ನ್ಯಾಯಾಲಯದ ತನಿಖೆಗೆ ಎಲ್ಲಾ ರೀತಿಯ ಸಹಕಾರ ಕೊಡುತ್ತೇನೆ. ತನಿಖೆ ಮುಗಿದು ಅಂತಿಮ ವರದಿ ಬಂದ ಮೇಲೆ ಸತ್ಯ ಏನು ಎಂಬುದು ಎಲ್ಲರಿಗೂ ತಿಳಿಯುತ್ತದೆ. ಸುಮ್ಮನೆ ರಾಜೀನಾಮೆ ಕೊಡುವುದರಿಂದ ಪ್ರಯೋಜನವಿಲ್ಲ ಎಂದು ಈಶ್ವರಪ್ಪ ಹೇಳಿದರು.
ಉದಾಹರಣೆಗೆ ಹಾದಿಬೀದಿಯಲ್ಲಿ ಹೋಗುವವರು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಕ್ರಮವಾಗಿ ಆಸ್ತಿ ಗಳಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ಅರ್ಜಿ ಹಾಕಿದರೆ, ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರಾ? ಎಂದು ಪ್ರಶ್ನಿಸಿದರು.
ಬಿಜೆಪಿಯಲ್ಲಿ ಎಲ್ಲಾ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡಲಾಗುತ್ತದೆ, ಯಡಿಯೂರಪ್ಪ ಜೊತೆ ಗುರುತಿಸಿಕೊಂಡಿರುವ 14 ಜನ ಶಾಸಕರು ಗೊಂದಲದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಅತಂತ್ರಗೊಳಿಸಲು ನಮಗೆ ಇಚ್ಛೆ ಇಲ್ಲ.
ಹಾಲ್ವರು ಬಲವಂತವಾಗಿ ಸಮಾವೇಶಕ್ಕೆ ಹೋಗಿದ್ದಾಗಿ ಮನವಿ ಮಾಡಿಕೊಂಡಿದ್ದಾರೆ. ಕ್ರಮ ಜರುಗಿಸಬೇಡಿ ಎಂದು ಕೇಳಿಕೊಂಡಿದ್ದಾರೆ. ಹೈ ಕಮಾಂಡ್ ಕೂಡಾ ಆತುರದ ನಿರ್ಧಾರ ಕೈಗೊಳ್ಳಬೇಡಿ ಎಂದು ಸೂಚನೆ ನೀಡಿದೆ ಎಂದರು.
ಹೈದರಾಬಾದ್ ಕರ್ನಾಟಕ ಭಾಗಕ್ಕೆ ಸಂವಿಧಾನದ 371 ಜೆ ವಿಧಿ ತಿದ್ದುಪಡಿ ಒಲಿದಿರುವುದು ಸಂತೋಷದ ಸಂಗತಿ. ಅದರೆ, ಇದರಲ್ಲಿ ಕಾಂಗ್ರೆಸ್ಸಿಗರು ರಾಜಕೀಯ ಮಾಡುವುದನ್ನು ಬಿಡಬೇಕು. ನಾವೇ ಆ ಭಾಗದ ಉದ್ಧಾರಕ್ಕೆ ಕಾರಣ ಎಂದು ಹೇಳಿಕೆ ಕೊಡುವುದನ್ನು ನಿಲ್ಲಿಸಲಿ. 40 ವರ್ಷಗಳಿಂದ ಆ ಭಾಗದ ಕಾಂಗ್ರೆಸ್ ಮುಖಂಡರು ಏನು ಮಾಡಿದ್ದಾರೆ ಎಂಬುದು ಜನಕ್ಕೆ ಗೊತ್ತಿದೆ ಎಂದು ಈಶ್ವರಪ್ಪ ಹೇಳಿದರು.
ಈಶ್ವರಪ್ಪ ರಾಜೀನಾಮೆ ದ್ವಂದ್ವ: ಒಂದು ಗುಂಪು ತಕ್ಷಣಕ್ಕೆ ಈಶ್ವರಪ್ಪ ಉಪ ಮುಖ್ಯಮಂತ್ರಿ ಸ್ಥಾನ ತೊರೆಯಲಿ ಎಂದು ಆಗ್ರಹಿಸುತ್ತಿದ್ದರೆ ಮತ್ತೊಂದು ಗುಂಪು ಪಕ್ಷ ಮತ್ತು ಸಂಘಟನೆಯ ಪ್ರತಿಷ್ಠೆ/ವರ್ಚಸ್ಸು ಮಣ್ಣುಪಾಲಾಗುತ್ತಿದೆ. ಅತ್ಲಾಗೆ ಈಶ್ವರಪ್ಪ ರಾಜ್ಯಾಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಲಿ ಎಂಬ ಬೇಡಿಕೆಯೂ ಕೇಳಿಬಂದಿದೆ.
ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಮುಂದಿನ ಸಾಧಕ-ಬಾಧಕಗಳನ್ನು ವಿಚಾರ ಮಾಡಿ, ಪಕ್ಷದ ವರಿಷ್ಠರು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡುವುದು ಖಚಿತ. ಅಲ್ಲಿಯವರೆಗೂ ಈಶ್ವರಪ್ಪನೇ ಮುಂದುವರಿಯಲಿ ಎಂಬ ಮಾತುಗಳೂ ಕೇಳಿಬರುತ್ತಿವೆ.












Click it and Unblock the Notifications