ಗಾಲಿ ರೆಡ್ಡಿಗೆ ಕೊಪ್ಪಳದಿಂದ ಚುನಾವಣೆ ಖೆಡ್ಡಾ ರೆಡಿ

ಸದ್ಯ ಹೈದರಾಬಾದ್ ಜೈಲಿನಲ್ಲಿರುವ ಕರ್ನಾಟಕದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಶ್ರೀರಾಮುಲು ಸ್ಥಾಪಿಸಿರುವ ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಬಳ್ಳಾರಿ ಮೂಲಗಳು ಪಿಸುಗುಟ್ಟಲಾರಂಭಿಸಿವೆ.
ಕೊಪ್ಪಳದಿಂದ ಚುನಾವಣೆ ಖೆಡ್ಡಾಕ್ಕೆ: ಈ ಹಿನ್ನೆಲೆಯಲ್ಲಿ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಬಿ. ಶ್ರೀರಾಮುಲು ಅವರು ಬುಧವಾರ ಸಂಜೆ ಹೈದರಾಬಾದಿಗೆ ತೆರಳಿ, ಚಂಚಲಗೂಡ ಜೈಲಿನಲ್ಲಿರುವ ಜನಾರ್ದನ ರೆಡ್ಡಿ ಅವರನ್ನು ಭೇಟಿಯಾಗಿ ರಣತಂತ್ರ ರೂಪಿಸುವ ಸಂಬಂಧ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಒಂದು ಮೂಲದ ಪ್ರಕಾರ ಜನಾರ್ದನ ರೆಡ್ಡಿ ಕೊಪ್ಪಳ ಜಿಲ್ಲೆ ಕುಷ್ಟಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿದ್ದು, ಸದ್ಯಕ್ಕೆ ಅವರಿಗೆಜಾಮೀನು ಸಿಗುವುದು ದೂರದ ಮಾತಾಗಿದೆ. ಹಾಗಾಗಿ ಜೈಲಿನಿಂದಲೇ ಕಣಕ್ಕಿಳಿಯಲು ರೆಡ್ಡಿ ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಜನಾರ್ದನ ರೆಡ್ಡಿ ಅವರ ಪರಮಾಪ್ತರಾದ ರಾಜಶೇಖರ ಗೌಡ, ಮೃತ್ಯುಂಜಯ ಜಿಣಗಿ ಮತ್ತು ಸುರೇಶ್ ಬಾಬು ಅವರು ತೀವ್ರ ಸಮಾಲೋಚನೆಯಲ್ಲಿ ತೊಡಗಿದ್ದಾರೆ.
ಒಳ್ಳೆಯ human being ಜನಾರ್ದನ ರೆಡ್ಡಿ ಸ್ಪರ್ಧೆ ಖಚಿತ:
KMF ಅಧ್ಯಕ್ಷ ಸೋಮಶೇಖರ್ ರೆಡ್ಡಿ ಅವರು ತಮ್ಮ ಸೋದರ ಜನಾರ್ದನ ರೆಡ್ಡಿ ಅವರು ಚುನಾವಣೆಗೆ ಸ್ಪರ್ಧಿಸುವುದನ್ನು ಖಚಿತಪಡಿಸಿದ್ದು, ಈ ಸಂಬಂಧ ಸಿಬಿಐ ಕೋರ್ಟಿಗೆ ಅಫಿಡವಿಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
'ಜನಾರ್ದನ ರೆಡ್ಡಿ ಒಬ್ಬ ಒಳ್ಳೆಯ human being ಎಂದು ಜನರಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಜೈಲಿನಿಂದಲೇ ಸ್ಪರ್ಧಿಸಿದರೂ ಅವರ ಗೆಲುವು ಖಚಿತ' ಎಂದು ಟಿವಿ9 ಜತೆ ಮಾತನಾಡುತ್ತಾ ಸೋಮಶೇಖರ್ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು, ರಾಮುಲು ಬಳ್ಳಾರಿ ಗ್ರಾಮಾಂತರ ಕ್ಷೇತ್ರವನ್ನು ಭದ್ರವಾಗಿಸಿಕೊಂಡಿದ್ದಾರೆ. ಅದರ ಜತೆಗೆ ಗದಗ ಜಿಲ್ಲೆಯಲ್ಲೂ ಜನಪ್ರಿಯವಾಗಿರುವ ರಾಮುಲು ಅಲ್ಲಿಂದಲೂ ಸ್ಪರ್ಧಿಸಲು ಬಯಸಿದ್ದಾರೆ. ಗದಗ ಜಿಲ್ಲೆಯಲ್ಲಿ ಸ್ಪರ್ಧಿಸುವುದರಿಂದ ಪಕ್ಕದ ಹಾವೇರಿ, ಧಾರವಾಡ, ಬಾಗಲಕೋಟೆ ಜಿಲ್ಲೆಗಳಲ್ಲೂ ಪ್ರಭಾವ ಬೀರಬಹುದು ಎಂಬ ಆಲೋಚನೆ ರಾಮುಲು ಅವರದ್ದು ಎನ್ನಲಾಗಿದೆ.
ಅಲ್ಲದೆ, ಸಹೋದರಿ ಸಂಸದೆ ಜೋಳದರಾಶಿ ಶಾಂತಾ ಚಿತ್ರದುರ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ನಿರೀಕ್ಷೆಯಿದೆ. ರಾಯಚೂರು ಸಂಸದ ಸಣ್ಣ ಫಕೀರಪ್ಪ ಅವರು ರಾಯಚೂರು ಜಿಲ್ಲೆಯಿಂದ ಕಣಕ್ಕಿಳಿಯುವ ಸಂಭವ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ನಾಲ್ವರು ಮುಖಂಡರು ಪ್ರತ್ಯೇಕವಾಗಿ ಒಂದೊಂದು ಜಿಲ್ಲೆಯಲ್ಲಿ ಕಣಕ್ಕಿಳಿಯುವುದರಿಂದ ಆ ಜಿಲ್ಲೆಯ ಇತರ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಭಾವ ಬೀರಲು ಸಾಧ್ಯ ಎಂಬ ಲೆಕ್ಕಾಚಾರವೂ ಇದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗ ಕ್ಷೇತ್ರದ ಬಿಜೆಪಿ ಶಾಸಕ ಈಶಣ್ಣ ಗುಲಗಣ್ಣವರ್ ಅವರು ಶೀಘ್ರದಲ್ಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಸಂಭವವಿದೆ.
ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವುದರಿಂದ ಹೇಗಿದ್ದರೂ ಈಶಣ್ಣ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಹೀಗಾಗಿ ಅವರ ಪುತ್ರ ನವೀನ್ ಗುಲಗಣ್ಣವರ್ ಸ್ಪರ್ಧಿಸಲು ಆಸಕ್ತಿ ತೋರಿದ್ದು, ಗಾಲಿ ಜನಾರ್ದನ ರೆಡ್ಡಿ ಅವರನ್ನು ಜೈಲಿನಲ್ಲಿ ಭೇಟಿ ಮಾಡಿ ಬಂದಿದ್ದರು. ಬಿಎಸ್ಆರ್ ಕಾಂಗ್ರೆಸ್ನಿಂದ ನವೀನ್ಗೆ ಟಿಕೆಟ್ ನೀಡುವುದು ಬಹುತೇಕ ಖಾತ್ರಿಯಾಗಿದೆ ಎಂದು ತಿಳಿದು ಬಂದಿದೆ.












Click it and Unblock the Notifications