ಕುಕ್ಕೆ:ಬ್ರಾಹ್ಮಣರ ಎಂಜಲೆಲೆಯ ಮೇಲೆ ಮಡೆಸ್ನಾನ ನಿಷೇಧ
ಇದರ ಬದಲು ದೇವರ ನೈವೇದ್ಯ ಹಾಕಲಾದ ಎಲೆಗಳ ಮೇಲೆ ಭಕ್ತಾದಿಗಳು ಉರುಳುವ ಪದ್ದತಿಯನ್ನು ಅಳವಡಿಸಿಕೊಳ್ಳಲಿ. ಗರ್ಭಗುಡಿಯಲ್ಲಿ ದೇವರಿಗೆ ಅನ್ನವನ್ನು ನೈವೇದ್ಯ ನೀಡಿ ನಂತರ ನೈವೇದ್ಯವನ್ನು ದೇವಾಲಯದಲ್ಲಿ ಆವರಣದಲ್ಲಿಟ್ಟು ಭಕ್ತರಿಗೆ ಉರುಳುಸೇವೆ ಮಾಡಲು ಅವಕಾಶ ನೀಡಬಹುದು ಎನ್ನುವ ಸಲಹೆಯನ್ನು ಕೋರ್ಟ್ ಸರಕಾರಕ್ಕೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ, ಮೇಲು ಜಾತಿಯ ಜನರು ತಿಂದುಬಿಟ್ಟ ಊಟದ ಮೇಲೆ ಕೆಳ ವರ್ಗಗಳ ಜನರು ಉರುಳುವ ಆಚರಣೆ ಸಾಮಾಜಿಕವಾಗಿ ಕಳವಳ ಮೂಡಿಸುವಂತಹದ್ದು. ಅದನ್ನು ಕೋರ್ಟ್ ಒಪ್ಪಿಕೊಳ್ಳುವುದಿಲ್ಲ. ಮೇಲ್ವರ್ಗದ ಜನರೇ ಕೆಳ ವರ್ಗದ ಜನರು ತಿಂದುಬಿಟ್ಟ ಊಟದ ಮೇಲೆ ಏಕೆ ಉರುಳಬಾರದು ಎಂದು ಪ್ರಶ್ನಿಸಿತು.
ಮಡೆಸ್ನಾನ ಪದ್ಧತಿ ನಿಷೇಧಿಸಬೇಕು ಎಂದು ಕೋರಿ ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಅನ್ನದ ಮೇಲೆ ಉರುಳುವ ಹರಕೆ ಸಂಪೂರ್ಣ ಸ್ವಯಂಪ್ರೇರಿತವಾಗಿರಲಿ ಎಂದು ನಿರ್ದೇಶನ ನೀಡಿದೆ.
ಮಡೆಸ್ನಾನದಲ್ಲಿ ಎಲ್ಲ ಸಮುದಾಯದವರೂ ಪಾಲ್ಗೊಳ್ಳುತ್ತಾರೆ. ಇದನ್ನು ಆಚರಿಸುವಂತೆ ಯಾರ ಮೇಲೂ ಒತ್ತಡ ಹೇರುವುದಿಲ್ಲ. ಸರ್ಕಾರ ಎಂದೂ ಜಾತಿ ಅಥವಾ ಪಂಕ್ತಿ ಭೇದಕ್ಕೆ ಉತ್ತೇಜನ ನೀಡುವುದಿಲ್ಲ.
ಆದರೆ, ಮಡೆಸ್ನಾನ ಧಾರ್ಮಿಕ ನಂಬಿಕೆಯ ವಿಷಯವಾಗಿದ್ದು, ಜನರು ಸ್ವಯಂಪ್ರೇರಿತರಾಗಿ ಕೈಗೊಳ್ಳುತ್ತಿರುವ ಈ ಆಚರಣೆಯನ್ನು ನಿಷೇಧಿಸಲು ಸಾಧ್ಯವಿಲ್ಲ. ಹೀಗಾಗಿ, ಮಡೆಸಾನ್ನವನ್ನು ಬದಲಾದ ಸ್ವರೂಪ ದಲ್ಲಿ ಮುಂದುವರಿಸಲು ಅವಕಾಶ ನೀಡುವುದು ಸೂಕ್ತ ಎಂಬುದು ಸರ್ಕಾರದ ಭಾವನೆ ಎಂದು ಸರಕಾರ ಪರ ವಕೀಲರು ವಾದ ಮಂಡಿಸಿದರು.
ಇದು ಜನರ ನಂಬಿಕೆಯ ಪ್ರಶ್ನೆಯಾಗಿದ್ದು, ಜನರು ಸ್ವಯಂಪ್ರೇರಣೆಯಿಂದ ಪ್ರಜ್ಞಾಪೂರ್ವಕವಾಗಿ ಆಚರಣೆ ಮಾಡುತ್ತಿರುವುದರಿಂದ ಅದನ್ನು ನಿಷೇಧ ಮಾಡುವಂತೆ ಆದೇಶಿಸಲಾಗದು. ಆದರೆ, ಜನರೇ ಪದ್ದತಿಯನ್ನು ನಿಧಾನವಾಗಿ ಕೈಬಿಡಬೇಕು. ಹಾಗಾಗಿ ಮಡೆಸ್ನಾನ ಪದ್ದತಿಯನ್ನು ರೂಪಾಂತರಗೊಳಿಸಿ ಆಚರಿಸಲಿ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.