ವಿಜಯ್ ಮಲ್ಯ ಮಾತುಕತೆಗೆ ಕುಂತ್ರು ನೋಡಪ್ಪ

ನಾಗರಿಕ ವಿಮಾನಯಾನ ಕಾರ್ಯದರ್ಶಿ ಕೆ.ಎನ್. ಶ್ರೀವಾಸ್ತವ್ ಅವರನ್ನು ಭೇಟಿ ಮಾಡಿದ ಕಿಂಗ್ಫಿಷರ್ ಸಂಸ್ಥೆಯ ಅಧ್ಯಕ್ಷ ವಿಜಯ್ಮಲ್ಯ ಶುಭ ಸುದ್ದಿಯೊಂದಿಗೆ ಹಿಂತಿರುಗುತ್ತಾರೆ ಎಂಬ ನಂಬಿಕೆಯಲ್ಲಿ ವಿಮಾನಯಾನ ಸಂಸ್ಥೆ ಸಿಬ್ಬಂದಿ ಕಾದಿದ್ದಾರೆ.
ಸಿಬ್ಬಂದಿಗೆ ಸಂಬಳ ನೀಡುವ ಭರವಸೆಯನ್ನೂ ನೀಡದೆ ಎಫ್ 1 ರೇಸ್ ಬಗ್ಗೆ ತಲೆಕೆಡಿಸಿಕೊಂಡು ಮಲ್ಯ ಓಡಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಪ್ರತಿಯಾಗಿ ಮಂಗಳವಾರ(ಅ.30) ವಿಮಾನಯಾನ ಇಲಾಖೆ ಜೊತೆ ಮಾತುಕತೆ ನಡೆಸಿದ್ದಾರೆ.
ಕಿಂಗ್ಫಿಶರ್ ವಿಮಾನ ಸಂಸ್ಥೆ ಎಲ್ಲ ಕಷ್ಟಗಳನ್ನು ದಾಟಿ ಹೊರಬರಲಿದೆ. ಸಂಸ್ಥೆಯ ಪುನಶ್ಚೇತನ, ಪುನರ್ ಆರಂಭ ಯೋಜನೆಯಿಂದ ವಿಮಾನಯಾನ ಕ್ಷೇತ್ರಕ್ಕೆ ಬಲ ಬರಲಿದೆ ಎಂದು ಇಲಾಖೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ಮಲ್ಯ ಹೇಳಿದ್ದಾರೆ.
ವಿಜಯ್ ಮಲ್ಯ ಅವರು ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಮುಖ್ಯಸ್ಥ ವಿ.ಪಿ ಅಗ್ರವಾಲ್ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಕಿಂಗ್ಫಿಶರ್ ವಿಮಾನಯಾನ ಸಂಸ್ಥೆ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಿಂದ 293 ಕೋಟಿ ರು ಸಾಲ ಪಡೆದಿದೆ. ಕೋಲ್ಕತಾ ಹಾಗೂ ಚೆನ್ನೈ ವಿಮಾನ ನಿಲ್ದಾಣದಲ್ಲಿ ಹೊಂದಿರುವ ಬಿಡಾರ(ಹ್ಯಾಂಗರ್)ಗಳನ್ನು ಖಾಲಿ ಮಾಡುವಂತೆ ಅಗರವಾಲ್ ಸೂಚಿಸಿದ್ದರು.
ಕಿಂಗ್ಫಿಷರ್ ಸಂಸ್ಥೆ ನಷ್ಟ ಭರಿಸಲು ಇತರೆ ಪಿತ್ರಾರ್ಜಿತ ಆಸ್ತಿ ಮಾರುವುದಿಲ್ಲ ಎಂದು ಅ.28 ರಂದು ವಿಜಯ್ ಮಲ್ಯ ಘೋಷಿಸಿದ್ದರು.
'ನನ್ನ ಮನೆತನದ ವ್ಯಾಪಾರ, ನನ್ನ ಕುಟುಂಬದ ಆಸ್ತಿ ಮತ್ತು ಅದರ ಷೇರುದಾರರ ಹಿತಾಸಕ್ತಿ ಕಾಯುವ ಜವಾಬ್ದಾರಿಯನ್ನು ನಾನು ನಿಭಾಯಿಸಬೇಕಾಗಿದೆ. ಆದ್ದರಿಂದ ನಾನು ಯಾವುದೇ ಒತ್ತಡಕ್ಕೂ ಒಳಗಾಗಲು ಬಯಸುವುದಿಲ್ಲ' ಎಂದು ಅವರು ಹೇಳಿದ್ದರು.
ಈ ವರ್ಷದ ಡಿಸೆಂಬರೊಳಗೆ ನಾಲ್ಕು ತಿಂಗಳ ಸಂಬಳವನ್ನು ಎಲ್ಲ ಸಿಬ್ಬಂದಿಗಳಿಗೆ ನೀಡುವುದಾಗಿ ಅ.25 ರಂದು ಕಿಂಗ್ ಫಿಷರ್ ಸಂಸ್ಥೆ ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಕಿಂಗ್ ಫಿಷರ್ ವಿಮಾನಯಾನ ಸಂಸ್ಥೆ ತನ್ನ 4000 ಉದ್ಯೋಗಿಗಳ ಪೈಕಿ 2000 ಉದ್ಯೋಗಿಗಳಿಗೆ ಈ ವರ್ಷದ ಮಾರ್ಚ್ ತಿಂಗಳಿನ ತನಕ ಸಂಬಳ ನೀಡಿದೆ. ನಂತರ ಯಾರೊಬ್ಬರಿಗೂ ಸಂಬಳ ನೀಡಿರಲಿಲ್ಲ.
ಪೈಲಟ್ ಗಳ ಮುಷ್ಕರ, ವಿಮಾನ ಹಾರಾಟ ರದ್ದು, ವಿಮಾನಯಾನ ಸಂಸ್ಥೆ ಉಳಿಸಲು ಇತರೆ ಆಸ್ತಿ ಮಾರಾಟ ಮುಂತಾದ ಕಷ್ಟಕರ ಪರಿಸ್ಥಿತಿಯನ್ನು ಮಲ್ಯ ಎದುರಿಸಿದ್ದಾರೆ.
ಕಿಂಗ್ ಫಿಷರ್ ಸಂಸ್ಥೆ ಸುಮಾರು 7 ಸಾವಿರ ಕೋಟಿಗೂ ಅಧಿಕ ಸಾಲ ಹೊಂದಿದೆ. ಬ್ಯಾಂಕು ಗಳ ಅಂದಾಜಿನ ಪ್ರಕಾರ 'ಕಿಂಗ್ ಫಿಷರ್' ಬ್ರಾಂಡ್ ಮೌಲ್ಯ ಸುಮಾರು 4,100 ಕೋಟಿ ಇದೆ. ವಿಜಯ್ ಮಲ್ಯ ಸಂಸ್ಥೆ ವೈಯಕ್ತಿಕ ಗ್ಯಾರಂಟಿಯಾಗಿ 248.97 ಕೋಟಿ ರು ತೂಗುತ್ತಿದ್ದಾರೆ.












Click it and Unblock the Notifications