ನರೇಂದ್ರ ಮೋದಿಗೆ ಪಟ್ಟ, ಅಸ್ತು ಎಂದ ಅಡ್ವಾಣಿ

ಆದರೆ, ಬಿಜೆಪಿಯ ಕಣ್ಣು ಲೋಕಸಭೆ ಚುನಾವಣೆ 2014ರ ಮೇಲಿದೆಯೋ ಅಥವಾ ಗುಜರಾತ್ ವಿಧಾನಸಭೆ ಚುನಾವಣೆ ಮಾತ್ರವೋ ಗೊತ್ತಿಲ್ಲ.
ಗುಜರಾತ್ ವಿಧಾನಸಭೆ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಬಿಜೆಪಿ ನಾಯಕ ಅಡ್ವಾಣಿ, "ಇಡೀ ಭಾರತದಲ್ಲಿ ಗುಜರಾತ್ ಮಾದರಿ ಆಡಳಿತ ಕಾಣಬೇಕಿದೆ' ಎಂದಿದ್ದಾರೆ.
ಗುಜರಾತಿನ ಅಭಿವೃದ್ಧಿ ಪಥ ಎಲ್ಲರಿಗೂ ಮಾದರಿಯಾಗಲಿ. ಇತರೆ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮೋದಿ ಅವರು 'ರೋಲ್ ಮಾಡೆಲ್'. ಕಡುಬಡವರಿಗೂ ಕನಿಷ್ಠ ಸೌಲಭ್ಯ ಒದಗಿಸುವತ್ತ ಸರ್ಕಾರ ಹೆಜ್ಜೆ ಹಾಕಿದೆ. ತಂತ್ರಜ್ಞಾನ ಬಳಕೆ ವಿಷಯದಲ್ಲಿ ಮೋದಿ ಅವರನ್ನು ಮೀರಿಸುವವರು ಇಲ್ಲ ಎಂದು ಅಡ್ವಾಣಿ ಅವರು ಹಾಡಿಹೊಗಳಿದ್ದಾರೆ.
ಬಿಜೆಪಿ ನಾಯಕ ಗೋಪಿನಾಥ್ ಮುಂಡೆ ಮಾತನಾಡಿ,' ಗುಜರಾತ್ ಚುನಾವಣೆ ರಾಷ್ಟ್ರ ರಾಜಕಾರಣಕ್ಕೆ ದಿಕ್ಸೂಚಿಯಾಗಲಿದೆ. ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆ ಅಲಂಕರಿಸಲು ಅರ್ಹ ವ್ಯಕ್ತಿ ಎಂದು ಸುಷ್ಮಾ ಸ್ವರಾಜ್ ಹೇಳಿರುವುದರಲ್ಲಿ ಅತಿಶಯೋಕ್ತಿಯಿಲ್ಲ. ಇದು ಜನರ ಬೇಡಿಕೆ ಎಂದಿದ್ದಾರೆ.
ಗುಜರಾತ್ ನಲ್ಲಿ ನರೇಂದ್ರ ಮೋದಿ ಪಕ್ಷವನ್ನು ಪ್ರಭಲವಾಗಿ ಬೆಳೆಸಿದ್ದಾರೆ. ರಾಷ್ಟ್ರ ಮಟ್ಟದಲ್ಲೂ ಮೋದಿ ಒಬ್ಬ ಪ್ರಭಾವಿ ನಾಯಕ. ಪ್ರಧಾನಿಯಾಗುವ ಎಲ್ಲಾ ಅರ್ಹತೆಯನ್ನು ಮೋದಿ ಹೊಂದಿದ್ದಾರೆಂದು ಲೋಕಸಭೆಯಲ್ಲಿನ ವಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಮೊದಲ ಬಾರಿಗೆ ಹೇಳಿದ್ದರು.
ವೋಟ್ ಬ್ಯಾಂಕ್ ರಾಜಕೀಯ ಹೆಚ್ಚು ಕಾಲ ನಡೆಯುವುದಿಲ್ಲ. ಅಭಿವೃದ್ಧಿಯೊಂದೇ ನಮ್ಮನ್ನು ಉಳಿಸಲು ಸಾಧ್ಯ. ಇದನ್ನು ಗುಜರಾತ್ ಸಾಬೀತು ಮಾಡಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದಾಗ ಇಡೀ ವಿಶ್ವಕ್ಕೆ ಗುಜರಾತ್ ಜನರು ಹೊಸ ಸಂದೇಶ ನೀಡಲಿದ್ದಾರೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
'ನನಗೆ ಪಕ್ಷ ಹಾಗೂ ದೇಶ ಎಲ್ಲವನ್ನು ಕೊಟ್ಟಿದೆ. ವ್ಯಕ್ತಿಗಿಂತ ಪಕ್ಷ ದೊಡ್ಡದು. ನನಗೆ ಈವರೆವಿಗೂ ಸಿಕ್ಕಿರುವ ಪ್ರೀತಿ ವಿಶ್ವಾಸಗಳು ಪ್ರಧಾನಿ ಹುದ್ದೆಗಿಂತ ದೊಡ್ಡದು. ನಾನು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಲ್ಲ. ಪ್ರಧಾನಿ ಹುದ್ದೆ ರೇಸ್ ನಲ್ಲಿಲ್ಲ' ಎಂದು ಅಡ್ವಾಣಿ ಅವರು ನ.8 ರಂದು ತಮ್ಮ 85ನೇ ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಭಾರತೀಯ ಜನತಾ ಪಕ್ಷ ಮುಂಬರುವ ಲೋಕಸಭಾ ಚುನಾವಣೆಗೆ ತನ್ನ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲ. ಈ ರೇಸ್ ನಲ್ಲಿ ಎಲ್ಲರಿಗಿಂತ ಮುಂದಿರುವ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್) ಬೆಂಬಲ ಸಿಕ್ಕಿದೆ ಎಂದು ಮೂಲಗಳು ಹೇಳಿದೆ.












Click it and Unblock the Notifications