ಯಡಿಯೂರಪ್ಪ ಜೊಳ್ಳೋ ಜೊಳ್ಳು: ಡಿಸಿಎಂ ಅಶೋಕ್

'ಬಿಜೆಪಿ ವ್ಯಕ್ತಿ ಆಧಾರಿತ ಪಕ್ಷವಲ್ಲ. ಜನಸಂಘದಿಂದ ಹುಟ್ಟಿದ ಪಕ್ಷವಿದು. ಆದ್ದರಿಂದ ಪಕ್ಷದಲ್ಲಿ ವ್ಯಕ್ತಿಗೆ ಪ್ರಾಧಾನ್ಯತೆ ಇಲ್ಲ. ಯಾವಾಗಲೂ ಜನ ಬಿಜೆಪಿಯ ಸಿದ್ಧಾಂತ, ತತ್ವ, ದೇಶದ ಹಿತ ಕಾಪಾಡುವ ಪ್ರಣಾಳಿಕೆಗಳನ್ನು ಆಧರಿಸಿ ಮತ ನೀಡುತ್ತಾರೆ' ಎಂದಿರುವ ಆಶೋಕ್ ಪಕ್ಷ ಬಿಟ್ಟು ಹೋದ ಹಿರಿಯ ನಾಯಕ ಯಡಿಯೂರಪ್ಪ ಅವರ ನಡೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾಷಣದಲ್ಲಿ ಎಲ್ಲೂ ಬಿಎಸ್ವೈ ಹೆಸರನ್ನು ಅವರು ಪ್ರಸ್ತಾಪಿಸಲಿಲ್ಲ. ಆರಂಭದಿಂದ ಕೊನೆಯ ತನಕವೂ ಲೇವಡಿ ಮಾಡುತ್ತಲೇ ಇದ್ದರು.
'10 ವರ್ಷಗಳ ಹಿಂದೆ ನನಗೆ ಅಡ್ರೆಸ್ಸೇ ಇರಲಿಲ್ಲ. ಈಗ ನಾನು ರಾಜ್ಯದ ಯಾವುದೇ ಮೂಲೆ, ಮೂಲೆಗೆ ಹೋದರೂ ಆರ್. ಅಶೋಕ್ ಎಂದು ಜನ ಕರೆಯುತ್ತಾರೆ. ನನಗೆ ಅಡ್ರೆಸ್ ಕೊಟ್ಟಿದ್ದು ಬಿಜೆಪಿ. ಬಿಜೆಪಿಯಿಂದಲೇ ನಾನು ಬೆಳೆದಿರುವೆ. ಕಾರ್ಯಕರ್ತರೇ ನನಗೆ ಮುಖ್ಯ. ನನಗೆ ಅನ್ಯಾಯವಾಗಿದೆ ಎಂದು ಹೇಳಿಕೊಂಡು ಹೋದರೆ ಯಾರೂ ನಂಬಲಾರರು. ವ್ಯಕ್ತಿಗತ ಅನ್ಯಾಯವನ್ನು ಯಾರೂ ಕೇಳುವುದಿಲ್ಲ' ಎಂದು ಯಡಿಯೂರಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು 'ಪಕ್ಷದಲ್ಲಿ ದಿನನಿತ್ಯ ಉದ್ಭವವಾಗುತ್ತಿದ್ದ ಸಮಸ್ಯೆಗಳೆಲ್ಲ ಈಗ ಪರಿಹಾರಗೊಂಡಿವೆ. ಜೊಳ್ಳುಗಳೆಲ್ಲ ಹೋಗಿವೆ. ಬಿಜೆಪಿಯಲ್ಲಿ ಈಗ ಗಟ್ಟಿ ಕಾಳುಗಳು ಮಾತ್ರ ಉಳಿದಿವೆ. ಹೊಸ ಪಕ್ಷಕ್ಕೆ ರಾಜ್ಯದಲ್ಲಿ ಯಾವುದೇ ಭವಿಷ್ಯವಿಲ್ಲ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಮಾಡಿ ಹೊಸ ಪಕ್ಷ ಹುಟ್ಟು ಹಾಕಿದರು. ಅವರ ಪಕ್ಷವೂ ಉಳಿಯಲಿಲ್ಲ' ಎಂದು ವ್ಯಾಖ್ಯಾನಿಸಿದರು.
ಕೆಂಗಲ್ ಹನುಮಂತಯ್ಯ, ದೇವರಾಜ್ ಅರಸು, ಬಂಗಾರಪ್ಪ ಅವರಂತ ಘಟಾನುಘಟಿಗಳೆಲ್ಲ ಹೊಸ ಪಕ್ಷ ಕಟ್ಟಿ ಏನಾದರು ಎಂಬುದನ್ನು ಅವಲೋಕಿಸಿದರೆ ಭವಿಷ್ಯ ಎದುರಿಗೆ ಬಂದು ನಿಲ್ಲುತ್ತದೆ ಎಂದರು.
ಬಿಜೆಪಿಯೊಂದೆ ಕಾರ್ಯಕರ್ತರ ಪಕ್ಷವಾಗಿದೆ. ಕಾಂಗ್ರೆಸ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಪಕ್ಷವಾಗಿದೆ. ಅದೇ ರೀತಿ ಜೆಡಿಎಸ್ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಅವರ ಪಕ್ಷವಾಗಿದೆ ಎಂದು ಟೀಕಿಸಿದರು.












Click it and Unblock the Notifications