ಜನರೇ ನನಗೆ ಹೈಕಮಾಂಡ್ : ಬಿಎಸ್ ಯಡಿಯೂರಪ್ಪ

ಬಿಜೆಪಿ ಕಪಿಮುಷ್ಟಿಯಿಂದ ಹೊರ ಬಂದಿದ್ದೇನೆ. ಈಗ ನನಗೆ ಜನತೆಯೇ ಹೈಕಮಾಂಡ್ ಅವರಿಗೆ ಮಾತ್ರ ನಾನು ಉತ್ತರಿಸಬೇಕಿದೆ. ಜನಹಿತಕ್ಕಾಗಿ ದುಡಿಯುವುದೇ ಕೆಜೆಪಿ ಸ್ಥಾಪನೆ ಉದ್ದೇಶ ಎಂದು ಯಡಿಯೂರಪ್ಪ ಹೇಳಿದರು. ಯಡಿಯೂರಪ್ಪ ಅವರ ಜೊತೆ ಸಚಿವ ಬಿಜೆ ಪುಟ್ಟಸ್ವಾಮಿ ಅವರು ಉಪಸ್ಥಿತರಿದ್ದರು.
ನನ್ನನ್ನು ಕೇವಲ ಒಂದು ಜಾತಿಗೆ ಸೀಮಿತವಾದ ನಾಯಕ ಎಂದು ಕೆಲವರು ಅಪ ಪ್ರಚಾರ ನಡೆಸುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಮ್ ಬಾಂಧವರ ಸಮಾವೇಶ ಇದಕ್ಕೆ ತಕ್ಕ ಉತ್ತರ ನೀಡಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಅನಂತ್ ವಿರುದ್ಧ ಕಿಡಿ: ಹಾವೇರಿಯಲ್ಲಿ ಡಿ.9ರಂದು ನಡೆಯಲಿರುವ ಸಮಾವೇಶಕ್ಕೆ ಸುಮಾರು 70 ಜನ ಶಾಸಕರು ಬರಲಿದ್ದಾರೆ. ಪಕ್ಷ ತೊರೆದಿರುವುದರಿಂದ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಹೇಳಿದವರಿಗೆ ಪಶ್ಚಾತ್ತಾಪವಾಗುವ ಕಾಲ ದೂರವಿಲ್ಲ ಎಂದು ಬಿಎಸ್ ಯಡಿಯೂರಪ್ಪ ಹೇಳಿದರು.
ಬಿಜೆಪಿ ತೊರೆಯುತ್ತಿರುವ ಯಡಿಯೂರಪ್ಪ ಪಶ್ಚಾತ್ತಾಪ ಪಡುವ ದಿನ ದೂರವಿಲ್ಲ' ಎಂದಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಅವರು ಹೇಳಿದ್ದರು.
ಕರ್ನಾಟಕ ಜನತಾ ಪಕ್ಷದ ಶಕ್ತಿ ಏನು ಎಂಬುದನ್ನು ಇನ್ನು ಒಂದು ತಿಂಗಳಿನಲ್ಲಿ ಎಲ್ಲರಿಗೂ ಗೊತ್ತಾಗಲಿದೆ. ವ್ಯಕ್ತಿಗಿಂತ ಪಕ್ಷ ಮುಖ್ಯ. ಕಾರ್ಯಕರ್ತರಿಂದ ಪಕ್ಷ ಬೆಳೆದಿದೆ ಎಂಬುದು ಬಿಜೆಪಿಗೆ ತಡವಾಗಿ ಅರಿವಾಗಿದೆ. ಶೆಟ್ಟರ್ ಬಗ್ಗೆ ನಾನೇನು ಹೇಳುವುದಿಲ್ಲ ಎಂದು ಯಡಿಯೂರಪ್ಪ ಹೇಳಿದರು.
ಕೆಜೆಪಿಯೊಂದಿಗೆ ಗುರುತಿಸಿಕೊಳ್ಳುತ್ತಿರುವ ಯಡಿಯೂರಪ್ಪ ಬೆಂಬಲಿಗ ಸಚಿವರು, ಶಾಸಕರನ್ನು ಪಕ್ಷದಿಂದ ವಜಾಗೊಳಿಸುವಂತೆ ಶಾಸಕ ಬೇಳೂರು ಗೋಪಾಲಕೃಷ್ಣ ಆದೇಶ ನೀಡಿದ್ದಾರೆ.
ಅವರ ಆಣತಿಯಂತೆ ಬಿಜೆಪಿ ನಾಯಕರು ತನ್ನ ಬೆಂಬಲಿಗ ಶಾಸಕರು, ಸಚಿವರ ವಿರುದ್ಧ ಕ್ರಮ ಕೈಗೊಂಡರೆ ಒಳ್ಳೆಯದಾಗುತ್ತದೆ ಎಂದು ಯಡಿಯೂರಪ್ಪ ವ್ಯಂಗ್ಯವಾಡಿದರು.
ಬಿಜೆಪಿ ನಾಯಕರು ಇನ್ನಾದರೂ ಬೇಳೂರು ಗೋಪಾಲಕೃಷ್ಣರ ಮಾತನ್ನು ಕೇಳಿ ತನ್ನ ಬೆಂಬಲಿಗರ ವಿರುದ್ಧ ಕ್ರಮ ಕೈಗೊಂಡರೆ, ಚುನಾವಣೆ ಬೇಗ ಬಂದು, ನಮಗೂ ಅನುಕೂಲವಾಗಲಿದೆ ಎಂದು ಯಡಿಯೂರಪ್ಪ ಮಾರ್ಮಿಕವಾಗಿ ನುಡಿದರು.
ಹಾವೇರಿಯಲ್ಲಿ ನಡೆಯಲಿರುವ ಕೆಜೆಪಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳುವ ಕುರಿತು ತನ್ನ ಬೆಂಬಲಿಗ ಸಚಿವರು, ಶಾಸಕರ ಮೇಲೆ ಯಾವುದೆ ಒತ್ತಡ ಹಾಕಿಲ್ಲ. ಸ್ವಯಂಪ್ರೇರಣೆಯಿಂದ 70 ಕ್ಕೂ ಅಧಿಕ ಶಾಸಕರು ಬರುವ ನಿರೀಕ್ಷೆಯಿದೆ. 3000ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಕೆಜೆಪಿ ಹಾದಿ ತುಳಿಯಲಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.












Click it and Unblock the Notifications