ಇದು ಅಧಿಕೃತ- ಒಲ್ಲದ ಮನಸ್ಸಿಂದಲೇ ಕೃಷ್ಣ 'ತ್ಯಾಗಪತ್ರ'

ಕರ್ನಾಟಕದಲ್ಲಿ KPCC ದುಃಸ್ಥಿತಿಯನ್ನು ನೆನೆದೇ ರಾಜ್ಯ ರಾಜಕೀಯಕ್ಕೆ ಮರಳಲು ಸುತರಾಂ ಇಷ್ಟವಿಲ್ಲದ ಕೃಷ್ಣ ಅನಿವಾರ್ಯವಾಗಿ ರಾಜೀನಾಮೆ ಒಗಾಯಿಸಿದ್ದಾರೆ. ಹಾಗೆ ನೋಡಿದರೆ ಕಾಂಗ್ರೆಸ್ಸಿನಲ್ಲಿ ಹೈಕಮಾಂಡ್ ಮುಂದೆ ಎಲ್ಲವೂ ಕುರಿಮಂದೆಯೇ. ಹೈಕಮಾಂಡ್ ಆಜ್ಞೆಗೆ ಎಲ್ಲರೂ ತಲೆಬಾಗಲೇಬೇಕು.
ಪರಿಸ್ಥಿತಿ ಹೀಗಿರುವಾಗ ರಾಜೀನಾಮೆ ಸಲ್ಲಿಸುವಂತೆ ಪ್ರಧಾನಿ ಕಚೇರಿ ತಮಗೆ ಸೂಚಿಸುತ್ತದೆ ಎಂಬುದು ಸ್ವತಃ ಕೃಷ್ಣ ಅವರಿಗೇ ಕೊನೆಯ ಕ್ಷಣದವರೆಗೂ ತಿಳಿದಿರಲಿಲ್ಲ. ಇದನ್ನು ದೃಢಪಡಿಸುವಂತೆ ವಿದೇಶಾಂಗ ಸಚಿವರ ದಿನಚರಿ ಪುಸ್ತಕ ತೆರೆದು ನೋಡಿದರೆ ಎಲ್ಲವೂ ಜಗಜ್ಜಾಹೀರಾಗುತ್ತದೆ.
ಏಕೆಂದರೆ ಈ ಹಿಂದೆಯೇ ನಿಗದಿಯಾಗಿದ್ದಂತೆ ಮುಂದಿನ ದಿನಗಳಲ್ಲಿ ಅನೇಕ ವಿದೇಶಿ ಗಣ್ಯರು ಭಾರತಕ್ಕೆ ಆಗಮಿಸಲಿದ್ದಾರೆ. ಶಿಷ್ಟಾಚಾರದ ಪ್ರಕಾರ ವಿದೇಶಾಂಗ ಸಚಿವರು ಅವರನ್ನು ಬರಮಾಡಿಕೊಳ್ಳಬೇಕು. ಮತ್ತು ಆ ವಿದೇಶಾಂಗ ಸಚಿವರು ಎಸ್ ಎಂ ಕೃಷ್ಣ ಎಂಬುದು ಆ ಗಣ್ಯರ ಗಮನಕ್ಕೆ ಬಂದಿತ್ತು. ಆದರೆ ಈಗ ಎಲ್ಲವೂ ಏರುಪೇರಾಗಿದೆ.
ಸ್ಪೇನ್ ದೊರೆ ಜಾನ್ ಕಾರ್ಲೊಸ್ 1 ಗುರುವಾರವೇ ದೆಹಲಿಗೆ ಆಗಮಿಸಿದ್ದಾರೆ. ಶುಕ್ರವಾರ ಅವರ ಸಂಗಡ ಇದ್ದಾಗ ಕೃಷ್ಣಗೆ ತಮ್ಮ 'ತ್ಯಾಗಪತ್ರದ' ಸುಳಿವು ದೊರೆತಿರುವುದು. ಇಂದು ದೊರೆ ಜಾನ್ ಸ್ವದೇಶಕ್ಕೆ ವಾಪಸಾಗಲಿದ್ದಾರೆ. ಆದರೆ ಇಂದು ಸ್ವತಃ ಕೃಷ್ಣ ತಮ್ಮ ವಿದೇಶಿ ಅತಿಥಿಯನ್ನು ಬೀಳ್ಕೊಡಲಿದ್ದಾರಾ?
ಇನ್ನು ನಾಳೆ ಭಾನುವಾರ, ಕೇಂದ್ರ ಸಂಪುಟ ಪುನಾರಚನೆ ನಡೆಯಲಿದೆ. ಅದೇ ಘಳಿಗೆಯಲ್ಲಿ ಕೃಷ್ಣ ಅವರ ಆಹ್ವಾನದ ಮೇರೆಗೆ ಬಾಂಗ್ಲಾದ ಮಾಜಿ ಪ್ರಧಾನಿ ಬೇಗಂ ಖಲೀದಾ ಜಿಯಾ ಅವರು ಭಾರತಕ್ಕೆ ಬರಲಿದ್ದಾರೆ. ಪ್ರಧಾನಿ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡುವ ಕಾರ್ಯಕ್ರಮವೂ ಇದೆ. ಆದರೆ ಸಂಪುಟ ಕಲಸರತ್ತಿನಲ್ಲಿ ಈ ಮೂವರೂ ಭಾಗಿಯಾಗುವುದು ಅನಿವಾರ್ಯವಾಗಿರುವುದರಿಂದ ಬೇಗಂ ಖಲೀದಾ ಆತಿಥ್ಯವನ್ನು ಯಾರು ನೋಡಿಕೊಳ್ಳುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.
ಇನ್ನು ನಾಳಿದ್ದು ಸೋಮವಾರ 17 ರಾಷ್ಟ್ರಗಳಿಂದ ವಿದೇಶ ಸಚಿವರು/ ಸಹಾಯಕ ಸಚಿವರು ಪ್ರಾದೇಶಿಕ ಸಹಕಾರ ಬಯಸಿ ದೆಹಲಿಯಲ್ಲಿ ಸಮಾವೇಶಗೊಳ್ಳಲಿದ್ದಾರೆ. ಕೆನಡಾದ ಪ್ರಧಾನಿ ಸ್ಟೀಫನ್ ಹಾರ್ಪರ್ ನವೆಂಬರ್ 3-9ರವರೆಗೂ ಭಾರತದಲ್ಲಿ ತಂಗಲಿದ್ದಾರೆ. ಆದರೂ, ಅತಿಥಿ ಕೃಷ್ಣ ಅವರು ತಮ್ಮ ಸ್ಥಾನವನ್ನು ಅದಾಗಲೇ ತೊರೆದಿದ್ದಾರೆ.
ಇದನ್ನೆಲ್ಲ ನೋಡಿದರೆ ವಿದೇಶಾಂಗ ಸಚಿವರಾಗಿ ತಮ್ಮ ಸ್ಥಾನ ಅಬಾಧಿತ ಎಂದು ಪರಿಗಣಿಸಿಯೇ ಕೃಷ್ಣ ಇವರಿಗೆಲ್ಲ ಆಹ್ವಾನ ನೀಡಿದ್ದರು ಎಂಬುದು ಗಮನಾರ್ಹ. ಆದರೆ ಭಾರತದ ವಿದೇಶಾಂಗ ಸಚಿವಾಲಯದಲ್ಲಿ ಇಬ್ಬರು ಸಹಾಯಕ ಸಚಿವರು ಇದ್ದಾರೆ ಎಂಬುದೂ ಗಮನಾರ್ಹವೇ.












Click it and Unblock the Notifications